ಶಿಕ್ಷಣ ರಾಷ್ಟ್ರೀಯ ಸಂಪತ್ತು; ಸಮಾನ ಹಂಚಿಕೆ ಅಗತ್ಯ: ನ್ಯಾ| ಅಬ್ದುಲ್ ನಝೀರ್
ಮಂಗಳೂರು ವಿಶ್ವವಿದ್ಯಾನಿಲಯದ 40ನೇ ಘಟಿಕೋತ್ಸವ
Team Udayavani, Apr 24, 2022, 5:40 AM IST
ಮಂಗಳೂರು: ಶಿಕ್ಷಣ ರಾಷ್ಟ್ರೀಯ ಸಂಪತ್ತು. ಸಮಾನತವಾದಿ ಸಮಾಜ ನಿರ್ಮಾಣಕ್ಕೆ ಇದರ ಸಮಾನ ಹಂಚಿಕೆ ಅತ್ಯಗತ್ಯ ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಜಸ್ಟಿಸ್ ಎಸ್. ಅಬ್ದುಲ್ ನಝೀರ್ ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಮಂಗಳಾ ಸಭಾಂಗಣದಲ್ಲಿ ಶನಿವಾರ ಜರಗಿದ 40ನೇ ವಾರ್ಷಿಕ ಘಟಿ ಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಘಟಿಕೋತ್ಸವ ಭಾಷಣ ಮಾಡಿದರು.
ಶಿಕ್ಷಣ ಮತ್ತು ಪ್ರಜಾಪ್ರಭುತ್ವ
ಶಿಕ್ಷಣ ಮತ್ತು ಪ್ರಜಾಪ್ರಭುತ್ವ ಗಾಢ ವಾಗಿ ಬೆಸೆದುಕೊಂಡಿವೆ. ಪ್ರಜಾಪ್ರಭುತ್ವ ಮೌಲ್ಯಗಳ ಸುಸ್ಥಿರತೆಯಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದು. ಶಿಕ್ಷಣವಿಲ್ಲದೆ ಪ್ರಜಾಪ್ರಭುತ್ವವು ಹೇಗೆ ಪರಿಣಾಮ ಕಾರಿಯಾಗದೋ ಹಾಗೆಯೇ ಪ್ರಜಾ ಪ್ರಭುತ್ವವಿಲ್ಲದ ಶಿಕ್ಷಣ ಅರ್ಥ ಕಳೆದುಕೊಳ್ಳುತ್ತದೆ. ಶಿಕ್ಷಣ ರಹಿತವಾದ ಪ್ರಜಾಪ್ರಭುತ್ವ ಸೀಮಿತ ಪ್ರಸ್ತುತತೆ ಮತ್ತು ಪರಿಣಾಮ ಹೊಂದಿರುತ್ತದೆ. ಪ್ರಜಾಪ್ರಭುತ್ವ ಜನತೆಗೆ ಸ್ವಾತಂತ್ರ್ಯವನ್ನು ನೀಡುತ್ತದೆ. ಪ್ರಜಾ ಪ್ರಭುತ್ವವಿಲ್ಲದ ಶಿಕ್ಷಣ ಅರ್ಥ ಕಳೆದುಕೊಳ್ಳುತ್ತದೆ. ಶಿಕ್ಷಣ ಪ್ರಜೆಗಳಿಗೆ ತಮ್ಮ ಹಕ್ಕು ಮತ್ತು ಕರ್ತವ್ಯದ ಅರಿವು ಮೂಡಿಸುತ್ತದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಶಿಕ್ಷಣ ದಲ್ಲಿ ಪ್ರಾಥಮಿಕ ಹಂತದಲ್ಲೇ ಅಳವಡಿಸ ಬೇಕು ಎಂದು ಹೇಳಿದರು.
ಶ್ರೇಷ್ಠ ಭಾರತ ನಿರ್ಮಾಣದ ಗುರಿ: ಗೆಹ್ಲೋಟ್
ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಘಟಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಭಾರತಕ್ಕೆ ವಿಶ್ವ ಗುರುವಿನ ಗೌರವವನ್ನು ಮತ್ತೆ ದೊರಕಿಸಿ ಕೊಡುವ ನಿಟ್ಟಿನಲ್ಲಿ ನಾವೆಲ್ಲರೂ ದೃಢ ಹೆಜ್ಜೆ ಇಡಬೇಕು. ಇದಕ್ಕೆ ಯುವಕರು ಕೈಜೋಡಿಸಬೇಕು ಎಂದರು.
ಯುವ ಸಮುದಾಯವು ಸಂವಿಧಾನಾತ್ಮಕ ಕರ್ತವ್ಯಗಳನ್ನು ನಿಭಾಯಿಸಿ “ಏಕ ಭಾರತ ಶ್ರೇಷ್ಠ ಭಾರತ’ ನಿರ್ಮಿಸುವ ಗುರಿ ಹೊಂದಬೇಕಿದೆ ಎಂದರು.
ಸ್ವಾವಲಂಬಿ ಬದುಕು ಮತ್ತು ಸ್ವಾವ ಲಂಬಿ ಭಾರತ ನಿರ್ಮಾಣದ ದಿಸೆಯಲ್ಲಿ ಶಿಕ್ಷಣ ಮಹತ್ತರವಾಗಿದೆ. ವಿದ್ಯಾರ್ಥಿಗಳು ಮುಂದೆ ಸಮಾಜ ಮತ್ತು ದೇಶದ ಬಗ್ಗೆ ಗೌರವಾ ದರಗಳನ್ನು ಬೆಳೆಸಿಕೊಂಡು ಆತ್ಮ ಸಂತೃಪ್ತಿಯ ಜತೆಗೆ ಬದುಕು ರೂಪಿಸಿ ಕೊಳ್ಳಬೇಕು ಎಂದು ಕರೆ ನೀಡಿದರು.
ಮಂಗಳೂರು ವಿ.ವಿ. ಘಟಿಕೋತ್ಸ ವದ ಇತಿಹಾಸದಲ್ಲೇ ಕುಲಾಧಿಪತಿ ಗಳಾಗಿರುವ ರಾಜ್ಯಪಾಲರ ಭಾಷಣ ಇದೇ ಪ್ರಥಮವಾಗಿದೆ.
ಕುಲಪತಿ ಪ್ರೊ| ಪಿ.ಎಸ್. ಯಡಪಡಿತ್ತಾಯ ಪ್ರಸ್ತಾವನೆ ಗೈದು, ವಿ.ವಿ. ಹಲವು ವಿಶೇಷತೆ ಮತ್ತು ಹೊಸತನಗಳೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಶಿಕ್ಷಣ ಕ್ಷೇತ್ರ ಮಾತ್ರವಲ್ಲದೆ ಸಾಮಾಜಿಕ ಕ್ಷೇತ್ರದಲೂ ಸೇವೆ ಸಲ್ಲಿಸುತ್ತ ಬರುತ್ತಿದೆ ಎಂದರು.
ಕುಲಸಚಿವ ಪ್ರೊ| ಕಿಶೋರ್ ಕುಮಾರ್, ಪರೀಕ್ಷಾಂಗ ಕುಲಸಚಿವ ಪ್ರೊ| ಪಿ.ಎಲ್. ಧರ್ಮ, ವಿವಿಧ ನಿಕಾಯಗಳ ಮುಖ್ಯಸ್ಥರು, ಸಿಂಡಿ ಕೇಟ್ ಸದಸ್ಯರು ಉಪಸ್ಥಿತರಿ ದ್ದರು. ಪ್ರೊ| ಧನಂಜಯ ಕುಂಬ್ಳೆ ಹಾಗೂ ಪ್ರೊ| ಪ್ರೀತಿ ಕೀರ್ತಿ ನಿರೂಪಿಸಿದರು.
ಗೌರವ ಡಾಕ್ಟರೆಟ್ ಪ್ರದಾನ
ಶಿಕ್ಷಣ ಮತ್ತು ಸಮಾಜ ಸೇವೆಯ ಸಾಧನೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಪತ್ನಿ ಹೇಮಾವತಿ ವೀ. ಹೆಗ್ಗಡೆ, ಸಮಾಜ ಸೇವೆ ಮತ್ತು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಹರಿಕೃಷ್ಣ ಪುನರೂರು ಹಾಗೂ ತುಳು ನಾಟಕ-ಸಿನೆಮಾ ಕ್ಷೇತ್ರದ ಸಾಧನೆಗಾಗಿ ದೇವದಾಸ್ ಕಾಪಿಕಾಡ್ ಅವರಿಗೆ ರಾಜ್ಯಪಾಲರು ಗೌರವ ಡಾಕ್ಟರೆಟ್ ಪ್ರದಾನ ಮಾಡಿದರು.
ಶಿಕ್ಷಣ ಮತ್ತು ಪ್ರತಿನಿಧಿ ಆಯ್ಕೆ
ಪ್ರಜಾಪ್ರಭುತ್ವ ದೇಶದಲ್ಲಿ ಜನರು ಗುಣಮಟ್ಟದ ಜೀವನ ಮತ್ತು ಸಮಗ್ರ ಅಭಿವೃದ್ಧಿ ಅವಕಾಶಗಳಿಗಾಗಿ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಪ್ರತಿನಿಧಿಗಳ ಗುಣಮಟ್ಟವು ಅವರಿಗೆ ಮತ ನೀಡುವ ಜನರ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಅದುದರಿಂದ ಸಮಸ್ಯೆಗಳ ಮೂಲ ಕಾರಣ ಹಾಗೂ ಪರಿಹಾರ ಮತದಾರರಲ್ಲಿಯೇ ಇದೆ. ತಮ್ಮ ನಾಯಕರನ್ನು ಆಯ್ಕೆ ಮಾಡಲು ಅವರು ಸರಿಯಾದ ಶಿಕ್ಷಣವನ್ನು ಹೊಂದಿರಬೇಕು ಎಂದು ನ್ಯಾ| ಅಬ್ದುಲ್ ನಝೀರ್ ಅಭಿಪ್ರಾಯಪಟ್ಟರು.
ಪಿಎಚ್ಡಿ, ಚಿನ್ನದ ಪದಕ, ನಗದು ಪುರಸ್ಕಾರ
ಘಟಿಕೋತ್ಸವದಲ್ಲಿ 70 ಮಹಿಳೆಯರು ಹಾಗೂ 83 ಪುರುಷರು ಸೇರಿದಂತೆ 153 ಮಂದಿಗೆ ಪಿಎಚ್ಡಿ ಪದವಿ, 52 ಮಂದಿಗೆ ಚಿನ್ನದ ಪದಕ ಮತ್ತು 57 ನಗದು ಪುರಸ್ಕಾರ ಪಡೆಯುತ್ತಿದ್ದಾರೆ. 16 ಮಂದಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಪಿಎಚ್ಡಿ ಪಡೆಯುತ್ತಿರುವುದು ವಿ.ವಿ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿರುವುದಕ್ಕೆ ನಿದರ್ಶನವಾಗಿದೆ. ವಿವಿಧ ಕೋರ್ಸುಗಳ ಒಟ್ಟು 192 ರ್ಯಾಂಕ್ಗಳು ವಿಜೇತರಾಗಿದ್ದಾರೆ. 69 ಮಂದಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ ಎಂದು ಡಾ| ಪಿ.ಎಸ್. ಯಡಪಡಿತ್ತಾಯ ಹೇಳಿದರು.