ಧ್ಯಾನ ರಾಜಯೋಗ ಕರ್ಮಯೋಗ
Team Udayavani, Jun 21, 2020, 11:03 AM IST
ವ್ಯಾಧಿಯ ಮೂಲ ಇರುವುದು ಮನಸ್ಸಿನಲ್ಲಿ. ಇದನ್ನು ಒಬ್ಬ ಯೋಗಗುರುವಾಗಿಯಷ್ಟೇ ಹೇಳುತ್ತಿಲ್ಲ. ವೈದ್ಯರು, ಮನಃಶಾಸ್ತ್ರಜ್ಞರೂ ಇದನ್ನೇ ಹೇಳುತ್ತಾರೆ.
ಶ್ರೀ ರಾಮಚಂದ್ರನಿಗೆ ಅವರ ಗುರು ವಸಿಷ್ಠರು ತಮ್ಮ ಯೋಗವಾಸಿಷ್ಠದ ಮೂಲಕ ಹೇಳಿದ್ದು ಆದಿಜ ವ್ಯಾಧಿಯೆಂದೇ. ಆದಿ ಎಂದರೆ ಮನಸ್ಸು ಎಂಬ ಅರ್ಥ. ವ್ಯಾಧಿಗಳಲ್ಲಿ ಎರಡು. ಅನಾದಿಜ ಹಾಗೂ ಆದಿಜ. ಅನಾದಿಜ ಎಂದರೆ ಸಾಂದರ್ಭಿಕವಾಗಿ ಬರುವ ವ್ಯಾಧಿ (ನೆಗಡಿಯಿಂದ ಹಿಡಿದು ಇಂದಿನ ಕೊರೊನಾ). ಆದಿಜ ಎಂದರೆ ಮನಸ್ಸಿನಲ್ಲಿ ಉಂಟಾಗುವ ವ್ಯತ್ಯಯ, ವೈಪರೀತ್ಯದಿಂದ ಉಂಟಾಗುವ ವ್ಯಾಧಿಗಳು. ಹಾಗೆಂದರೆ ನಮ್ಮ ಮನಸ್ಸಿನ ಮೇಲೆ ಬೀಳುವ ಅಧಿಕ ಒತ್ತಡದ ಪರಿಣಾಮವನ್ನು ನಮ್ಮ ಪ್ರಾಣ (ಪ್ರಾಣಶಕ್ತಿ) ಅನುಭವಿಸುತ್ತದೆ. ಹಾಗಾಗಿಯೇ ಉದ್ವೇಗ, ಕೋಪ ಇತ್ಯಾದಿ ಒತ್ತಡ ಹೆಚ್ಚಾಗಿ ಸಂಧಿವಾತ, ಮಧುಮೇಹ, ಅಲ್ಸರ್, ಆಸ್ತಮಾ, ಬಿಪಿ, ಚರ್ಮ ಅಲರ್ಜಿ, ಮೈಗ್ರೇನ್ನಂಥ ಹಲವು ರೋಗ ಸ್ಥಿತಿಗಳು ಉದ್ಭವಿಸುತ್ತವೆ. ಇವೆಲ್ಲವೂ ಕೇವಲ ದೈಹಿಕ ಕಾಯಿಲೆಗಳಲ್ಲ ; ಬದಲಾಗಿ ಮನೋದೈಹಿಕ ಸಮಸ್ಯೆಗಳು.
ವಿಜ್ಞಾನ ಹೇಳುವುದೇನೆಂದರೆ, ಒತ್ತಡದ ನಿರಂತರ ಸರಣಿ ವ್ಯಾಧಿಯನ್ನು ಹುಟ್ಟು ಹಾಕುತ್ತದೆ. ಇದು ವಂಶವಾಹಿಯಾಗಿಯೂ ಪರಿಣಾಮ ಬೀರುತ್ತದೆ. ಇದಕ್ಕೆ ಮೊದಲು ಗುರಿಯಾಗುವುದು ದುರ್ಬಲ ಅಂಗಗಳು.
ಅದನ್ನು ಪರಿಹರಿಸುವಲ್ಲಿ ಧ್ಯಾನ ಸಹಕಾರಿ. ಮನಸ್ಸಿನ ನಿಯಂತ್ರಣಕ್ಕೆ ಧ್ಯಾನ ಒಂದು ರಾಮಬಾಣ. ನಾವು ಧ್ಯಾನವೆಂದರೆ ಅದು ಕೇವಲ ಋಷಿಗಳಿಗೆ, ಮುನಿಗಳಿಗೆ, ದಾರ್ಶನಿಕರಿಗಷ್ಟೇ ಸಿದ್ಧಿಸಿದ್ದು ಎಂದುಕೊಳ್ಳುತ್ತೇವೆ. ಖಂಡಿತಾ ಅಲ್ಲ, ಯಾರು ಬೇಕಾದರೂ ಇದನ್ನು ಅಭ್ಯಾಸ ಮಾಡಬಹುದು. ಧ್ಯಾನ ಬಹಳ ಸರಳವಾದ ಕ್ರಮ.
ಮನಸ್ಸಿನ ಹತೋಟಿಯ ಅಗತ್ಯ ಹಾಗೂ ಮನಸ್ಸಿನ ಸಾಮರ್ಥ್ಯ ಎರಡನ್ನೂ ಶ್ರೀ ರಾಮಕೃಷ್ಣ ಪರಮ ಹಂಸರ ಈ ಕಥೆ ಹೇಳುತ್ತದೆ. ವ್ಯಕ್ತಿ ಯೊಬ್ಬನಿಗೆ ಒಂದು ಭೂತ ಒಲಿಯಿತು.ಅದು ಮಹಾಶಕ್ತಿಶಾಲಿ ಭೂತ. ಕೆಲಸ ಕೊಡುವುದನ್ನು ನಿಲ್ಲಿಸಿದ ಕ್ಷಣ ನಾನು ನಿನ್ನನ್ನು ತಿನ್ನುತ್ತೇನೆ ಎಂಬುದು ಅದರ ಷರತ್ತು. ಒಂದೊಂದೇ ಕೆಲಸ ಹೇಳತೊಡಗಿದ. ಎಲ್ಲವನ್ನೂ ಕ್ಷಣಾರ್ಧದಲ್ಲಿ ಮುಗಿಸುತ್ತಿತ್ತು ಭೂತ. ಇವನಿಗೆ ಸಾಕಾಗಿ ತನ್ನ ಗುರುವಿನಲ್ಲಿ ಓಡೋಡಿ ಬಂದು ಸಮಸ್ಯೆ ವಿವರಿಸಿದ. ಆಗ ಗುರುಗಳು, ಅದಕ್ಕೆ ನಿನ್ನ ಮನೆ ಮುಂದಿನ ತೆಂಗಿನ ಮರ ಹತ್ತಿ ಇಳಿಯುವ ಕೆಲಸ ಕೊಡು ಎಂದರು. ಅತ ಭೂತಕ್ಕೆ ಆ ಕೆಲಸ ಕೊಟ್ಟ. ಅದು ಹತ್ತಿ ಇಳಿಯತೊಡಗಿತು.
ಇದರ ಒಟ್ಟು ಸಾರವೆಂದರೆ ನಮ್ಮ ಮನಸ್ಸನ್ನು ಸದಾ ಕ್ರಿಯಾಶೀಲವಾಗಿರಿಸಬೇಕು. ಅದಕ್ಕೆ ಕೆಲಸ ಕೊಡದಿದ್ದರೆ ಭೂತದಂತೆಯೇ ನಮ್ಮನ್ನೇ ತಿನ್ನುತ್ತದೆ. ಮನಸ್ಸೂ ಸಹ ಮಹಾಶಕ್ತಿಶಾಲಿ ಹಾಗೂ ಸಾಮರ್ಥ್ಯವಿರುವ ಭೂತ. ಅದಕ್ಕೆಂದೇ ಈ ಆಂಗ್ಲ ನಾಣ್ನುಡಿ “ಎ ಐಡಲ್ ಮೈಂಡ್ ಈಸ್ ಡೆವಿಲ್ಸ್ ವರ್ಕ್ಶಾಪ್’.
ಮನಸ್ಸನ್ನು ಒಳ್ಳೆಯ ಕಾರ್ಯದಲ್ಲಿ, ರಚನಾತ್ಮಕ ಚಟು ವಟಿಕೆಯಲ್ಲಿ ತೊಡಗಿಸಲಿಕ್ಕೆ ಸಹಕರಿಸುವುದೇ ಧ್ಯಾನ. ಕೋಪ ನಿಗ್ರಹ, ಒತ್ತಡ ನಿವಾರಣೆಗಿಂತಲೂ ಹೆಚ್ಚಾಗಿ ಮನೋದೈಹಿಕ ಸಮತೋಲನಕ್ಕೆ ಧ್ಯಾನ ಬೇಕು.
ನಮ್ಮ ಮನಸ್ಸು ಬಲಗೊಂಡಷ್ಟೂ ಋಣಾತ್ಮಕ ಭಾವ ಗಳನ್ನು ಪ್ರತಿರೋಧಿಸುತ್ತದೆ. ಆಗ ಮನಸ್ಸು ಸಂತುಲಿತ; ಶಕ್ತಿಪೂರ್ಣ. ಮನಸ್ಸು ಧನಾತ್ಮಕ ಚಟುವಟಕೆಯಲ್ಲಿ ಭಾಗಿಯಾದಷ್ಟು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಧ್ಯಾನ ಮಾಡುವಾಗ ನಮ್ಮನ್ನು ಆವರಿಸಿಕೊಳ್ಳುವ ಪೂರ್ವ ಭಾವನಾತ್ಮಕ ಸಂಸ್ಕಾರ ಸಂಗ್ರಹಗಳಿಗೆ (ಹಳೆಯ ಸಂಗತಿ, ನೆನಪು ಇತ್ಯಾದಿ ಧನಾತ್ಮಕ, ಋಣಾತ್ಮಕ ಭಾವನೆ ಗಳು) ನಮ್ಮನ್ನು ಪುನರ್ ಸಂಯೋಜಿಸಿಕೊಳ್ಳದೆ ನಿರ್ಭಾವುಕ ಸ್ಥಿತಿಯಲ್ಲಿ ಅದನ್ನು ಮೀರಿದರೆ ಸಿಗುವುದೆ ಆನಂದ. ಅದೇ ನಮ್ಮ ಶಾರೀರಕ ಆರೋಗ್ಯದ ಬುನಾದಿ. ಮನಸ್ಸು ಸ್ವಸ್ಥವಾಗಿದ್ದರೆ ದೇಹವೂ ಸದೃಢ.
ಯೋಗವೆಂಬುದೇ ರೋಗ ನಿರೋಧಕ ಶಕ್ತಿಯ ಬುನಾದಿ. ಧ್ಯಾನವೆಂಬುದು ಅದರ ಬುನಾದಿ.
– ಡಾ| ಕೆ. ರಾಘವೇಂದ್ರ ಪೈ, ಮೈಸೂರು, ಯೋಗ ಗುರು