ಕಾರ್ಮಿಕರ ಸಾಮೂಹಿಕ ವಲಸೆ; ಪಾಲಿಕೆ ಕಾಮಗಾರಿಗಳಿಗೂ ಸಮಸ್ಯೆ!
ಅಭಿವೃದ್ಧಿ ಕಾಮಗಾರಿಗಳಿಗೆ ತಟ್ಟಿದ ಬಿಸಿ
Team Udayavani, May 21, 2020, 5:30 AM IST
ಮಂಗಳೂರು: ಲಾಕ್ಡೌನ್ನಿಂದಾಗಿ ದ.ಕ. ಜಿಲ್ಲೆಯಲ್ಲಿ ನೆಲೆಸಿದ್ದ ಹೊರರಾಜ್ಯ/ಜಿಲ್ಲೆಯ ಸುಮಾರು 35,000ದಷ್ಟು ವಲಸೆ ಕಾರ್ಮಿಕರು ತಮ್ಮೂರಿಗೆ ತೆರಳುತ್ತಿದ್ದಂತೆಯೇ, ನಗರದಲ್ಲಿ ನಡೆಯುವ ವಿವಿಧ ಕಾಮಗಾರಿಗಳಿಗೆ ಕಾರ್ಮಿಕರ ಕೊರತೆ ಎದುರಾಗಿದೆ.
ವಲಸೆ ಕಾರ್ಮಿಕರು ಊರಿಗೆ ತೆರಳಿದ್ದರಿಂದಾಗಿ ನಗರದ ಬೈಕಂಪಾಡಿ, ಯೆಯ್ನಾಡಿ ಸಹಿತ ವಿವಿಧ ಭಾಗಗಳ ಕೈಗಾರಿಕೆಗಳಲ್ಲಿ ಕಾರ್ಮಿಕರ ಸಮಸ್ಯೆ ಎದುರಾಗಿತ್ತು. ಈಗ ಕಾರ್ಮಿಕರ ಕೊರತೆ ನಗರದ ವಿವಿಧ ಕಾಮಗಾರಿಗಳಿಗೂ ತಟ್ಟಿದೆ. ಅದರಲ್ಲಿಯೂ ಮನಪಾ ಕೈಗೊಳ್ಳುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಈ ಬಿಸಿ ಜೋರಾಗಿಯೇ ತಟ್ಟಲಾರಂಭಿಸಿದೆ.
ಕೇಂದ್ರ, ರಾಜ್ಯ ಹಾಗೂ ಮನಪಾ ವತಿಯಿಂದ ನಗರದಲ್ಲಿ ಮಂಜೂರಾಗಿ ಅರ್ಧದಲ್ಲಿರುವ ಕೆಲವು ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ, ಒಳಚರಂಡಿ, ಫುಟ್ಪಾತ್, ಸ್ಮಾರ್ಟ್ಸಿಟಿ ಯೋಜನೆ ಸಹಿತ ಹಲವು ಕಾಮಗಾರಿಗಳನ್ನು ನಡೆಸುತ್ತಿರುವ ಗುತ್ತಿಗೆ ಪಡೆದ ಕಂಪೆನಿಗೆ ಇದೀಗ ಕಾರ್ಮಿಕರ ಸಮಸ್ಯೆ ಎದುರಾಗಿದೆ. ಕಾರ್ಮಿಕರ ಕೊರತೆಯಿಂದ ಕಾಮಗಾರಿ ನಡೆಸಲು ಕಷ್ಟವಾಗುತ್ತಿದೆ ಎಂದು ಗುತ್ತಿಗೆದಾರರು ಇದೀಗ ಜನಪ್ರತಿನಿಧಿಗಳು ಹಾಗೂ ಪಾಲಿಕೆ ಅಧಿಕಾರಿಗಳಲ್ಲಿ ಅಲವತ್ತುಕೊಂಡಿದ್ದಾರೆ.
ನಗರದಲ್ಲಿ ಮಳೆಗಾಲ ನಿಮಿತ್ತ ಕೆಲವೆಡೆ ಚರಂಡಿ ಸಹಿತ ತುರ್ತು ಕಾಮಗಾರಿ ಕೈಗೊಳ್ಳಬೇಕಾಗಿದ್ದು, ಇದಕ್ಕೂ ಕಾರ್ಮಿಕರು ಸಿಗುತ್ತಿಲ್ಲ ಎಂದು ಟೆಂಡರ್ ವಹಿಸಿರುವ ಗುತ್ತಿಗೆದಾರರು ಹೇಳುತ್ತಿದ್ದಾರೆ. ಕಾಮಗಾರಿ ಅರ್ಧದಲ್ಲಿದ್ದು ಬೇಗ ಮುಗಿಸಿಕೊಡಿ ಎಂದು ಸಾರ್ವಜನಿಕರು ಜನಪ್ರತಿನಿಧಿಗಳು, ಪಾಲಿಕೆಯನ್ನು ಒತ್ತಾಯಿಸುತ್ತಿದ್ದಾರೆ. ಆದರೆ, ಕಾರ್ಮಿಕರು ಇಲ್ಲದೆ ಕೆಲಸ ಹೇಗೆ ಮಾಡುವುದು ಎಂಬ ತಲೆಬಿಸಿ ಈಗ ಶುರುವಾಗಿದೆ.
55,000 ವಲಸೆ ಕಾರ್ಮಿಕರು!
ದ.ಕ. ಜಿಲ್ಲಾಡಳಿತದ ಮೂಲಗಳ ಪ್ರಕಾರ, ಜಿಲ್ಲಾದ್ಯಂತ ಉತ್ತರಪ್ರದೇಶ, ಬಿಹಾರ, ರಾಜಸ್ಥಾನ, ಜಾರ್ಖಂಡ್, ಪಶ್ಚಿಮಬಂಗಾಲ ಸಹಿತ ವಿವಿಧ ರಾಜ್ಯಗಳ ಸುಮಾರು 40,000ಕ್ಕೂ ಅಧಿಕ ಕಾರ್ಮಿಕರು ಮತ್ತು ಬಾಗಲಕೋಟೆ, ಗದಗ, ವಿಜಯಪುರ ಸಹಿತ ರಾಜ್ಯಗಳ 25 ಜಿಲ್ಲೆಗಳ 15,000ಕ್ಕೂ ಅಧಿಕ ಮಂದಿ ಜಿಲ್ಲೆಯಲ್ಲಿ ಕಾರ್ಮಿಕರಾಗಿ ವಿವಿಧ ಕ್ಷೇತ್ರದಲ್ಲಿ ದುಡಿಯುತ್ತಿದ್ದರು. ಈ ಪೈಕಿ ಸದ್ಯ 20,000ಕ್ಕೂ ಅಧಿಕ ಹೊರರಾಜ್ಯದ ಕಾರ್ಮಿಕರು, 12,000ಕ್ಕೂ ಅಧಿಕ ರಾಜ್ಯದೊಳಗಿನ ಕಾರ್ಮಿಕರು ಊರಿಗೆ ತೆರಳಿದ್ದಾರೆ. ಇನ್ನೂ ಹಲವು ಸಾವಿರ ಮಂದಿ ಹೊರರಾಜ್ಯ/ಜಿಲ್ಲೆಗೆ ತೆರಳಲು ತುದಿಗಾಲಲ್ಲಿ ನಿಂತಿದ್ದಾರೆ. ಹೀಗಾಗಿ ಕಾರ್ಮಿಕರ ಕೊರತೆ ಜಿಲ್ಲೆಗೆ ಬಹುವಾಗಿ ಕಾಡುವ ಎಲ್ಲ ಸಾಧ್ಯತೆ ಸ್ಪಷ್ಟವಾಗಿದೆ.
ಈ ಮಧ್ಯೆ ಮಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಸಹಿತ ಅಂಗಡಿಗಳಲ್ಲಿ ಕಾರ್ಯನಿರ್ವಹಿಸಲು ಕೂಡ ಕಾರ್ಮಿಕರ ಕೊರತೆ ಎದುರಾಗಿದ್ದು ಇದ ರಿಂದ ವ್ಯಾಪಾರ-ವಹಿವಾಟಿಗೂ ತೊಂದರೆಯಾಗಿದೆ.
ರೈಲಿನ ಸುದ್ದಿ ತಿಳಿದು
ಕೆಲಸ ಬಿಟ್ಟು ತೆರಳಿದರು!
ಕೋವಿಡ್-19 ಮಧ್ಯೆಯೇ ಮಂಗಳೂರಿನಲ್ಲಿ ಮಳೆಗಾಲ ಸಂದರ್ಭದ ನಿರ್ವಹಣೆಗೆ ರಾಜಕಾಲುವೆಯ ಹೂಳೆತ್ತುವ ಕಾಮಗಾರಿ ಆರಂಭಿಸಲಾಗಿತ್ತು. ಜೇಸಿಬಿ ಸಹಿತ ಝಾರ್ಖಂಡ್ನ ಕಾರ್ಮಿಕರಿಂದ ಕೆಲವು ದಿನ ಕಾಮಗಾರಿ ನಡೆಯಿತು. ಇದೇ ವೇಳೆ “ಝಾರ್ಖಂಡ್ಗೆ ರೈಲು ಇದೆ’ ಎಂಬ ಮಾಹಿತಿ ಕಾರ್ಮಿಕರಿಗೆ ಗೊತ್ತಾಗುತ್ತಿ ದ್ದಂತೆ ಅರ್ಧದಲ್ಲಿ ಕೆಲಸ ಬಿಟ್ಟು ಕಾರ್ಮಿಕರು ರೈಲ್ವೇ ನಿಲ್ದಾಣಕ್ಕೆ ಬಂದು ಅಲ್ಲಿಯೇ ಠಿಕಾಣಿ ಹೂಡಿದರು. ಹೀಗಾಗಿ ಮರುದಿನ ರಾಜಕಾಲುವೆಯಲ್ಲಿ ಜೆಸಿಬಿ ಇತ್ತೇ ವಿನಃ ಕಾರ್ಮಿಕರು ಇರಲಿಲ್ಲ.
ಪರ್ಯಾಯವಾಗಿ
ಕಾರ್ಮಿಕರ ಬಳಕೆ
ಸದ್ಯ ಮಂಗಳೂರು ವ್ಯಾಪ್ತಿಯಲ್ಲಿ ಹಲವು ಕಾಮಗಾರಿಗಳು ವಿವಿಧ ಅನುದಾನದಲ್ಲಿ ನಡೆಯುತ್ತಿವೆ. ಟೆಂಡರ್ದಾರರು ಕಾರ್ಮಿಕರ ಕೊರತೆ ಇರುವ ಬಗ್ಗೆ ತಿಳಿಸುತ್ತಿದ್ದಾರೆ. ಹೀಗಾಗಿ ಮುಂದೆ ಕೆಲವು ಕಾಮಗಾರಿಗಳಿಗೆ ಸಮಸ್ಯೆ ಆಗುವ ಸಾಧ್ಯತೆ ಯಿದೆ. ಆದರೆ, ಪಾಲಿಕೆ ವತಿಯಿಂದ ಇದಕ್ಕೆ ಪರ್ಯಾಯ ವಾಗಿ ಇತರ ಕಡೆಯ ಕಾರ್ಮಿಕರನ್ನು ಬಳಸಿಕೊಂಡು ಕಾಮಗಾರಿ ನಡೆಸಲು ಕ್ರಮ ಕೈಗೊಳ್ಳಲಾಗುವುದು.
– ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಆಯುಕ್ತರು, ಮನಪಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Raksha Ramaiah: ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ
World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?
Politics: ಅಮಿತ್ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ
Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ