ಬಜೆಟ್ ಗಾತ್ರ 2.50 ಲಕ್ಷ ಕೋಟಿಗೆ ಏರಿಕೆಯಾಗಲಿದೆ : ಶಾಸಕ ನಡಹಳ್ಳಿ
Team Udayavani, Mar 3, 2022, 8:09 PM IST
ಮುದ್ದೇಬಿಹಾಳ: ರಾಜ್ಯ ಸರ್ಕಾರವು ಮಾರ್ಚ 4 ರಂದು ಮಂಡನೆಯಾಗಲಿರುವ ಬಜೆಟ್ನ ಗಾತ್ರ 2.50 ಲಕ್ಷ ಕೋಟಿ ರೂ ದಾಟುವ ನಿರೀಕ್ಷೆ ಇದೆ ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷರೂ ಆಗಿರುವ ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ತಿಳಿಸಿದ್ದಾರೆ.
ಮುದ್ದೇಬಿಹಾಳ ತಾಲೂಕಿನ ಹಿರೇಮುರಾಳ ಗ್ರಾಮದಲ್ಲಿ ಗುರುವಾರ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ವರ್ಷಗಳಲ್ಲಿ ಕೊರೊನಾ ಆರ್ಥಿಕ ಸಂಕಷ್ಟದಿಂದಾಗಿ ಸರ್ಕಾರದ ಬಳಿ ನೌಕರರಿಗೆ ಸಂಬಳಕ್ಕೆ ಹೊರತುಪಡಿಸಿ ಉಳಿದ ಅಭಿವೃದ್ದಿ ಕೆಲಸಕ್ಕೆ ಹಣ ಇಲ್ಲದಂತಾಗಿತ್ತು. ಕಳೆದ ವರ್ಷ ಮಂಡಿಸಿದ್ದ 2.42 ಲಕ್ಷ ಕೋಟಿ ಬಜೆಟ್ನ ಗುರಿ ಈಡೇರಲಿಲ್ಲ. ಆ ಬಜೆಟ್ಟನಲ್ಲಿ 1.70 ಲಕ್ಷ ಕೋಟಿ ಹಣ ಜನರು ಕಟ್ಟುವ ತೆರಿಗೆಯಿಂದ ಬರುವ ನಿರೀಕ್ಷೆ ಇತ್ತು. ಆದರೆ ತೆರಿಗೆ ಸಂಗ್ರಹ ನಿಂತು ಹೋಗಿ ಆಗ ಸಂಗ್ರಹಗೊಂಡಿದ್ದು ಕೇವಲ 79000 ಕೋಟಿ ಮಾತ್ರ. ಆಗ ಸರ್ಕಾರ ನಡೆಸಲು ಅನಿವಾರ್ಯವಾಗಿ 94000 ಕೋಟಿ ರೂ ಸಾಲ ಮಾಡಿ ಸರ್ಕಾರ ನಡೆಸಬೇಕಾಯಿತು. ಜನರು ತೆರಿಗೆ ತುಂಬಿದರೆ ಮಾತ್ರ ಸರ್ಕಾರ ಜನರಿಗೆ ಸೌಲಭ್ಯ ಕೊಡುವುದು ಸಾಧ್ಯವಾಗುತ್ತದೆ ಎನ್ನುವುದನ್ನು ನಾವೆಲ್ಲ ಅರಿತುಕೊಳ್ಳಬೇಕು ಎಂದರು.
ತೆರಿಗೆ ಬರದಿದ್ದರೆ ಸರ್ಕಾರ ನಡೆಸುವುದು ಎಷ್ಟು ಕಷ್ಟವೋ ಹಾಗೆಯೇ ಗ್ರಾಮೀಣ ಭಾಗದಲ್ಲೂ ಜನ ತೆರಿಗೆ ತುಂಬದಿದ್ದರೆ ಪಂಚಾಯಿತಿ ಆಡಳಿತ ನಡೆಸುವುದು, ಮೂಲಭೂತ ಸೌಲಭ್ಯ ಒದಗಿಸುವುದು ಅಷ್ಟೇ ಕಷ್ಟಕರ ಅನ್ನೋದನ್ನು ನಾವು ಅರಿತುಕೊಳ್ಳಬೇಕು ಎಂದರು.
ಇದನ್ನೂ ಓದಿ : ಕುಂದು ಕೊರತೆ ಸಭೆಗೆ ಬಾರದ ತಾಲೂಕು ಪಂಚಾಯತ್ ಇ.ಓ: ಕೂಲಿ ಕಾರ್ಮಿಕರ ಆಕ್ರೋಶ