ತ್ಯಾಜ್ಯ ಸೇರಿದ ಹಣದ ಕಟ್ಟು ಹುಡುಕಿ ಮರಳಿಸಿದ ಪೌರ ಕಾರ್ಮಿಕರು
Team Udayavani, Nov 3, 2020, 11:35 PM IST
ಪುತ್ತೂರು : ಗಡಿಬಿಡಿಯಲ್ಲಿ ಹಣದ ಕಟ್ಟು ಕಸದ ಡಬ್ಬಿಗೆ ಸೇರಿದ್ದು ವಾರಿಸುದಾರರು ನೀಡಿದ ಮಾಹಿತಿಯಂತೆ ಪೌರ ಕಾರ್ಮಿಕರು ಬನ್ನೂರು ಡಂಪಿಂಗ್ ಯಾರ್ಡ್ನಲ್ಲಿ ಹುಡುಕಾಟ ನಡೆಸಿ ಹಣದ ಕಟ್ಟು ಮರಳಿಸಿದ ವಿದ್ಯಮಾನ ಪುತ್ತೂರಿನಲ್ಲಿ ಸಂಭವಿಸಿದೆ.
ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಯೊಬ್ಬರು ಆಸ್ಪತ್ರೆಗೆ ಪಾವತಿಸಲು ತಂದಿದ್ದ ಹಣದ ಕಟ್ಟೊಂದು ಆಕಸ್ಮಿಕವಾಗಿ ಕಸದ ಬುಟ್ಟಿಗೆ ಸೇರಿತ್ತು. ಕಸದೊಂದಿಗೆ ಮಿಶ್ರಗೊಂಡ ಹಣವು ನಗರಸಭೆ ತ್ಯಾಜ್ಯ ಸಂಗ್ರಾಹಕರ ಮೂಲಕ ಡಂಪಿಂಗ್ ಯಾರ್ಡ್ ಸೇರಿತ್ತು.
ಆಸ್ಪತ್ರೆಗೆ ಹಣ ಪಾವತಿಸಲು ಹೊರಟಾಗ ಹಣದ ಕಟ್ಟು ಕಳೆದುಹೋಗಿರುವುದು ಗಮನಕ್ಕೆ ಬಂದಿದ್ದು ಅದು ಕಸದ ಬುಟ್ಟಿಗೆ ಸೇರಿರಬಹುದೆಂಬ ಸಂಶಯದಿಂದ ನಗರಸಭೆ ಪೌರ ಕಾರ್ಮಿಕರನ್ನು ಸಂಪರ್ಕಿಸಿ ವಿಷಯ ತಿಳಿಸಿದರು. ಪೌರ ಕಾರ್ಮಿಕರಾದ ಯಮುನಪ್ಪ ಮತ್ತು ಸದ್ದಾಂ ಹುಸೇನ್ ಅವರು ಡಂಪಿಂಗ್ ಯಾರ್ಡ್ನಲ್ಲಿ ಪರಿಶೀಲಿಸಿದಾಗ ಕಾಣೆಯಾದ ಹಣದ ಕಟ್ಟು ತ್ಯಾಜ್ಯದೊಂದಿಗೆ ಪತ್ತೆಯಾಯಿತು. ಅವರು ಆ ಬಳಿಕ ವಾರೀಸುದಾರರಿಗೆ ಹಸ್ತಾಂತರಿಸಿದರು.
ವರ್ಷಗಳ ಹಿಂದೆ ಚಿನ್ನಾಭರಣವೂ ಸಿಕ್ಕಿತ್ತು !
ವರ್ಷಗಳ ಹಿಂದೆ ಕಸ ಸಂಗ್ರಾಹಕರು ತ್ಯಾಜ್ಯ ವಿಲೇವಾರಿ ಮಾಡುವ ಸಂದರ್ಭ ಚಿನ್ನಾಭರಣವು ಸಿಕ್ಕಿದ ಘಟನೆ ಒಂದು ವರ್ಷದ ಹಿಂದೆ ನಡೆದಿತ್ತು. ಕೋರ್ಟು ರಸ್ತೆಯಲ್ಲಿ ಅಂಗಡಿಗಳಿಂದ ಕಸವನ್ನು ಸಂಗ್ರಹ ಮಾಡಿ ಬನ್ನೂರು ಡಂಪಿಂಗ್ ಯಾರ್ಡ್ಗೆ ವಿಲೇವಾರಿ ಮಾಡಿದ್ದರು. ಈ ಸಂದರ್ಭ ಚಿನ್ನಾಭರಣ ಮಳಿಗೆಯೊಂದರಿಂದ ಆಭರಣ ಕಸದ ರಾಶಿಯ ಪಾಲಾಗಿತ್ತು. ಚಿನ್ನಾಭರಣ ಮಳಿಗೆಯವರು ಅಧಿಕಾರಿಗಳ ಮೂಲಕ ಮಾಹಿತಿ ನೀಡಿ ಪೌರ ಕಾರ್ಮಿಕರಿಗೆ ತಿಳಿಸಿದರು. ಪೌರ ಕಾರ್ಮಿಕರು ಡಂಪಿಂಗ್ ಯಾರ್ಡ್ನಲ್ಲಿ ಹುಡುಕಾಟ ನಡೆಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ವಾರಿಸುದಾರರಿಗೆ ಹಸ್ತಾಂತರಿಸಿ ಪ್ರಾಮಾಣಿಕ ಮೆರೆದಿದ್ದರು.