ಕೈ ತಪ್ಪಿದ ಮಂತ್ರಿ ಸ್ಥಾನ: ಪ್ರಮಾಣ ವಚನ ಸಮಾರಂಭದಿಂದ ದೂರ ಉಳಿದ ಅಂಗಾರ, ಹಾಲಾಡಿ
Team Udayavani, Aug 20, 2019, 11:16 AM IST
ಸುಳ್ಯ/ ಕುಂದಾಪುರ: ಕೊನೆ ಕ್ಷಣದವರೆಗೂ ಸಚಿವ ಪದವಿ ದೊರೆಯುವುದೆಂಬ ನಿರೀಕ್ಷೆಯಲ್ಲಿದ್ದ ಸುಳ್ಯ ಶಾಸಕ ಎಸ್.ಅಂಗಾರ ಮತ್ತು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ ಎಂದು ತಿಳಿದುಬಂದಿದೆ.
ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಬೆಂಗಳೂರಿಗೆ ಆಗಮಿಸಿದ್ದ ಎಸ್. ಅಂಗಾರ ಅವರು ಇಂದು ಸಭೆ ಸೇರಿ ಸುಳ್ಯದ ಮುಖಂಡರು ಮತ್ತು ಕಾರ್ಯಕರ್ತ ರೊಂದಿಗೆ ಅನೌಪಚಾರಿಕವಾಗಿ ಮಾತನಾಡಿದ ಅಂಗಾರ ತೀವ್ರ ಬೇಸರ ವ್ಯಕ್ತಪಡಿಸಿದರು. ನನ್ನ ಹಣೆಬರಹದಲ್ಲಿ ಮಂತ್ರಿ ಆಗುವುದು ಬರೆದಿಲ್ಲವೇನೋ ಎಂದು ನಿರಾಶದಾಯಕ ಮಾತುಗಳನ್ನಾಡಿದರು. ಮಂತ್ರಿಗಿರಿ ಸಿಗುತ್ತದೆಂದು ಬೆಂಗಳೂರಿಗೆ ಬಂದ ಕಾರ್ಯಕರ್ತರ ಕ್ಷಮೆಯನ್ನೂ ಯಾಚಿಸಿದರು. ಸಭೆಯಲ್ಲಿ ಭಾಗವಹಿಸಿದ ಮುಖಂಡರಿಂದಲೂ ಅಸಮಾಧಾನ ಮತ್ತು ಆಕ್ರೋಶದ ಮಾತುಗಳು ವ್ಯಕ್ತವಾಯಿತೆಂದು ತಿಳಿದುಬಂದಿದೆ.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ತಮ್ಮ ಹಾಲಾಡಿಯ ಮನೆಯಲ್ಲೇ ಇದ್ದಾರೆ. ತನಗೆ ಯಾವುದೇ ಸೂಚನೆ ಬರದ ಹಿನ್ನಲೆಯಲ್ಲಿ ಅವರು ಬೆಂಗಳೂರಿಗೆ ತೆರಳಿಲ್ಲ ಎಂದು ವರದಿಯಾಗಿದೆ. ಹಾಲಾಡಿ ಶೆಟ್ಟಿಯವರು ಎಂದಿನಂತೆ ನಿವಾಸದಲ್ಲಿ ತಮ್ಮ ಸಾರ್ವಜನಿಕರ ಭೇಟಿ ಮಾಡುತ್ತಿದ್ದಾರೆ.
ಐದು ಬಾರಿ ಶಾಸಕರಾಗಿರುವ ಹಾಲಾಡಿಯವರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅವರ ನಿವಾಸದಲ್ಲಿ ಬಿಜೆಪಿ ನಾಯಕರ ಆಗಮಿಸಿದ್ದು, ಚರ್ಚೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.