ಬಿಜೆಪಿ ನಾಯಕರಿಗೆ ಮೋದಿ ಬಾಗಿಲೇ ತೆರೆಯಲಿಲ್ಲ
Team Udayavani, Jan 4, 2020, 3:10 AM IST
ಬೆಂಗಳೂರು: ರಾಜ್ಯದ ಭಾಗ್ಯದ ಬಾಗಿಲು ತೆಗೆಯುತ್ತೇವೆ ಎಂದಿದ್ದ ಬಿಜೆಪಿ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿಯವರ ಮನೆಯ ಬಾಗಿಲೇ ತೆರೆಯಲಿಲ್ಲ. 25 ಸಂಸದರನ್ನು ಕರೆದುಕೊಂಡು ರಾಜ್ಯಕ್ಕೆ ಬರಬೇಕಾದ ಪರಿಹಾರವನ್ನು ಪಡೆಯಲು ಸಾಧ್ಯವಾಗದ ಯಡಿಯೂರಪ್ಪ ದುರ್ಬಲ ಮುಖ್ಯಮಂತ್ರಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಮೋದಿ ರಾಜ್ಯ ಪ್ರವಾಸದ ಹಿನ್ನೆಲೆಯಲ್ಲಿ ಶುಕ್ರವಾರ ಕಾವೇರಿ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ, ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರ ವಿರುದ್ಧ ಟೀಕಾಪ್ರಹಾರ ನಡೆಸಿದ ಪರಿ ಹೀಗಿತ್ತು:
* ಪ್ರಧಾನಿ ಎದುರು ರಾಜ್ಯದ ಸಮಸ್ಯೆಗಳ ಬಗ್ಗೆ ಮಾತನಾಡಲು, ಪರಿಹಾರ ಕೇಳಲು ಬಿಜೆಪಿಯ ಸಂಸದರಿಗಾಗಲಿ, ಮುಖ್ಯಮಂತ್ರಿಗಾಗಲಿ ಧೈರ್ಯವೇ ಇಲ್ಲ.
* ಯಡಿಯೂರಪ್ಪ ಗೋಗರೆದರೂ ಮೋದಿ ಆ ಬಗ್ಗೆ ಗಮನ ಹರಿಸದಿರುವುದನ್ನು ನೋಡಿದರೆ, ಕರ್ನಾಟಕದ ಬಗ್ಗೆ ಮೋದಿಗೆ ಕಾಳಜಿ ಇಲ್ಲ ಎನ್ನುವುದು ಸ್ಪಷ್ಟ.
* ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳೆಲ್ಲ ಮೋದಿ ಹೆಸರಿನಲ್ಲಿ ಮತಯಾಚಿಸಿ ಗೆದ್ದಿದ್ದಾರೆ. ರಾಜ್ಯದ ಜನರಿಂದ ಗೆಲುವು ಸಾಧಿಸಿದ ಬಳಿಕ ಮೋದಿ ನಮ್ಮ ಜನರಿಗೆ ಮೋಸ ಮಾಡಿದ್ದಾರೆ. ಮೋದಿಯವರು ಪ್ರವಾಸದ ನೆಪದಲ್ಲಿ ಕರ್ನಾಟಕಕ್ಕೆ ಬಂದಿದ್ದು, ಅವರ ಆಗಮನವನ್ನು ಸ್ವಾಗತಿಸುತ್ತೇವೆ. ಆದರೆ, ಪ್ರಧಾನಿ ಹುದ್ದೆ ಯಾವ ಪಕ್ಷಕ್ಕೂ ಸೇರಿದ್ದಲ್ಲ. ಅವರು ದೇಶದ 130 ಕೋಟಿ ಜನರಿಗೂ ಸೇರಿದವರು.
* ಹಿಂದೆ ಮನಮೋಹನ್ ಸಿಂಗ್ ಅವರು 2009ರಲ್ಲಿ ಪ್ರಧಾನಿಯಾಗಿದ್ದಾಗ ಕರ್ನಾಟಕದ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸಮೀಕ್ಷೆ ನಡೆಸಿ, ಸ್ಥಳದಲ್ಲಿಯೇ ಮಧ್ಯಂತರ ಪರಿಹಾರ ಘೋಷಿಸಿದ್ದರು. ನಂತರ, ಪೂರ್ಣ ಪ್ರಮಾಣದ ಪರಿಹಾರ ನೀಡಿದ್ದರು.
* ಆದರೆ, ರಾಜ್ಯದಲ್ಲಿ ಈ ಬಾರಿ ಭೀಕರ ಪ್ರವಾಹ ಬಂದಾಗ ಮೋದಿ ರಾಜ್ಯಕ್ಕೆ ಭೇಟಿ ಕೊಡಲಿಲ್ಲ. ರಾಜ್ಯದ 22 ಜಿಲ್ಲೆಗಳ 103 ತಾಲೂಕುಗಳಲ್ಲಿ ಪ್ರವಾಹದಿಂದ ಜನರು ತತ್ತರಿಸಿದ್ದಾರೆ. ಸಣ್ಣಪುಟ್ಟ ವಿಚಾರಗಳಿಗೆ ಟ್ವೀಟ್ ಮಾಡುವ ಮೋದಿ, ಟ್ವೀಟ್ ಮೂಲಕವಾದರೂ ನೆರೆ ಸಂತ್ರಸ್ತರಿಗೆ ಸಾಂತ್ವನ ಹೇಳಬಹುದಿತ್ತು. ಅವರು ಅದನ್ನೂ ಮಾಡಲಿಲ್ಲ. ಮೋದಿ ಜನರ ಕಷ್ಟವನ್ನು ಕೇಳುತ್ತಿಲ್ಲ.
* ರಾಜ್ಯ ಸರ್ಕಾರ 36 ಸಾವಿರ ಕೋಟಿ ರೂ.ನಷ್ಟ ಪರಿಹಾರ ಕೇಳಿದರೆ, ಮೋದಿ ಸರ್ಕಾರ ಮೂರು ತಿಂಗಳ ನಂತರ ಕೊಟ್ಟಿದ್ದು 1,200 ಕೋಟಿ ರೂ.ಮಾತ್ರ. ಅದೂ ಸಹ ಹಳೆಯ ಪರಿಹಾರ.
* ಸೆಪ್ಟೆಂಬರ್ 9ರಂದು ಕರ್ನಾಟಕಕ್ಕೆ ಮೋದಿ ಭೇಟಿ ನೀಡಿದ್ದರು. ಆದರೆ, ಪ್ರವಾಹದತ್ತ ಗಮನ ಹರಿಸಲೇ ಇಲ್ಲ. ಚಂದ್ರಯಾನವನ್ನು ಮೋದಿ ಸಾಬೀತು ಮಾಡಲಿಲ್ಲ. ಅದರಲ್ಲಿಯೂ ಅವರು ವಿಫಲರಾಗಿದ್ದಾರೆ.
* ಚುನಾವಣಾ ಸಂದರ್ಭಗಳಲ್ಲಿ ಕರ್ನಾಟಕದ ಜನರಿಗೆ ನೀಡಿದ ಭರವಸೆಗಳನ್ನು ಮೋದಿ ಒಂದು ಬಾರಿ ನೆನಪಿಸಿಕೊಂಡರೆ ಒಳ್ಳೆಯದು. ತುಮಕೂರಿನಲ್ಲಿ ಫುಡ್ ಕೋರ್ಟ್, ಎಚ್ಎಎಲ್ ಘಟಕ ಸ್ಥಾಪನೆ ಮಾಡುವುದಾಗಿ ಹೇಳಿದ್ದರು. ಹೇಮಾವತಿ-ನೇತ್ರಾವತಿ ನದಿ ಜೋಡಣೆ ಮಾಡುವುದಾಗಿ ಭರವಸೆ ನೀಡಿದ್ದರು. ಯಾವ ಭರವಸೆಯೂ ಈಡೇರಿಲ್ಲ.
* ನಾನು ವಸ್ತುಸ್ಥಿತಿಯನ್ನು ಹೇಳಿದರೆ ಬಿಜೆಪಿಯಲ್ಲಿ ರೇಣುಕಾಚಾರ್ಯ, ಸಿ.ಟಿ.ರವಿ, ಯಡಿಯೂರಪ್ಪ ಎಲ್ಲರೂ ಮುಗಿ ಬೀಳುತ್ತಾರೆ. “ಇದ್ದದ್ದು ಇದ್ದಂಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ’ ಎಂಬ ಹಾಗೆ ಮಾಡುತ್ತಿದ್ದಾರೆ. ಆದರೆ, ಮೋದಿಯವರಿಗೆ ವಾಸ್ತವ ಪರಿಸ್ಥಿತಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಭಾವನಾತ್ಮಕ ವಿಷಯಗಳನ್ನು ಮುಂದೆ ತಂದು, ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
* ಪೌರತ್ವ ಕಾಯ್ದೆ ವಿರೋಧಿಸಿದರೆ ಉತ್ತರ ಪ್ರದೇಶದಲ್ಲಿ ಪ್ರತಿಭಟನಾಕಾರರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದಾರೆ. ಅಂತಹ ಕಾನೂನು ಎಲ್ಲಿದೆ?. ನಾವು ಸಂಸತ್ತನ್ನು ವಿರೋಧಿಸುತ್ತಿಲ್ಲ. ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ ನೀತಿಯನ್ನು ವಿರೋಧಿಸುತ್ತಿದ್ದೇವೆ. ಕಾಂಗ್ರೆಸ್ನವರು ಪ್ರತಿಭಟನೆ ಮಾಡಿದರೆ ಪಾಕಿಸ್ತಾನದ ಪರ ಎನ್ನುತ್ತಾರೆ. ಆದರೆ, ಪಾಕಿಸ್ತಾನ ವಿರುದ್ಧ ಯುದ್ಧ ಮಾಡಿ ಪಾಠ ಕಲಿಸಿದವರು ಇಂದಿರಾಗಾಂಧಿ ಎಂಬುದು ನೆನಪಿರಲಿ.
ಮನವಿಗೆ ಸ್ಪಂದಿಸಲಿಲ್ಲ: ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಮಕ್ಕಳ ಮುಂದೆ ರಾಜಕೀಯ ಭಾಷಣ ಮಾಡುವ ಬದಲು, ಸಿದ್ಧಗಂಗಾ ಶ್ರೀಗಳಿಗೆ “ಭಾರತರತ್ನ’ ನೀಡುತ್ತೇನೆಂದು ಹೇಳಿದ್ದರೆ ಎಲ್ಲರೂ ಖುಷಿ ಪಡುತ್ತಿದ್ದರು. ನಾನು ಮುಖ್ಯಮಂತ್ರಿಯಾಗಿದ್ದಾಗ ಶಿವಕುಮಾರ ಸ್ವಾಮೀಜಿಗೆ “ಭಾರತರತ್ನ’ ನೀಡಿ ಎಂದು ಎರಡು ಬಾರಿ ಮನವಿ ಮಾಡಿದ್ದೆ. ಆದರೂ, ಅವರು ಸ್ಪಂದಿಸಲಿಲ್ಲ. ಮೋದಿ ಮತ್ತೂಂದು ಸುಳ್ಳು ಹೇಳಲು ರಾಜ್ಯಕ್ಕೆ ಬಂದು ಹೋದರು.
ಆರ್ಥಿಕವಾಗಿ ದಿವಾಳಿಯಾಗಿದೆ: ಕೇಂದ್ರ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಹೀಗಾಗಿ, ದೇಶದ ಜಿಡಿಪಿ ವಾಸ್ತವವಾಗಿ 2.5 ಇದೆ. ಅವೈಜ್ಞಾನಿಕ ಜಿಎಸ್ಟಿ, ಡಿಮಾನಿಟೈಜೇಷನ್ನಿಂದಾಗಿ ಉತ್ಪಾದನೆ ಕಡಿಮೆಯಾಗಿದ್ದು, ಜನರ ಕೊಳ್ಳುವ ಶಕ್ತಿ ಕಡಿಮೆಯಾಗಿದೆ. ಬಂಡವಾಳ ಹೂಡಿಕೆ ಇಲ್ಲದೆ ಉದ್ಯೋಗ ಸೃಷ್ಠಿಯಾಗುವುದಿಲ್ಲ. ಬ್ಯಾಂಕ್ಗಳ ಎನ್ಪಿಎ ಹೆಚ್ಚಾಗಿದೆ. ಹೀಗಾಗಿ, ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು ಕಷ್ಟವಿದೆ.
ಇದೆಲ್ಲ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅರ್ಥವಾಗುತ್ತದೆಯೋ, ಇಲ್ಲವೋ ಗೊತ್ತಿಲ್ಲ. 2013ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಆರ್ಥಿಕ ಪರಿಸ್ಥಿತಿ ಸರಿ ಇರಲಿಲ್ಲ. ಮುಖ್ಯಮಂತ್ರಿಯಾಗಿ 1.2 ಲಕ್ಷ ಕೋಟಿ ಬಜೆಟ್ ಮಂಡನೆ ಮಾಡಿದ್ದೆ. ಐದು ವರ್ಷದಲ್ಲಿ ಬಜೆಟ್ ಗಾತ್ರ ಎರಡು ಪಟ್ಟು ಹೆಚ್ಚಳವಾಯಿತು. ಆದರೆ, ಯಾವುದೇ ಯೋಜನೆಗೂ ಹಣಕಾಸಿನ ತೊಂದರೆಯಾಗದಂತೆ ನೋಡಿಕೊಳ್ಳಲಾಗಿತ್ತು. ಬಜೆಟ್ ನಿರ್ವಹಣೆಯಲ್ಲಿ ಈಗ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿರುವುದು ನಮ್ಮ ಸರ್ಕಾರದ ಬಳುವಳಿ.
ಪ್ರತಿಪಕ್ಷ ನಾಯಕರಿಗೆ ಕಾರು ಹಾಗೂ ಸಿಬ್ಬಂದಿ ನೀಡುವುದು ಸ್ಪೀಕರ್ ಅವರ ಕರ್ತವ್ಯ. ಕಾನೂನು ಪ್ರಕಾರ ಅವರು ತಮ್ಮ ಕಾರ್ಯ ನಿರ್ವಹಿಸಬೇಕು. ಆದರೆ, ಅವರು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ.
-ಸಿದ್ದರಾಮಯ್ಯ. ಪ್ರತಿಪಕ್ಷದ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ