ಬಿಜೆಪಿ ಸೇರಿದ ವಾರದೊಳಗೆ ಉದ್ಯಮಿ ಮಂಜುನಾಥ್ ಯೂ ಟರ್ನ್
Team Udayavani, Jan 26, 2021, 3:20 PM IST
ಹುಳಿಯಾರು: ಕಳೆದ ವಾರ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರ ಸಮ್ಮುಖದಲ್ಲಿ ಕುಟುಂಬ ಸಮೇತ ಬಿಜೆಪಿ ಸೇರಿದ್ದ ಹಂದನಕೆರೆ ಹೋಬಳಿ ಬೊಮ್ಮೇನಹಳ್ಳಿಯ ಉದ್ಯಮಿ ಮಂಜುನಾಥ್ ಈಗ ಯೂ ಟರ್ನ್ ಹೊಡೆದಿದ್ದಾರೆ.
ಹಂದನಕೆರೆ ಹೋಬಳಿ ಬೊಮ್ಮೇನಹಳ್ಳಿಯ ಉದ್ಯಮಿ ಮಂಜುನಾಥ್, ತಮ್ಮ ತಾಯಿ ವಿಎಸ್ಎಸ್ಎನ್ ಸದಸ್ಯರಾದ ಶಿವಮ್ಮ ಹಾಗೂ ಪತ್ನಿ ಗ್ರಾಪಂ ಸದಸ್ಯೆ ರಮ್ಯಾ ಅವರೊಂದಿಗೆ ಇತ್ತೀಚೆಗಷ್ಟೆ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ದೊಡ್ಡಎಣ್ಣೇಗೆರೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಕೈ ಜೋಡಿಸುವುದಾಗಿ ಹೇಳಿ ಮಾಧುಸ್ವಾಮಿ ಬೆಂಬಲಿಗರೊಂದಿಗೆ ವಾರದಿಂದ ಇದ್ದ ಮಂಜುನಾಥ್, ಮೀಸಲಾತಿ ಪ್ರಕಟಗೊಂಡ ನಂತರ ನಿಲುವು ಬದಲಾಯಿಸಿ ಜೆಡಿಎಸ್ ತೆಕ್ಕೆಗೆ ಸೇರಿಕೊಂಡಿದ್ದಾರೆ.
ಇದನ್ನೂ ಓದಿ:ಹವ್ಯಾಸಕ್ಕೆ ಅನುಗುಣವಾಗಿ ಖಾತೆ ಹಂಚಿಕೆ ಮಾಡಲಾಗಿದೆ: ಡಿಸಿಎಂ ಲಕ್ಷ್ಮಣ ಸವದಿ
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಾಜಿ ಶಾಸಕ ಸಿ.ಬಿ.ಸುರೇಶ್ಬಾಬು ಅವರೊಂದಿಗೆ ತಮ್ಮ ಪತ್ನಿ ರಮ್ಯಾ ಜತೆ ಮಂಜುನಾಥ್ ಕಾಣಿಸಿಕೊಂಡಿದ್ದಾರೆ. ಮೊದಲ ಅವಧಿಯ ದೊಡ್ಡಎಣ್ಣೇಗೆರೆ ಅಧ್ಯಕ್ಷರ ಮೀಸಲಾತಿ ಬಿಸಿಎಂ ಬಿ ಜಾತಿಗೆ ಮೀಸಲಾಗಿದ್ದು ಜೆಡಿಎಸ್, ಕೆಎಸ್ಕೆ ಬಿಜೆಪಿ ಬಣದಿಂದ ರಮ್ಯಾ ಮಂಜುನಾಥ್ ಅವರಿಗೆ ಅಧ್ಯಕ್ಷ ಸ್ಥಾನದ ಆಫರ್ ಕೊಟ್ಟ ಪರಿಣಾಮ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದೆ.