“ಪರಮ ಸುಖದ ರುಚಿ ನನಗೂ ಲಭಿಸಿತು’
Team Udayavani, Feb 23, 2021, 6:00 AM IST
ನಾಗಾರ್ಜುನನ ಬಗ್ಗೆ ನೀವು ಕೇಳಿರಬಹುದು. ಪೌರಾತ್ಯ ದರ್ಶನವನ್ನು ಬೆಳಗಿದ ದಾರ್ಶನಿಕರಲ್ಲಿ ಇವನೂ ಒಬ್ಬ. ಭಿಕ್ಷೆ ಬೇಡುವುದಕ್ಕಾಗಿ ಒಂದು ಮರದ ಭಿಕ್ಷಾಪಾತ್ರೆ ಅವನ ಏಕೈಕ ಆಸ್ತಿಯಾಗಿತ್ತು. ನಗ್ನನಾಗಿಯೇ ಬದುಕಿದ್ದ ಅವಧೂತ, ಅನುಭಾವಿ ಅವನು.
ಇಂಥ ನಾಗಾರ್ಜುನನ ಮುಂದೆ ಹೆಸರಾಂತ ಕಳ್ಳನೊಬ್ಬ ನಿಂತಿದ್ದ. “ನಿಮ್ಮಂತಾಗುವ ದಾರಿಯನ್ನು ನನಗೂ ತೋರಿಸಿಕೊಡಿ. ನೀವು ಅನುಭವಿಸು ತ್ತಿರುವ ದಿವ್ಯ ಸಂತೃಪ್ತಿಯ ಜಗತ್ತಿಗೆ ನನ್ನನ್ನೂ ಕರೆದೊಯ್ಯಿರಿ.’
ಆ ಕಳ್ಳ ಅಂತಿಂಥವನಲ್ಲ. ತಸ್ಕರ ವಿದ್ಯೆಯಲ್ಲಿ ಪರಿಣಿತನಾಗಿದ್ದವನು. ಆತ ಹೊಗದ ಮನೆಗಳಿಲ್ಲ, ಅರಮನೆಗಳಿಲ್ಲ, ಬಂಗಲೆಗಳಿಲ್ಲ. ಎಲ್ಲರಿಗೂ ಆತ ಕಳ್ಳ ಎಂಬುದು ಗೊತ್ತಿತ್ತು. ಆದರೆ ಎಂದೂ ಸಿಕ್ಕಿಬಿದ್ದವನಲ್ಲ. ಆತ ನಾಗಾರ್ಜುನನ್ನು ವಿನಂತಿಸಿಕೊಂಡುದರ ಹಿಂದೆ ಒಂದು ಕಥೆಯಿದೆ.
ಒಂದು ಬಾರಿ ನಾಗಾರ್ಜುನ ಒಂದು ದೇಶದ ಅರಸನ ಅರಮನೆಗೆ ಭೇಟಿ ಕೊಟ್ಟಿದ್ದ. ಅಲ್ಲಿನ ರಾಣಿ ನಾಗಾರ್ಜುನನ ಪರಮ ಭಕ್ತೆ. ಆಕೆ ನಾಗಾರ್ಜುನನಿಗಾಗಿ ಒಂದು ಚಿನ್ನದ ಭಿಕ್ಷಾಪಾತ್ರೆಯನ್ನು ಸಿದ್ಧ ಪಡಿಸಿದ್ದಳು. “ನಿಮಗಾಗಿಯೇ ನುರಿತ ಚಿನಿವಾರರು, ಕುಸುರಿ ಕೆಲಸಗಾರರು ಹಲವು ವರ್ಷ ಶ್ರಮಿಸಿ ತಯಾರಿಸಿದ ಭಿಕ್ಷೆಯ ಬಟ್ಟಲು ಇದು. ಬಹಳ ಅಮೂಲ್ಯವಾದುದು. ನನಗಾಗಿ ನೀವಿ ದನ್ನು ಸ್ವೀಕರಿಸಬೇಕು’ ಎಂದಳು ರಾಣಿ.
ನಾಗಾರ್ಜುನನಿಗೆ ಮರದ ಭಿಕ್ಷಾಪಾತ್ರೆಯೂ ಒಂದೇ, ಚಿನ್ನದ್ದೂ ಒಂದೇ. ಹಾಗಾಗಿ ಅವನು ನಿರಾಕರಿಸದೆ ಅದನ್ನು ಸ್ವೀಕರಿಸಿದ.
ಇದು ಶ್ರೇಷ್ಠ ಕಳ್ಳನಿಗೆ ಹೇಗೋ ತಿಳಿಯಿತು. ನಾಗಾರ್ಜುನ ಅರಮನೆ ಯಿಂದ ಹೊರಟ ಬಳಿಕ ಅವನು ಹಿಂಬಾಲಿಸಿದ. “ಈ ನಗ್ನ ಫಕೀರನಿಗೆ ಚಿನ್ನದ ಭಿಕ್ಷಾಪಾತ್ರೆಯಿಂದ ಏನು ಉಪಯೋಗ! ಅದನ್ನು ಹೇಗಾದರೂ ಕದಿಯಲೇ ಬೇಕು. ನಾಗಾರ್ಜುನ ವಾಸ ಮಾಡುತ್ತಿದ್ದದ್ದು ಒಂದು ಹಳೆಯ ದೇವಸ್ಥಾನದಲ್ಲಿ. ಅದಕ್ಕೆ ಭದ್ರತೆ ಇಲ್ಲ. ಹಾಗಾಗಿ ಚಿನ್ನದ ಬಟ್ಟಲನ್ನು ಕಳವು ಮಾಡುವುದು ನನಗೆ ನಿಮಿಷದ ಕೆಲಸ’ ಎಂದುಕೊಳ್ಳುತ್ತ ಕಳ್ಳ ನಾಗಾರ್ಜುನನ ಹಿಂದೆಯೇ ಹೋದ.
ನಾಗಾರ್ಜುನ ತನ್ನ ವಾಸಸ್ಥಾನ ಪ್ರವೇಶಿಸಿದ. ಒಳಹೋದವನೇ ಕಿಟಿಕಿ ಯಿಂದ ಚಿನ್ನದ ಬಟ್ಟಲನ್ನು ಹೊರಕ್ಕೆ ಎಸೆದುಬಿಟ್ಟ. ಅದು ಮರವೊಂದರ ಹಿಂದೆ ಅವಿತು ನೋಡುತ್ತಿದ್ದ ಕಳ್ಳನ ಕಾಲ ಬಳಿಯೇ ಬಿತ್ತು. ಕಳ್ಳನಿಗೆ ಪರಮಾ ಶ್ಚರ್ಯ. ಅವನು ಕಳ್ಳನಾದರೂ ಘನತೆ ವೆತ್ತ ಮನುಷ್ಯ. ಚಿನ್ನದ ಬಟ್ಟಲನ್ನು ಹಾಗೆಯೇ ಎತ್ತಿಕೊಂಡು ಹೋಗ ಲಾರದವನಾದ. ಮೆಲ್ಲನೆ ದೇವಸ್ಥಾನದ ಬಳಿಗೆ ಬಂದು, “ಒಳಗೆ ಬರಬ ಹುದೇ’ ಎಂದು ಕೇಳಿದ.
“ಬಾ. ನಿಜ ಹೇಳ ಬೇಕಾದರೆ ನಿನಗೆ ಸಿಗಲಿ ಎಂದೇ ನಾನು ಭಿಕ್ಷಾಪಾತ್ರೆಯನ್ನು ಎಸೆದೆ’ ಎಂದು ಹೇಳಿದ ನಾಗಾರ್ಜುನ. ಒಳಕ್ಕೆ ಬಂದ ಕಳ್ಳ ನಾಗಾರ್ಜುನನ ಸ್ಮಿತ ವದನ, ಅಪೂರ್ವ ಶಾಂತಿ, ಕರುಣರಸ ಸ್ರವಿಸುವ ನೇತ್ರಗಳು, ಮೆಲುನಗು ವಿನಿಂದ ಪ್ರಭಾವಿತನಾದ. ಕಾಲುಮುಟ್ಟಿ ನಮಸ್ಕರಿಸಿದ.
ಕಥೆಯ ಆರಂಭದ ಪ್ರಶ್ನೆ ಇದೇ ಸಂದರ್ಭದ್ದು. ಕಳ್ಳ ಮುಂದುವರಿಸಿ ಹೇಳಿದ, “ಆದರೆ ಒಂದು ಮಾತು. ಕಳವು ನನ್ನ ವೃತ್ತಿ. ಅದು ನನ್ನ ಸ್ವಭಾವ. ಅದನ್ನು ಬಿಡಲು ಮಾತ್ರ ಹೇಳಬೇಡಿ…’
“ಇದು ಸರಿ, ಇದು ತಪ್ಪು ಎಂದೇನಿಲ್ಲ. ನೀನು ಕಳವು ಮಾಡು. ಆದರೆ ಪ್ರಜ್ಞಾ ಪೂರ್ವಕವಾಗಿ ಮಾಡು. ಇಂದಿನಿಂದ ಒಂದು ವಾರ ಹೀಗೆ ಮಾಡಿ ನೋಡು – ಕಳವಿಗಾಗಿ ಮನೆಯೊಳಗೆ ನುಗ್ಗುವಾಗ, ನಗನಾಣ್ಯಗಳನ್ನು ಎತ್ತಿಕೊಳ್ಳುವಾಗ… ಪ್ರತೀ ಹೆಜ್ಜೆಯಲ್ಲಿಯೂ ಪ್ರಜ್ಞಾಪೂರ್ವಕ ನಾಗಿರು. ಒಂದು ವಾರದ ಬಳಿಕ ಬಾ.’
ಒಂದು ವಾರದ ಬಳಿಕ ಕಳ್ಳ ಹಿಂದಿ ರುಗಿದಾಗ ಆತನ ಕೈಗಳು ನಡುಗುತ್ತಿದ್ದವು. ಆ ಬಳಿಕ ಒಂದು ದಿನವೂ ಅವನಿಗೆ ಕದಿಯುವುದು ಸಾಧ್ಯವಾಗಿರಲಿಲ್ಲ. ಪ್ರಜ್ಞಾಪೂರ್ವಕವಾಗಿದ್ದಾಗ ಅವನಿಗೆ ಎಲ್ಲವೂ ನಶ್ವರವಾಗಿ, ಮೌಲ್ಯ ರಹಿತವಾಗಿ ಕಾಣಿಸುತ್ತಿದ್ದವು. “ನೀವು ಅನುಭವಿಸುತ್ತಿ ರುವ ಪರಮ ಸುಖ, ಸಂತೃಪ್ತಿಯ ಸ್ವಲ್ಪ ರುಚಿಯನ್ನು ಈ ಒಂದು ವಾರದಲ್ಲಿ ನಾನೂ ಅನುಭವಿಸಿದೆ ಸ್ವಾಮೀ. ಈಗ ನನಗೆ ಸನ್ಯಾಸ ದೀಕ್ಷೆ ಕೊಡಿ’ ಎಂದ ಕಳ್ಳ.
(ಸಾರ ಸಂಗ್ರಹ)