ನಂದಳಿಕೆ ಸಿರಿಜಾತ್ರೆ: ಮೈಲುಗಲ್ಲು, ಮಾಸ್ಕ್ ಮೂಲಕ “ಸಿರಿ ಜಾತ್ರೆ’ ಪ್ರಚಾರ
Team Udayavani, Mar 13, 2021, 4:40 AM IST
ಬೆಳ್ಮಣ್: ಕೊರೊನಾ ಕಾರಣದಿಂದಾಗಿ ಒಂದು ವರ್ಷದ ಬಳಿಕ ನಂದಳಿಕೆ ಸಿರಿ ಜಾತ್ರೆ ಮಾರ್ಚ್ 28ರಂದು ನಡೆಯಲಿದ್ದು ಪ್ರಚಾರ ವೈಖರಿ ಗಮನ ಸೆಳೆದಿದೆ. ವಿಶಿಷ್ಟ ರೀತಿಯಲ್ಲಿ ಪ್ರಚಾರದ ಕಲ್ಪನೆಯಡಿ ಜಾತ್ರೆ ಪ್ರಚಾರವನ್ನು ಮಾಡಲಾಗುತ್ತಿದೆ. ಕಳೆದ ಬಾರಿ ಲಾಕ್ಡೌನ್ನಲ್ಲಿ ಸಿರಿಜಾತ್ರೆ ಸಾಂಕೇತಿಕವಾಗಿತ್ತು. ಈ ಬಾರಿ ಮೈಲುಗಲ್ಲುಗಳ ಭಿತ್ತಿಯೊಂದಿಗೆ ಕೊರೊನಾ ತಡೆಗಟ್ಟುವ ಮಾಸ್ಕ್ನ ಕೂಡ ಪ್ರಚಾರಕ್ಕೆ ಬಳಸಲಾಗಿದೆ.
ಮಾಸ್ಕ್ ನಲ್ಲೂ ಜಾತ್ರೆ ದಿನಾಂಕ
ಮಾಸ್ಕ್ನಲ್ಲಿ ಜಾತ್ರೆಯ ದಿನಾಂಕ ಉಲ್ಲೇಖೀಸಲಾಗಿದೆ. ಕಪ್ಪು ಬಣ್ಣದ ಸುಮಾರು 20 ರೂ. ಬೆಲೆ ಬಾಳುವ 1000 ಮಾಸ್ಕ್ ಹಾಗೂ 130 ರೂ. ವೆಚ್ಚದ 500 ಮೈಲುಗಲ್ಲುಗಳ ಭಿತ್ತಿಯನ್ನು ಕ್ಷೇತ್ರದಲ್ಲಿ ಗುರುವಾರ ಬಿಡುಗಡೆಗೊಳಿಸಲಾಯಿತು. ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ, ಕ್ಷೇತ್ರದ ತಂತ್ರಿಗಳು, ಅರ್ಚಕರು ಹಾಗೂ ಗ್ರಾಮಸ್ಥರ ಜತೆ ಈ ಪ್ರಚಾರ ಪ್ರಕ್ರಿಯೆಗೆ ಚಾಲನೆ ನೀಡಿದರು.
ಪ್ರಚಾರ ಭಿತ್ತಿಗೆ ವಿವಿಧ ವಿನ್ಯಾಸ
ಈ ಹಿಂದೆ ಅಂಚೆ ಕಾರ್ಡ್, ಕೊಡೆ ಇನ್ನಿತರ ಆಕರ್ಷಕ ವಿನ್ಯಾಸಗಳ ಮೂಲಕ ಸಿರಿ ಜಾತ್ರೆಯ ಬಗ್ಗೆ ಪ್ರಚಾರ ಕೈಗೊಳ್ಳಲಾ ಗಿತ್ತು. ಆದಿ ಆಲಡೆ, ಸಿರಿ ಕ್ಷೇತ್ರ, ಸಿರಿಗಳ ಮೂಲ ಕ್ಷೇತ್ರ, ನಾಲ್ಕು ಸ್ಥಾನ ನಂದಳಿಕೆ ಹೀಗೆ ನಾನಾ ರೀತಿಯಿಂದಲೂ ಗುರುತಿಸಿಕೊಂಡ ನಂದಳಿಕೆ ಮಹಾಲಿಂಗೇಶ್ವರನ ದೇಗುಲದ ಜಾತ್ರೆ ಇದಾಗಿದೆ. ಸಿರಿ, ಕುಮಾರ, ಸೊನ್ನೆ -ಗಿಂಡೆ, ಅಬ್ಬಗ- ದಾರಗ, ಎಂಬ ಮೂರು ತಲೆಮಾರಿನ ಅದ್ಭುತ ಶಕ್ತಿಗಳ ಸಾನ್ನಿಧ್ಯವಿರುವ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇಗುಲದ ಜಾತ್ರೆಗೆ ಸಿದ್ಧತೆಗಳೂ ನಡೆದಿವೆ.
ಗಮನ ಸೆಳೆವ ಮೈಲುಗಲ್ಲು
ಕಳೆದ ಬಾರಿ ಜನಮನ ಗೆದ್ದ ಮೈಲುಗಲ್ಲುಗಳನ್ನು ಕೂಡ ಈ ಬಾರಿಯ ಜಾತ್ರೆಯ ಪ್ರಚಾರದ ಫಲಕವಾಗಿ ಮತ್ತೆ ಹಾಕಲಾಗುತ್ತಿದೆ. ಒಟ್ಟಿನಲ್ಲಿ ಈ ಎಲ್ಲ ಪರಿಕಲ್ಪನೆಯ ರೂವಾರಿ ನಂದಳಿಕೆ ಚಾವಡಿ ಅರಮನೆ ನಂದಳಿಕೆ ಸುಹಾಸ್ ಹೆಗ್ಡೆ ಅವರದು. ಪ್ರತಿ ಬಾರಿಯೂ ಇವರು ಹೊಸತನ ಸೃಷ್ಟಿಸುತ್ತಿದ್ದಾರೆ. ಮೈಲುಗಲ್ಲಿನ ಪ್ರಚಾರ ಫಲಕಗಳು ದ.ಕ., ಉಡುಪಿ ಜಿಲ್ಲೆಯೆಲ್ಲೆಡೆ ರಸ್ತೆಯ ಬದಿಯಲ್ಲಿ ಪ್ರಯಾಣಿಕರ ಗಮನ ಸೆಳೆಯಲಿವೆ. ಧರ್ಮಸ್ಥಳ, ಚಾರ್ಮಾಡಿ, ಉಜಿರೆ, ಬಂಟ್ವಾಳ, ಉಡುಪಿ, ಕುಂದಾಪುರ ಸಹಿತ
ವಿವಿಧ ಭಾಗಗಳಲ್ಲಿ ರಸ್ತೆಯ ಬದಿ ಯಲ್ಲಿ ಕಾಣಸಿಗಲಿದ್ದು ಎಲ್ಲರನ್ನೂ ಆಕರ್ಷಿಸಲಿದೆ.