ಈಗ ಮಹದಾಯಿ “ಅನುಷ್ಠಾನ ಸವಾಲು’
Team Udayavani, Feb 29, 2020, 3:09 AM IST
ಹುಬ್ಬಳ್ಳಿ: ಮಹದಾಯಿ ಕುರಿತು ಕೇಂದ್ರದಿಂದ ಅಧಿಸೂಚನೆ ಹೊರಡಿಸುವುದು ವಿಶೇಷವಾಗಿ ಇಬ್ಬರು ಸಚಿವರಿಗೆ ಪ್ರತಿಷ್ಠೆಯಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿದ್ದಿಗೆ ಬಿದ್ದು ಜಲಸಂಪನ್ಮೂಲ ಖಾತೆ ಪಡೆದ ಸಚಿವ ರಮೇಶ ಜಾರಕಿಹೊಳಿ ತಮ್ಮ ಯತ್ನದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಇದರ ಬೆನ್ನ ಹಿಂದೆಯೇ ಅಡ್ಡಿ ನಿವಾರಿಸಿ ಕಾಲಮಿತಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸುವ ಸವಾಲು ಸಹ ಇದೆ.
ಗೋವಾದ ತೀವ್ರ ವಿರೋಧದ ನಡುವೆಯೂ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ಗೆ ಮನವರಿಕೆ ಮಾಡಿಕೊಟ್ಟು, ಅಧಿಸೂಚನೆ ಹೊರಡಿಸುವಂತೆ ಮಾಡುವಲ್ಲಿ ಪ್ರಹ್ಲಾದ ಜೋಶಿ ಶ್ರಮ ಮಹತ್ವದ್ದಾಗಿದೆ. ಈ ಹಿಂದೆಯೂ ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಪ್ರಕಾಶ ಜಾವಡೇಕರ ಮೇಲೆ ಪ್ರಭಾವ ಬೀರಿ, ಕಳಸಾ-ಬಂಡೂರಿ ಕುಡಿಯುವ ನೀರು ಯೋಜನೆಗೆ ಪರವಾನಗಿ ಅಗತ್ಯವಿಲ್ಲ ಎಂದು ಪತ್ರ ಬರೆಸುವಲ್ಲಿ ಜೋಶಿ ಮೌನಕ್ರಾಂತಿ ತೋರಿದ್ದರು.
ಮಹದಾಯಿ ಅಧಿಸೂಚನೆ ಕುರಿತು ತಕ್ಷಣಕ್ಕೆ ಸಭೆ ಕರೆದು ಚರ್ಚಿಸಿ, ಸಂಪುಟ ಸಹೋದ್ಯೋಗಿಗಳೊಂದಿಗೆ ದೆಹಲಿಗೆ ತೆರಳಿ, ಕೇಂದ್ರದ ಮನವೊಲಿಕೆ ಯತ್ನದ ಮೂಲಕ ರಮೇಶ ಜಾರಕಿಹೊಳಿ ಮಹತ್ವದ ಹೆಜ್ಜೆ ಇರಿಸಿದ್ದಾರೆ. ಕೇಂದ್ರ ಸಚಿವ ಸುರೇಶ ಅಂಗಡಿ ಸಹ ಇದಕ್ಕೆ ಮಹತ್ವದ ಸಾಥ್ ನೀಡಿದ್ದರು. ಸುಪ್ರೀಂಕೋರ್ಟ್ ಸೂಚನೆ ನಂತರವೂ ಅಧಿಸೂಚನೆಗೆ ಗೋವಾ ಕ್ಯಾತೆ ತೆಗೆದಿದ್ದರಿಂದ ಅಧಿಸೂಚನೆ ಇನ್ನಷ್ಟು ವಿಳಂಬ ಶಂಕೆ ವ್ಯಕ್ತವಾಗಿತ್ತಾದರೂ, ಕೇಂದ್ರ ಸರ್ಕಾರದ ಮನವೊಲಿಸುವಿಕೆಯಲ್ಲಿ ರಾಜ್ಯದ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ.
ತಪ್ಪಿದ ಟೀಕಾಸ್ತ್ರ: ಮಹದಾಯಿ ಕುರಿತಾಗಿ ರಾಜ್ಯ ಬಿಜೆಪಿ ನಾಯಕರು ಕೇಂದ್ರ ಮಟ್ಟದಲ್ಲಿ ಪ್ರಭಾವ ಬೀರುತ್ತಿಲ್ಲ. ಸೌಹಾರ್ದ ಮಾತುಕತೆಗೆ ಪ್ರಧಾನಿಯ ಮನವೊಲಿಕೆ, ಒತ್ತಡಕ್ಕೆ ಮುಂದಾಗುತ್ತಿಲ್ಲ ಎಂಬುದು ವಿಪಕ್ಷ ಹಾಗೂ ಹೋರಾಟಗಾರರ ಆರೋಪವಾಗಿತ್ತು. ಅಧಿಸೂಚನೆಗೆ ಸುಪ್ರೀಂಕೋರ್ಟ್ನಿಂದ ಒಪ್ಪಿಗೆ ಇಲ್ಲದೆ ಸಾಧ್ಯವೇ ಇಲ್ಲ ಎಂಬುದು ಬಿಜೆಪಿ ನಾಯಕರ ಸಬೂಬು ಆಗಿತ್ತು. ಸುಪ್ರೀಂಕೋರ್ಟ್ ಅಧಿಸೂಚನೆ ಹೊರಡಿಸಲು ಸೂಚಿಸಿದ್ದನ್ನು ಸಿಎಂ ಯಡಿಯೂರಪ್ಪ ಸದನದಲ್ಲೇ ಪ್ರಕಟಿಸಿದ್ದರು.
ಒಂದು ವೇಳೆ, ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸದಿದ್ದರೆ ಬಜೆಟ್ ಅಧಿವೇಶನದಲ್ಲಿ ವಿಪಕ್ಷಗಳ ಟೀಕಾಸ್ತ್ರಗಳಿಗೆ ಬಿಜೆಪಿ ಗುರಿಯಾಗಬೇಕಾಗಿತ್ತು. ಇಲ್ಲಿವ ರೆಗೆ ಸುಪ್ರೀಂಕೋರ್ಟ್ ನೆಪ ಹೇಳಿ ಕಾಲ ದೂಡಿದಿರಿ, ಇದೀಗ ಸುಪ್ರೀಂ ಕೋರ್ಟ್ ಸೂಚನೆ ನೀಡಿದರೂ ಏಕೆ ಅಧಿಸೂಚನೆ ಹೊರಡಿ ಸುತ್ತಿಲ್ಲ ಎಂದು ವಿಪಕ್ಷಗಳವರು ಬಿಜೆಪಿ ಮೇಲೆ ಮುಗಿ ಬೀಳುವ ಸಾಧ್ಯತೆ ಇತ್ತು. ಈಗ ಟೀಕಾಸ್ತ್ರಗಳಿಂದ ತಪ್ಪಿಸಿಕೊಂಡಂತಾಗಿದೆ.
ಕಾಲಮಿತಿ ಯೋಜನೆ ಸವಾಲು: ಇದು ಒಂದು ಹಂತದ ನೆಗೆತವಷ್ಟೇ. ಮುಂದಿರುವುದು ಬಹುದೊಡ್ಡ ಸವಾಲು. ಮಹದಾಯಿ ನೀರಿಗಾಗಿ ಮೂರ್ನಾಲ್ಕು ದಶಕಗಳಿಂದ ಮೊಳಗುತ್ತಿದ್ದ ಬೇಡಿಕೆ, ಧ್ವನಿಗೆ ಇದೀಗ ಫಲ ಸಿಗುವ ಕಾಲ ಕೂಡಿ ಬಂದಿದೆ. ಈಗಲೂ ನಾವು ಉದಾಸೀನತೆ, ವಿಳಂಬಕ್ಕೆ ಅವಕಾಶ ನೀಡದೆ ಕಾಲಮಿತಿಯಲ್ಲಿ ಯೋಜನೆ ಅನುಷ್ಠಾನದ ಬದ್ಧತೆ ತೋರಬೇಕಾಗಿದೆ.
1,000 ಕೋಟಿ ಬೇಕು: ಮಹದಾಯಿ ನಾಲಾ ಯೋಜನೆಗೆ ಕನಿಷ್ಠ 1,000 ಕೋಟಿ ರೂ. ನೀಡಿದರೆ ಕಾಮಗಾರಿಯ ವೇಗ ಹೆಚ್ಚಲಿದೆ ಎಂಬುದು ಅಧಿಕಾರಿಗಳ ಅನಿಸಿಕೆ. ಮಾ.5ರಂದು ಮಂಡನೆಯಾಗುವ ಆಯವ್ಯಯದಲ್ಲಿ ಯಡಿಯೂರಪ್ಪನವರು, ಹೆಚ್ಚು ಹಣ ನಿಗದಿ ಮಾಡುವ ಮೂಲಕ ತಮ್ಮ ಬದ್ಧತೆ ತೋರಬೇಕಾಗಿದೆ.
ನೀರು ಬಂದೇ ಬಿಟ್ಟಿತು ಎಂದಲ್ಲ: ಅಧಿಸೂಚನೆ ಹೊರಡಿಸಿದ ಕೂಡಲೇ ಅಲ್ಲಿಗೆ ಎಲ್ಲವೂ ಮುಗಿಯಿತು, ನೀರು ಬಂದೇ ಬಿಟ್ಟಿತು ಎಂದಲ್ಲ. ಮಹದಾಯಿ ನ್ಯಾಯಾಧಿಕರಣದ ತೀರ್ಪಿನಂತೆ ಸದ್ಯಕ್ಕೆ ಕರ್ನಾಟಕಕ್ಕೆ 8.02 ಟಿಎಂಸಿ ಅಡಿಯಷ್ಟು ನೀರು ವಿದ್ಯುತ್ ಉತ್ಪಾದನೆಗೆ ಸೇರಿ 13.42 ಟಿಎಂಸಿ ಅಡಿ ನೀರು ಹಂಚಿಕೆ ಮಾಡಲಾಗಿದೆ. ಇದರಲ್ಲಿ ಕುಡಿಯುವ ನೀರು ಉದ್ದೇಶಕ್ಕೆಂದು ಕಳಸಾದಿಂದ 1.72 ಟಿಎಂಸಿ ಅಡಿ, ಬಂಡೂರಿಯಿಂದ 2.18 ಟಿಎಂಸಿ ಅಡಿ ನೀರು ಪಡೆಯಬಹುದಾಗಿದೆ.
ಇದಕ್ಕಾಗಿ ಜಲಸಂಪನ್ಮೂಲ ಇಲಾಖೆ ಈಗಾಗಲೇ ಅಂದಾಜು 1,600 ಕೋಟಿ ರೂ.ಗಳ ಡಿಪಿಆರ್ ಸಿದ್ಧಪಡಿಸಿದೆ. ಕಳಸಾ-ಬಂಡೂರಿ ನಾಲಾ ಯೋಜನೆ ಅನುಷ್ಠಾನ ನಿಟ್ಟಿನಲ್ಲಿ ಕೇಂದ್ರ ಅರಣ್ಯ ಇಲಾಖೆ, ವನ್ಯಜೀವಿ ಮಂಡಳಿ ಇನ್ನಿತರ ಇಲಾಖೆಗಳ ಪರವಾನಗಿ ಪಡೆಯಬೇಕಾಗಿದೆ. ಕಳಸಾ ಹಳ್ಳಕ್ಕೆ ಇರುವ ತಡೆಗೋಡೆ ತೆಗೆಯಲು ಮೊದಲ ಆದ್ಯತೆ ನೀಡಬೇಕಾಗಿದೆ. ಇದರಿಂದ ಕನಿಷ್ಟ ಒಂದು ಟಿಎಂಸಿ ಅಡಿಯಷ್ಟಾದರೂ ನೀರು ನೈಸರ್ಗಿಕವಾಗಿ ಹರಿದು ಬಂದು ಮಲಪ್ರಭಾ ಸೇರಿದಂತಾಗಲಿದೆ.
ಹೋರಾಟಗಾರರಿಂದ ಹುಬ್ಬಳ್ಳಿಯಲ್ಲಿ ಸಂಭ್ರಮಾಚರಣೆ: ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದರಿಂದ ಮಹದಾಯಿ ಹೋರಾಟಗಾರರು ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ಸಂಭ್ರಮಾಚರಣೆ ನಡೆಸಿದರು. ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ, ರೈತರ ಹೋರಾಟಕ್ಕೆ ಜಯ ಸಿಕ್ಕಿದೆ. ಕೇಂದ್ರ ಅಧಿಸೂಚನೆ ಹೊರಡಿಸಿದ್ದು ಅಭಿನಂದನೀಯ. ಮುಖ್ಯಮಂತ್ರಿಗಳು ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಬೇಕು. ಹೋರಾಟದಲ್ಲಿ ಅಸುನೀಗಿದ 12 ಜನರ ಕುಟುಂಬದವರಿಗೆ ಪರಿಹಾರ ವಿತರಣೆಯಾಗಬೇಕು. ರೈತರ ಮೇಲೆ ದಾಖಲಿಸಿದ ಎಲ್ಲ ಮೊಕದ್ದಮೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಮಹದಾಯಿ ಅಧಿಸೂಚನೆಗೆ ಸುಪ್ರೀಂಕೋರ್ಟ್ ಸೂಚನೆ, ಕೇಂದ್ರ ಸರಕಾರ ಅದನ್ನು ಪಾಲಿಸಿರುವುದು ಸಂತಸದ ವಿಚಾರ. ಯೋಜನೆಯ ತ್ವರಿತ ಅನುಷ್ಠಾನದ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಅರಣ್ಯ ಇಲಾಖೆ ಸೇರಿ ವಿವಿಧ ಇಲಾಖೆಗಳ ಅನುಮತಿ ಪಡೆಯಲು ಈ ಭಾಗದ ಸಂಸದರು ತಮ್ಮ ಬದ್ಧತೆಯನ್ನು ತೋರಬೇಕಾಗಿದೆ.
-ವಿಕಾಸ ಸೊಪ್ಪಿನ, ಮಹದಾಯಿ ಹೋರಾಟಗಾರ
* ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
Politics: ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್