ನಿವೇಶನ ಮಾರಾಟ ಬಿಟ್ಟು ಬೇರೆ ವ್ಯವಹಾರ ನಡೆಸಿಲ್ಲ: ಜಮೀರ್
Team Udayavani, Jun 13, 2019, 3:07 AM IST
ಬೆಂಗಳೂರು: “ಐಎಂಎ ಜ್ಯುವೆಲ್ಲರ್ ಮಾಲೀಕ ಮನ್ಸೂನ್ ಖಾನ್ಗೆ ನನ್ನ ಆಸ್ತಿ ಮಾರಾಟ ಮಾಡಿದ್ದೇನೆಯೇ ಹೊರತು ಅವರಿಂದ ಯಾವುದೇ ಹಣ ಪಡೆದಿಲ್ಲ. 2017ರ ಡಿಸೆಂಬರ್ ನಂತರ ಬೆರಳೆಣಿಕೆ ಬಾರಿ ಅವರನ್ನು ಭೇಟಿಯಾಗಿದ್ದೇನೆಯೇ ಹೊರತು ಇನ್ನು ಯಾವುದೇ ವ್ಯವಹಾರ ನಡೆಸಿಲ್ಲ’ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ ಸ್ಪಷ್ಟನೆ ನೀಡಿದ್ದಾರೆ.
ವಿಕಾಸಸೌಧದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ನಗರದ ರಿಚ್ಮಂಡ್ಟೌನ್ನ ಸಪೆಂಟೈನ್ ಸ್ಟ್ರೀಟ್ನಲ್ಲಿ ನನ್ನ ಹೆಸರಿನಲ್ಲಿದ್ದ 14,924 ಚದರ ಅಡಿ ನಿವೇಶನವನ್ನು 9.38 ಕೋಟಿ ರೂ.ಮೊತ್ತಕ್ಕೆ ಮನ್ಸೂರ್ ಖಾನ್ಗೆ ಮಾರಾಟ ಮಾಡಿದ್ದೆ. 2017ರ ಡಿ. 11ರಂದು 5 ಕೋಟಿ ರೂ.ಗಳನ್ನು ಆರ್ಟಿಜಿಎಸ್ ಮೂಲಕ ವರ್ಗಾವಣೆ ಮಾಡಿದ್ದರು. ಉಳಿದ 4.28 ಕೋಟಿ ರೂ.ಗಳನ್ನು 2018ರ ಜೂ. 5ರಂದು ಚೆಕ್ನಲ್ಲಿ ನೀಡಿದ್ದರು. ಪಾರದರ್ಶಕವಾಗಿ ವ್ಯವಹಾರ ನಡೆಸಿರುವುದನ್ನು ಹೊರತುಪಡಿಸಿದರೆ ಬೇರೆ ವ್ಯವಹಾರ ನಡೆಸಿಲ್ಲ’ ಎಂದು ಹೇಳಿದರು.
ಈಗಾಗಲೇ ಮನ್ಸೂರ್ ಖಾನ್ ಹೆಸರಿನಲ್ಲಿರುವ 15ಕ್ಕೂ ಹೆಚ್ಚು ಆಸ್ತಿಗಳ ವಿವರವನ್ನು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಸಲ್ಲಿಸಿದ್ದೇನೆ. ಅವರ ಬೇನಾಮಿ ಆಸ್ತಿಗಳನ್ನು ಪತ್ತೆ ಹಚ್ಚುವಂತೆಯೂ ಸಮುದಾಯದ ಕೆಲ ಮುಖಂಡರಿಗೆ ಸೂಚಿಸಿದ್ದೇನೆ. ಆಸ್ತಿಗಳೆಲ್ಲಾ ಕಂಪನಿ ಬದಲಿಗೆ ಮನ್ಸೂರ್ ಖಾನ್ ಹೆಸರಿನಲ್ಲಿವೆ. ಹಾಗಾಗಿ, ಈ ಆಸ್ತಿಗಳ ಜಪ್ತಿ ಬಗ್ಗೆ ಕಾನೂನು ಸಲಹೆ ಪಡೆಯಬೇಕಾಗುತ್ತದೆ ಎಂದರು.
ಪ್ರಕರಣದಲ್ಲಿ ಆರೋಪ ಕೇಳಿ ಬಂದಿರುವ ಶಾಸಕ ರೋಷನ್ ಬೇಗ್ ಅವರೇ ಸಿಬಿಐ ತನಿಖೆಗೆ ಒತ್ತಾಯಿಸುವಾಗ ತಾವು ಎಸ್ಐಟಿ ತನಿಖೆ ಕೋರುವುದು ಎಷ್ಟು ಸರಿ ಎಂಬ ಪ್ರಶ್ನೆಗೆ ಉತ್ತರಿಸಿದ ಜಮೀರ್, ಮೊದಲು ನಮ್ಮ ಪೊಲೀಸರು ತನಿಖೆ ನಡೆಸಲಿ. ಇಲ್ಲದಿದ್ದರೆ ಅವರ ಮೇಲೆ ಸರ್ಕಾರಕ್ಕೆ ವಿಶ್ವಾಸವಿಲ್ಲ ಎಂಬಂತಾಗುತ್ತದೆ. ನಂತರ ಅಗತ್ಯ ಬಿದ್ದರೆ ಸಿಬಿಐಗೆ ವಹಿಸುವಂತೆ ಈಗಾಗಲೇ ಮುಖ್ಯಮಂತ್ರಿ, ಸಚಿವರನ್ನು ಕೋರಿದ್ದೇನೆ ಎಂದು ಸಮಜಾಯಿಷಿ ನೀಡಿದರು.
“ನನ್ನ ಮತ್ತು ರೋಷನ್ ಬೇಗ್ ನಡುವೆ ಒಳಜಗಳಗಳಿಲ್ಲ. ರೋಷನ್ ಬೇಗ್ ಅವರು ನಮ್ಮ ಕಾಂಗ್ರೆಸ್ನ ಹಿರಿಯ ನಾಯಕರು. ನಾನು ನಾಯಕನಾಗಲು ಬಂದಿಲ್ಲ. ಜನರ ಸೇವೆ ಮಾಡಲು ಬಂದಿದ್ದೇನೆ. ರೋಷನ್ ಬೇಗ್ ವಿರುದ್ಧ ಯಾರೂ ಷಡ್ಯಂತ್ರ ಮಾಡಿಲ್ಲ. ಧ್ವನಿಸುರಳಿಯಲ್ಲಿನ ಮಾತು ಮನ್ಸೂರ್ ಖಾನ್ ಅವರದ್ದೇ ಎಂಬುದು ಮೊದಲು ದೃಢಪಡಬೇಕು. ಅದು ನಕಲಿ ಆಡಿಯೋ ಕೂಡ ಆಗಿರಬಹುದು. ಏಕೆಂದರೆ, ಎರಡು ಧ್ವನಿಸುರುಳಿ ಬಿಡುಗಡೆಯಾಗಿದ್ದು, ಎರಡರಲ್ಲೂ ಧ್ವನಿ ಭಿನ್ನವಾಗಿರುವುದು ಮೇಲ್ನೋಟಕ್ಕೆ ಕಾಣುತ್ತದೆ’ ಎಂದು ಹೇಳಿದರು.
ರಾಜಕೀಯ ನಿವೃತ್ತಿ: ಮನ್ಸೂರ್ ಖಾನ್ 13 ವರ್ಷಗಳಿಂದ ವ್ಯವಹಾರ ನಡೆಸಿದ್ದರೂ ನಿವೇಶನ ಮಾರಾಟ ಸಂಬಂಧ 2017ರ ಡಿಸೆಂಬರ್ನಲ್ಲಿ ಭೇಟಿಯಾಗಿದ್ದೆ. ಅದಕ್ಕೂ ಮೊದಲು ನಾನು ಮನ್ಸೂರ್ ಖಾನ್ ಅವರನ್ನು ಭೇಟಿಯಾಗಿದ್ದೆ ಎಂಬುದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಸವಾಲು ಹಾಕಿದರು.
ಗೊಂದಲ ಮೂಡಿಸಿದ ಹೇಳಿಕೆ!: ಐಎಂಎ ಜ್ಯುವೆಲ್ಲರ್ನಂತಹ ಸಂಸ್ಥೆ 13 ವರ್ಷದಿಂದ ಇದ್ದರೂ ಯಾವಾಗಲಾದರೂ ಹೋಗಬಹುದು ಎಂಬ ಆತಂಕವಿತ್ತು ಹಾಗೂ ಜನರಿಗೆ ಬಡ್ಡಿ ಹಣ ಪಾವತಿಸದಿರುವ ಬಗ್ಗೆ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ಕಳೆದ ಜೂ.6ರಂದು ಮಾತುಕತೆ ನಡೆಸಿದ್ದರು ಎಂಬ ಜಮೀರ್ ಅಹಮ್ಮದ್ ಖಾನ್ ಹೇಳಿಕೆ ಗೊಂದಲ ಮೂಡಿಸಿತ್ತು.
ಮೊದಲೇ ಮಾಹಿತಿಯಿದ್ದರೆ ಯಾಕೆ ಕ್ರಮ ಕೈಗೊಳ್ಳಲಿಲ್ಲ, ಮುನ್ನೆಚ್ಚರಿಕೆ ವಹಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಜಮೀರ್, ಅವರು ಪರಾರಿಯಾಗುತ್ತಾರೆ ಎಂದು ನಾವು ಹೇಗೆ ಊಹಿಸಲು ಸಾಧ್ಯ. ಅಲ್ಲದೇ ಯಾರೊಬ್ಬರೂ ಪೊಲೀಸರಿಗೆ ದೂರು ಸಹ ನೀಡಿರಲಿಲ್ಲ. ರಂಜಾನ್ ಬಳಿಕ ಕೊಡುವುದಾಗಿ ಹೇಳಿದ್ದರಿಂದ ಕೊಡುವ ವಿಶ್ವಾಸವಿತ್ತು. ಇನ್ನು ಅಲೋಕ್ ಕುಮಾರ್ ಅವರು ಯಾಕೆ ಪ್ರಕರಣ ದಾಖಲಿಸಿಕೊಳ್ಳಲಿಲ್ಲ ಎಂಬ ಪ್ರಶ್ನೆಗೆ, ಅಲೋಕ್ ಕುಮಾರ್ ಅವರನ್ನೇ ಕೇಳಬೇಕು ಎಂದು ಹೇಳಿದರು.
ನಿಮಗೆ ಕೈಮುಗಿಯುತ್ತೇನೆ ಬನ್ನಿ: ಮನ್ಸೂರ್ ಖಾನ್ ಅವರೇ, ಮಾಧ್ಯಮಗಳ ಮೂಲಕ ನಿಮಗೆ ಕೈಮುಗಿಯುತ್ತೇನೆ, ವಾಪಸ್ ಬನ್ನಿ. ಸರ್ಕಾರ ನಿಮ್ಮೊಂದಿಗಿದೆ ಎಂದು ಜಮೀರ್ ಹೇಳಿದರು. ಸಚಿವರಾಗಿ ಕೈಮುಗಿಯುತ್ತೇನೆ ಎಂದು ಹೇಳುವುದು ಎಷ್ಟು ಸರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮನ್ಸೂರ್ ಖಾನ್ ಬಡ ಜನರ ಹಣ ಪಡೆದು ಕಣ್ಮರೆಯಾಗಿದ್ದಾರೆ. ಆ ಬಡವರ ಪರವಾಗಿ ಕೈಮುಗಿಯುವುದಾಗಿ ಹೇಳಿದ್ದೇನೆ. ಅಲ್ಲದೇ ರಾಜಕಾರಣಿಗಳು, ಅಧಿಕಾರಿಗಳು ತಮ್ಮಿಂದ ಹಣ ಪಡೆದಿರುವುದಾಗಿ ಮನ್ಸೂರ್ ಖಾನ್ ಹೇಳಿದ್ದಾರೆ. ಅವರು ವಾಪಸ್ಸಾದರೆ ಅವರು ಯಾರೆಲ್ಲಾ ರಾಜಕಾರಣಿಗಳು, ಅಧಿಕಾರಿಗಳಿಗೆ ಹಣ ನೀಡಿರುವುದಾಗಿ ಹೇಳುತ್ತಾರೋ ಅವರಿಂದ ಹಣ ವಸೂಲಿ ಮಾಡಿ ಜನರಿಗೆ ನೀಡಲಾಗುವುದು ಎಂದು ಹೇಳಿದರು.
ನಾನೇನೂ ಹರಿಶ್ಚಂದ್ರನಲ್ಲ. ನನ್ನಿಂದಲೂ ತಪ್ಪುಗಳಾಗಿರಬಹುದು. ನನ್ನಿಂದ ತಪ್ಪಾಗಿದ್ದರೆ ಒಪ್ಪಿಕೊಳ್ಳುತ್ತೇನೆ. ಆದರೆ ತಪ್ಪು ಮಾಡಿರುವ ಬಗ್ಗೆ ದಾಖಲೆ, ಮಾಹಿತಿ ಇಲ್ಲದೇ ಆರೋಪ ಮಾಡುವುದು ಸರಿಯಲ್ಲ.
-ಜಮೀರ್ ಅಹಮ್ಮದ್ ಖಾನ್, ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ