ನೀನಾಸಂ ಸತೀಶ್ ನೇರಾನೇರ
Team Udayavani, May 15, 2020, 4:59 AM IST
ಕೊರೊನಾ ಬಳಿಕ ಕನ್ನಡ ಚಿತ್ರರಂಗದಲ್ಲಿ ಜೋರಾಗಿ ಕೇಳಿಬರುತ್ತಿರುವ ವಿಷಯವೆಂದರೆ ಅದು ಓಟಿಟಿ. ಸಿನಿಮಾಗಳನ್ನು ಚಿತ್ರಮಂದಿರದಲ್ಲೇ ಬಿಡುಗಡೆ ಮಾಡಬೇಕು ಎಂಬ ಹಳೆಯ ನಿಯಮವನ್ನು ಮುರಿದು, ಆನ್ಲೆ„ನ್ ರಿಲೀಸ್ ಎಂಬ ಹೊಸ ಕಾನ್ಸೆಪ್ಟ್ ಓಟಿಟಿ. ಈಗಾಗಲೇ ಅನೇಕರು ಇದರ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ಚಿತ್ರಮಂದಿರಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತವೆ ಎಂಬ ಮಾತು ಕೂಡಾ ಕೇಳಿಬರುತ್ತಿದೆ.
ಆದರೆ ಅನೇಕರಿಗೆ ಇಂದಿಗೂ ಚಿತ್ರಮಂದಿರವೇ ಪ್ರಿಯಾ. ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಮಾಡುವ ಮಜಾವೇ ಬೇರೆ. ಆ ಸಂಭ್ರಮವನ್ನು ಕಣ್ತುಂಬಿ ಕೊಳ್ಳೋದೇ ಒಂದು ಖುಷಿ ಎಂಬ ಮಾತಿದೆ. ಆದರೆ, ಈಗ ಓಟಿಟಿಗಳು ಸದ್ದು ಮಾಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಚಿತ್ರಮಂದಿರಗಳು ಮುಚ್ಚಲಿವೆ ಎಂಬ ಮಾತೂ ಕೂಡಾ ಕೇಳಿಬರುತ್ತಿದೆ. ನಟ ನೀನಾಸಂ ಸತೀಶ್ ಪ್ರಕಾರ, ಚಿತ್ರಮಂದಿರಗಳು ಯಾವತ್ತಿಗೂ ಮುಚ್ಚೋದಿಲ್ಲ. ಅದಕ್ಕೆ ಕಾರಣ ಚಿತ್ರಮಂದಿರದಲ್ಲಿರುವ ಕನಸುಗಳು. ಈ ಬಗ್ಗೆ ಟ್ವೀಟ್ ಮಾಡಿರುವ ಸತೀಶ್, ಚಿತ್ರಮಂದಿರಗಳು ಎಂದು ಮುಚ್ಚುವುದಿಲ್ಲ,
ಅಲ್ಲಿ ಕನಸುಗಳಿವೆ, ನೂರಾರು ಜನರ ಕಥೆಗಳಿವೆ, ನಮ್ಮ ನೆಚ್ಚಿನ ನಾಯಕರಿದ್ದಾರೆ, ಲಕ್ಷಾಂತರ ಜನರ ಬದುಕಿದೆ, ಅದೊಂದು ಅದ್ಭುತ ಲೋಕ, ಎಂಥಾ ಮಹಾಮಾರಿಗಳು ನೂರಾರು ಬಂದರು, ಅವನ್ನೆಲ್ಲಾ ಮೆಟ್ಟಿ ಮತ್ತೆ ನಮ್ಮ ಚಿತ್ರಮಂದಿರಗಳು ಬದುಕುತ್ತವೆ… ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಚಿತ್ರಮಂದಿರದ ಹಾಗೂ ಸಿನಿಪ್ರೇಮಿಗಳು ಸಹಮತ ವ್ಯಕ್ತಪಡಿಸಿದ್ದಾರೆ. ಇನ್ನು ಸದ್ಯ ನೀನಾಸಂ ಸತೀಶ್ ನಾಯಕರಾಗಿ ನಟಿಸಿರುವ ಗೋಧ್ರಾ ಚಿತ್ರ ಬಿಡುಗಡೆಯಾಗಬೇಕಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ನಾಯಕಿ.