ವೈದ್ಯಕೀಯ ವಿದ್ಯಾರ್ಥಿಗಳ ಸ್ಟೈಫಂಡ್ ಹೆಚ್ಚಳ ಬಜೆಟ್ನಲ್ಲಿ ಘೋಷಣೆ : ಸಿಎಂ ಭರವಸೆ
Team Udayavani, Dec 11, 2019, 9:58 PM IST
ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹಧನ (ಸ್ಟೈಫಂಡ್) ಹೆಚ್ಚಳ ಮಾಡುವ ಸಂಬಂಧ ಮುಂದಿನ ಬಜೆಟ್ನಲ್ಲಿ ಘೋಷಣೆ ಮಾಡಲಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಉನ್ನತ ಶಿಕ್ಷಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ನೂರು ದಿನಗಳ ಸಾಧನೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈದ್ಯಕೀಯ ವಿದ್ಯಾರ್ಥಿಗಳ ಸ್ಟೈಫಂಡ್ ಹೆಚ್ಚಳ ಮಾಡಬೇಕು ಎಂದು ವಿದ್ಯಾರ್ಥಿಯೊಬ್ಬರು ಸಲಹೆ ನೀಡಿದ್ದಾರೆ. ತತ್ಕ್ಷಣವೇ ಸಾಧ್ಯವಿಲ್ಲ. ಆದರೆ, ಮುಂದಿನ ಬಜೆಟ್ನಲ್ಲಿ ಈ ಸಂಬಂಧ ಅಗತ್ಯ ಘೋಷಣೆ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.
ವಿದೇಶಿ ಮೋಹದಿಂದ ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ನಿರಾಕರಿಸುತ್ತಿದ್ದಾರೆ. ಹೀಗಾಗಿ ನಿವೃತ್ತ ವೈದ್ಯರನ್ನು ಸೇವೆಗೆ ಕರೆಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಯುವಜನತೆಗೆ ತಾಯ್ನಾಡಿನ ಋಣ ತೀರಿಸುವ ಮನೋಭಾವನೆ ಬಂದಾಗ ವ್ಯವಸ್ಥೆ ಸುಧಾರಣೆ ಸಾಧ್ಯ ಎಂದು ಹೇಳಿದರು.
ಜನರ ತೆರಿಗೆ ಹಣದಿಂದ ಸರಕಾರಿ ಕಾಲೇಜುಗಳಲ್ಲಿ ವೈದ್ಯರು ಹಾಗೂ ಎಂಜಿನಿಯರ್ಗಳನ್ನು ಸಿದ್ದಪಡಿಸಲಾಗುತ್ತದೆ. ಬೆಂಗಳೂರಿನಲ್ಲೇ ಕೂತರೆ ಆಗುವುದಿಲ್ಲ. ಹಳ್ಳಿಗಳತ್ತ ತೆರಳಬೇಕು ಮತ್ತು ವ್ಯವಸ್ಥೆ ಸುಧಾರಣೆಯ ನಿಟ್ಟಿನಲ್ಲಿ ವೈದ್ಯರು ಸೇವೆ ಸಲ್ಲಿಸಬೇಕು ಎಂದು ಕಿವಿಮಾತು ಹೇಳಿದರು.
ಉಪಮುಖ್ಯಮಂತ್ರಿ ಡಾ| ಸಿ.ಎನ್ ಅಶ್ವತ್ಥನಾರಾಯಣ ಮಾತನಾಡಿ, ಉನ್ನತ ಶಿಕ್ಷಣದಲ್ಲಿ ಮಹತ್ವದ ಬದಲಾವಣೆ ತರಲು ವಿಷನ್ ಗ್ರೂಪ್ ರಚಿಸಲಾಗಿದೆ. ಮೆಟ್ರಿಕ್ ಅನಂತರದ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನದ ಪಾರದರ್ಶಕ ಮತ್ತು ಕಾಗದ ರಹಿತವಾಗಿಸಲು ಬ್ಲಾಕ್ಚೈನ್ ತಂತ್ರಜ್ಞಾನ ಆಧರಿತ ಇಂಟಗ್ರೇಟೆಡ್ ಸ್ಟೇಟ್ ಸ್ಕಾಲರ್ಶಿಪ್ ಪೋರ್ಟಲ್ ರಚಿಸುತ್ತಿದ್ದೇವೆ ಎಂದರು.
ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ಶಿಲಾನ್ಯಾಸ ಪೂರ್ಣಗೊಂಡಿದ್ದು, ಚಿಕ್ಕಮಗಳೂರು, ಯಾದಗಿರಿ ಹಾಗೂ ಹಾವೇರಿ ಜಿÇÉೆಗಳಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆಯಲಾಗಿದೆ.
ಹೊಸದಾಗಿ ಡೀಪ್ ಜಿನೋಮಿಕ್ಸ್ ಸೆಂಟರ್ ಫಾರ್ ಎಕ್ಸಲೆನ್ಸಿಯನ್ನು ಘೋಷಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ 450 ಹಾಸಿಗೆಯ ಆಸ್ಪತ್ರೆಗೆ ವೈದ್ಯಕೀಯ ಶಿಕ್ಷಣ ಮಂಡಳಿ 100 ಕೋಟಿ ರೂ.ನಷ್ಟು ಆಡಳಿತಾತ್ಮಕ ಅನುಮೋದನೆ ನೀಡಿದೆ. ಕಾರವಾರದಲ್ಲಿ 150 ಕೋಟಿ ರೂ. ವೆಚ್ಚದಲ್ಲಿ 450 ಹಾಸಿಗೆಯ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದು ಹೇಳಿದರು.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಪನ್ಯಾಸಗಳ ವೀಡಿಯೋಗಳು ಹಾಗೂ ಪಠ್ಯಕ್ರಮಗಳಿಗೆ ಪ್ರತ್ಯೇಕ ಡಿಜಿಟಲ್ ವೇದಿಕೆ ಕಲ್ಪಿಸಲಾಗುವುದು. ಭಾಷಾ ಅಲ್ಪಸಂಖ್ಯಾತರ ಹಿತಾಸಕ್ತಿಗಳ ರಕ್ಷಣೆಗಾಗಿ ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ರಾಜ್ಯ ಆಯೋಗ ಸ್ಥಾಪಿಸಲಿದ್ದೇವೆ ಎಂದು ವಿವರಿಸಿದರು.
ಇಲಾಖೆಯ ನೂರು ದಿನಗಳ ಸಾಧನೆಯ ಕಿರುಹೊತ್ತಿಗೆ ಬಿಡುಗಡೆಗೊಳಿಸಲಾಯಿತು. ನಾರಾಯಣ ಹೃದಯಾಲಯ ಮುಖ್ಯಸ್ಥ ಡಾ.ದೇವಿಪ್ರಸಾದ್ ಶೆಟ್ಟಿ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಸಚ್ಚಿದಾನಂದ, ನಿವೃತ್ತ ಐಎಎಸ್ ಅಧಿಕಾರಿ ಎಸ್.ವಿ ರಂಗನಾಥ್, ಇಲಾಖೆಯ ಅಧಿಕಾರಿಗಳಾದ ರಾಜ್ಕುಮಾರ್ ಕತ್ರಿ, ಜಾವೇದ್ ಅಖ್ತರ್, ಬೆಂಗಳೂರು ಕೇಂದ್ರ ವಿವಿ ಕುಲಪತಿ ಪ್ರೊ.ಜಾಫೆಟ್ ಉಪಸ್ಥಿತರಿದ್ದರು.