ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ, ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ : ರೇಣುಕಾಚಾರ್ಯ
Team Udayavani, Sep 21, 2020, 3:02 PM IST
ಹೊನ್ನಾಳಿ: ರಾಜ ಕಾರಣದಲ್ಲಿ ಯಾರೂ ಸನ್ಯಾಸಿ ಗಳಲ್ಲ ಹಾಗೂ ಸಚಿವ ಸ್ಥಾನ ಕೇಳುವುದು ತಪ್ಪಲ್ಲ. ನಾನು ಎರಡು ಬಾರಿ ದಿಲ್ಲಿಗೆ ಭೇಟಿ ನೀಡಿದ್ದುದು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚಿಸಲೇ ಹೊರತು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಲು ಅಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಾನು ಅಬಕಾರಿ ಸಚಿವನಾಗಿದ್ದಾಗ ಕಳ್ಳಭಟ್ಟಿ, ನಕಲಿ ಮದ್ಯಕ್ಕೆ ಬ್ರೇಕ್ ಹಾಕಿದ್ದೆ. ಈ ಬಾರಿ ಸಚಿವ ಸ್ಥಾನದ ಬಗ್ಗೆ ಪಕ್ಷದ ವರಿಷ್ಠರು ಏನು ನಿರ್ಧಾರ ಕೈಗೊಳ್ಳುತ್ತಾರೋ ಅದಕ್ಕೆ ಬದ್ಧನಾಗಿರುತ್ತೇನೆ. ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಗೆ ಒಂದು ಸಚಿವ ಸ್ಥಾನವನ್ನಾದರೂ ನೀಡಬೇಕೆಂಬುದು ಜಿಲ್ಲೆಯ ಶಾಸಕರ ಆಗ್ರಹ. ಈ ಬಗ್ಗೆ ಸಿಎಂ, ರಾಜ್ಯಾಧ್ಯಕ್ಷರು ಹಾಗೂ ವರಿಷ್ಠರಿಗೆ ಮನವಿ ಮಾಡಿದ್ದೇವೆ ಎಂದರು.
ನಾನು ಸಚಿವಾಕಾಂಕ್ಷಿ: ಬೆಲ್ಲದ
ಧಾರವಾಡ: ಜಿಲ್ಲೆಯಲ್ಲಿ ಶಾಸಕನಾಗಿ ಹಾಗೂ ಪಕ್ಷದ ಜಿಲ್ಲಾ ಧ್ಯಕ್ಷನಾಗಿ ಮಂತ್ರಿಗಿಂತಲೂ ಹೆಚ್ಚಿನ ಕೆಲಸ ಮಾಡುತ್ತಿದ್ದೇನೆ. ಶಾಸಕರಾದ ಎಲ್ಲರೂ ಮಂತ್ರಿ ಸ್ಥಾನದ ಆಸೆ ಹೊಂದಿರುತ್ತಾರೆ. ನನ್ನಲ್ಲೂ ಅಂಥ ಆಸೆಯಿದೆ ಎಂದು ಶಾಸಕ ಅರವಿಂದ ಬೆಲ್ಲದ ಅವರು ಹೇಳಿದರು.