ಮಕ್ಕಳ ಪೌಷ್ಟಿಕತೆಗೆ “ಸಾವಯವ ನುಗ್ಗೆ ಪೌಡರ್’ : ಕೊಪ್ಪಳ ಜಿಲ್ಲಾಡಳಿತದ ಹೊಸ ಪ್ರಯೋಗ
Team Udayavani, Nov 26, 2020, 4:19 PM IST
ಕೊಪ್ಪಳ: ಅಂಗನವಾಡಿ ಮಕ್ಕಳಲ್ಲಿ ಅಪೌಷ್ಟಿಕತೆಯ ಎಂಬ ಪೆಡಂಭೂತ ಬೆಂಬಿಡದೇ ಕಾಡುತ್ತಿದೆ. ಇದರ ನಿವಾರಣೆಗೆ ಸರ್ಕಾರ ಹಲವು ಯೋಜನೆ ಜಾರಿ ತಂದಿದೆ. ಇದರೊಟ್ಟಿಗೆ ಕೊಪ್ಪಳ ಜಿಲ್ಲಾಡಳಿತ ಹೆಚ್ಚು ಆಸಕ್ತಿ ವಹಿಸಿ ಅಪೌಷ್ಟಿಕತೆ ನಿವಾರಿಸಲು ಸ್ಥಳೀಯವಾಗಿ ಬೆಳೆದ “ಸಾವಯವ ನುಗ್ಗೆ ಪೌಡರ್’ ಪೂರೈಕೆಗೆ ಮುಂದಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಪಾಲಕರಲ್ಲಿನ ತಿಳಿವಳಿಕೆ ಕೊರತೆ ಹಾಗೂ ಬಡತನದಿಂದಾಗಿ ಮಕ್ಕಳಿಗೆ ಬಾಲ್ಯದಲ್ಲಿಯೇ ವಿವಾಹ ಮಾಡುತ್ತಿರುವುದು ಇಂದಿಗೂ ಜೀವಂತವಾಗಿವೆ. ಇದೇ ಕಾರಣಕ್ಕೆ ಅಪ್ರಾಪೆ¤ಯರು ವಯಸ್ಸಿಗೆ ಬರುವ ಮೊದಲೇ ಗರ್ಭಿಣಿಯರಾಗಿ
ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. ಅವರಿಗೆ ಜನಿಸುವ ಮಕ್ಕಳು ಅಪೌಷ್ಟಿಕತೆಯಿಂದಲೇ ಬಳಲುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ರಾಜ್ಯ ಹಾಗೂ ಕೇಂದ್ರ ಸರ್ಕಾರ ಇಂತಹ ಅಪೌಷ್ಟಿಕ ಮಕ್ಕಳ ಆರೋಗ್ಯವನ್ನು ಸದೃಢ ಮಾಡಬೇಕೆಂಬ ಉದ್ದೇಶದಿಂದ ಹಲವು ಯೋಜನೆ ಜಾರಿಗೊಳಿಸಿವೆ. ಇಷ್ಟಾದರೂ ಜಿಲ್ಲೆಯಲ್ಲಿನ ಅಪೌಷ್ಟಿಕತೆ ಪ್ರಮಾಣ ದೊಡ್ಡಮಟ್ಟದಲ್ಲಿ ಸುಧಾರಣೆ ಕಾಣುತ್ತಿಲ್ಲ. ಆದರೆ ಸರ್ಕಾರದ ಯೋಜನೆಗಳ ಜತೆಗೆ ಜಿಲ್ಲಾಡಳಿತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ಅಪೌಷ್ಟಿಕ ಮಕ್ಕಳ
ಆರೋಗ್ಯ ಸುಧಾರಣೆ ನಿಟ್ಟಿನಲ್ಲಿ ಹೊಸದೊಂದು ಪ್ರಯೋಗಕ್ಕೆ ಕೈ ಹಾಕಿದೆ.
ಇದನ್ನೂ ಓದಿ:ಕೋವಿಡ್ ಹೆಸರಲ್ಲಿ ಹಿಂಸೆ ಸಲ್ಲದು; ಪೊಲೀಸರು ಮತ್ತು ಅಧಿಕಾರಿಗಳಿಗೆ ‘ಯೋಗಿ ಖಡಕ್ ಸೂಚನೆ’
ಈಗಾಗಲೆ ಮಕ್ಕಳಿಗೆ ಗೋದಿ, ರಾಗಿ, ಅಕ್ಕಿ, ಬೆಲ್ಲ ಪೂರೈಕೆ ಮಾಡಲಾಗುತ್ತಿದೆ. ಇದರೊಟ್ಟಿಗೆ ಸಾವಯವ ನುಗ್ಗೆ ಪೌಡರ್ ಇದರಲ್ಲಿ ಸೇರ್ಪಡೆ ಮಾಡಲು ಮುಂದಾಗಿದೆ. ಆರಂಭದಲ್ಲಿ 100 ಅಪೌಷ್ಟಿಕ ಮಕ್ಕಳಿಗೆ ಇದರ ಪ್ರಯೋಗ ನಡೆಸಿದೆ. ಪ್ರತಿ ತಾಲೂಕಿಗೆ 20
ಮಕ್ಕಳಂತೆ ಪಟ್ಟಿ ಮಾಡಿದ್ದು ಅವರಿಗೆ 0.75 ಗ್ರಾಂ ಪೌಡರ್ ಅನ್ನು ಮಾಲ್ಟ್ ನೊಂದಿಗೆ ಮಿಶ್ರಣ ಮಾಡಿ ಕೊಡಲು ಮುಂದಾಗಿದೆ.
ಪೌಡರ್ನಿಂದ ಹಸಿವು ಹೆಚ್ಚಾಗುತ್ತೆ:
ಅಪೌಷ್ಟಿಕ ಮಕ್ಕಳಲ್ಲಿ ಸಾಮಾನ್ಯವಾಗಿ ತೂಕ ಕಡಿಮೆ ಇರುತ್ತದೆ. ಬೆಳವಣಿಗೆಯಲ್ಲೂ ಕುಂಠಿತವಾಗಿರುತ್ತದೆ. ಅಂತಹ ಮಕ್ಕಳಿಗೆ ಪೌಡರ್ ಮಾಲ್ಟ್ ಕೊಡುವುದರಿಂದ ಹಸಿವು ಹೆಚ್ಚಾಗುತ್ತದೆ. ಹಸಿವು ಹೆಚ್ಚಾದಂತೆ ಚೆನ್ನಾಗಿ ಊಟ ಮಾಡಲು ಆಸಕ್ತಿ
ತೋರಿಸುತ್ತಾರೆ. ಮಗು ಊಟ ಮಾಡುತ್ತಿದ್ದಂತೆ ದೇಹದಲ್ಲಿ ತೂಕ ಹೆಚ್ಚಾಗುವ ಜತೆಗೆ ಬೆಳವಣಿಗೆಯ ಪ್ರಕ್ರಿಯೆಯೂ ಕಂಡು ಬರುತ್ತದೆ. ಇದಲ್ಲದೇ ನುಗ್ಗೆ ಪೌಡರ್ ಅನ್ನು ಜಿಲ್ಲಾಡಳಿತವು ಸ್ಥಳೀಯ ಒಂದು ಸಂಸ್ಥೆಯಿಂದ ಪಡೆಯುತ್ತಿದೆ.
ಈ ಸಂಸ್ಥೆ ನುಗ್ಗೆ ಗಿಡಗಳಿಗೆ ಯಾವುದೇ ರಾಸಾಯನಿಕ ಪೌಡರ್ ಬಳಕೆ ಮಾಡದೇ ಸಾವಯವ ಪದ್ಧತಿ ಅನುಸಾರವೇ ಬೆಳೆಸುತ್ತಿದೆ. ನಿಗದಿತ ತಿಂಗಳಲ್ಲಿ ಆ ಎಲೆಗಳನ್ನು ಸಂಗ್ರಹಿಸಿ ಪೌಡರ್ ಮಾಡಿ ಸಿದ್ಧಪಡಿಸುತ್ತಿದೆ. ಹೀಗಾಗಿ ಜಿಲ್ಲಾಡಳಿತ ನುಗ್ಗೆ ಪೌಡರ್ ಪೂರೈಸಿ, ಅದರ ಪ್ರತಿಫಲವನ್ನು ನಿರೀಕ್ಷೆ ಮಾಡುತ್ತಿದೆ.