“ಒಡಿಎಫ್ ಪ್ಲಸ್’ನತ್ತ ದ.ಕ., ಉಡುಪಿ ದಾಪುಗಾಲು
ಶೌಚಾಲಯ ನಿರ್ಮಾಣದ ಜತೆ ಘನತ್ಯಾಜ್ಯ, ದ್ರವ ತ್ಯಾಜ್ಯ ನಿರ್ವಹಣೆಗೂ ವೇಗ
Team Udayavani, Apr 16, 2022, 8:03 AM IST
ಮಂಗಳೂರು: “ಬಯಲು ಬಹಿರ್ದೆಸೆ ಮುಕ್ತ’ ಎಂದು ಘೋಷಿಸಲ್ಪಟ್ಟಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು “ಒಡಿಎಫ್ ಪ್ಲಸ್’ನತ್ತ ದಾಪುಗಾಲಿಡುತ್ತಿವೆ.
“ಬಯಲು ಬಹಿರ್ದೆಸೆ ಮುಕ್ತ’ (ಒಡಿಎಫ್-ಓಪನ್ ಡಿಫಿಕೇಶನ್ ಫ್ರೀ) ಸ್ಥಿತಿಯ ಸುಸ್ಥಿರತೆ ಕಾಪಾಡಲು “ಒಡಿಎಫ್ ಪ್ಲಸ್’ ಹಂತದ ವರೆಗೆ ವಿವಿಧ ಚಟು ವಟಿಕೆಗಳನ್ನು ಅನುಷ್ಠಾನಗೊಳಿಸಬೇಕಿದೆ. ಒಡಿಎಫ್ ಪ್ರಾಥಮಿಕ ಹಂತವಾದರೆ ಅನಂತರ ಒಡಿಎಫ್ ಪ್ಲಸ್-1, ಒಡಿಎಫ್ ಪ್ಲಸ್-2 ಮತ್ತು ಒಡಿಎಫ್ ಪ್ಲಸ್-3 ಹಂತಗಳನ್ನು ಯಶಸ್ವಿಯಾಗಿ ಪೂರೈಸಿದರೆ “ಒಡಿಎಫ್ ಪ್ಲಸ್’ ಮಾನ್ಯತೆ ಲಭಿಸುತ್ತದೆ.
ದ.ಕ. ಜಿಲ್ಲೆ 2016 ಮತ್ತು ಉಡುಪಿ ಜಿಲ್ಲೆ 2019ರಲ್ಲಿ “ಬಯಲು ಬಹಿರ್ದೆಸೆ ಮುಕ್ತ’ ಎಂದು ಘೋಷಿಸಲ್ಪಟ್ಟಿದ್ದವು. ಅದುವರೆಗೂ ಶೌಚಾ ಲಯಗಳ ನಿರ್ಮಾಣಕ್ಕೆ ಮತ್ತು ನಿರ್ವಹಣೆಗೆ ಆದ್ಯತೆ ನೀಡಲಾಗಿತ್ತು. ಆ ಬಳಿಕ ಇನ್ನಷ್ಟು ಗೃಹ ಹಾಗೂ ಸಮುದಾಯ ಶೌಚಾಲಯಗಳ ನಿರ್ಮಾಣದ ಜತೆಗೆ ಘನ ತ್ಯಾಜ್ಯ ನಿರ್ವಹಣೆಗೂ ಮಹತ್ವ ನೀಡಲಾಯಿತು. ಮುಂದೆ ಒಡಿಎಫ್ ಪ್ಲಸ್ ಹಂತ ತಲುಪುವ ನಿಟ್ಟಿನಲ್ಲಿ ಗ್ರಾ.ಪಂ. ಮಟ್ಟದಲ್ಲಿ ಹಲವು ಚಟುವಟಿಕೆಗಳು ವೇಗ ಪಡೆದುಕೊಂಡಿವೆ.
ತ್ಯಾಜ್ಯ ನಿರ್ವಹಣೆಗೂ ಆದ್ಯತೆ
ಒಡಿಎಫ್ ಪ್ಲಸ್-1 ಹಂತದಲ್ಲಿ ಗ್ರಾಮದ ಎಲ್ಲ ಮನೆಗಳಲ್ಲಿ ಕ್ರಿಯಾತ್ಮಕ ಶೌಚಾಲಯ ಇರುವುದು, ಎಲ್ಲ ಶಾಲೆಗಳು, ಅಂಗನವಾಡಿಗಳು, ಪಂಚಾಯತ್ ಕಚೇರಿಗಳಲ್ಲಿ ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಕ್ರಿಯಾತ್ಮಕ ಶೌಚಾಲಯ ಇರಬೇಕು. ಘನತ್ಯಾಜ್ಯ ನಿರ್ವಾಹಣೆ ಸೌಲಭ್ಯವಿರಬೇಕು. ಒಡಿಎಫ್ ಪ್ಲಸ್-2 ಹಂತದಲ್ಲಿ ಈ ಸೌಲಭ್ಯಗಳ ಜತೆಗೆ ದ್ರವ ತ್ಯಾಜ್ಯ (ಬ್ಲ್ಯಾಕ್ ವಾಟರ್) ನಿರ್ವಹಣೆ ಸೌಲಭ್ಯವೂ ಇರಬೇಕು. ಒಡಿಎಫ್ ಪ್ಲಸ್ 3 ಹಂತದಲ್ಲಿ ಈ ಹಿಂದಿನ 2 ಹಂತಗಳ ಎಲ್ಲ ಸೌಲಭ್ಯಗಳೊಂದಿಗೆ ಎಲ್ಲ ಸಾರ್ವಜನಿಕ ಸ್ಥಳಗಳು ಕಸ, ಪ್ಲಾಸ್ಟಿಕ್ ತ್ಯಾಜ್ಯ ಮುಕ್ತವಾಗಿರಬೇಕು, ಕೊಳಚೆ ನೀರು, ತ್ಯಾಜ್ಯ ನೀರು ನಿಲ್ಲಬಾರದು, ದ್ರವ ತ್ಯಾಜ್ಯ ನಿರ್ವಹಣೆ (ಕಪ್ಪು ಮತ್ತು ಬೂದು ಬಣ್ಣ) ಸೌಲಭ್ಯ ಕೂಡ ಇರಬೇಕು.
ಇದನ್ನೂ ಓದಿ:ಅಂಜನಾದ್ರಿ ಮೆಟ್ಟಿಲು ಹತ್ತುವ ವೇಳೆ ಹೃದಯಾಘಾತ : ಮುಂಬೈ ಮೂಲದ ಪ್ರವಾಸಿಗ ಸಾವು
ಕಾಂಪೋಸ್ಟ್ ಪಿಟ್ ಕಡ್ಡಾಯ
“ಒಡಿಎಫ್ ಪ್ಲಸ್’ ಮಾನ್ಯತೆ ಪಡೆಯಲು ಘನ ತ್ಯಾಜ್ಯ ಘಟಕದಲ್ಲಿ ಕಾಂಪೋಸ್ಟ್ ಪಿಟ್ (ಗೊಬ್ಬರ ಗುಂಡಿ) ಕೂಡ ಕಡ್ಡಾಯ. ಸಮುದಾಯ ಮಟ್ಟದಲ್ಲಿ ಕಾಂಪೋಸ್ಟ್ ಪಿಟ್ಗಳನ್ನು ಹೊಂದಿರದ ಗ್ರಾ.ಪಂ.ಗಳು ಹಾಗೂ ಸ್ವತ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಅನುದಾನ ಲಭ್ಯವಿಲ್ಲದ ಗ್ರಾ.ಪಂ.ಗಳು ನರೇಗಾ ಯೋಜನೆಯಡಿ ಕಾಮಗಾರಿ ನಡೆಸಲು ಸೂಚಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಮುಂದಿನ ಜುಲೈ ಒಳಗೆ “ಒಡಿಎಫ್ ಪ್ಲಸ್-2′ ಬಹುತೇಕ ಪ್ರಕ್ರಿಯೆಗಳು ಪೂರ್ಣಗೊಳ್ಳಲಿದ್ದು, 2023ರ ಜ. 26ರೊಳಗೆ “ಒಡಿಎಫ್ ಪ್ಲಸ್’ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
– ಡಾ| ನವೀನ್ ಭಟ್, ಉಡುಪಿ ಜಿ.ಪಂ. ಸಿಇಒ
ದ.ಕ. ಈಗಾಗಲೇ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಘೋಷಣೆಯಾಗಿದೆ. ಶೇ. 80ರಷ್ಟು ಗ್ರಾ.ಪಂ.ಗಳ ಘನತ್ಯಾಜ್ಯ ನಿರ್ವಹಣೆ ಘಟಕ ಇದೆ. ಬಚ್ಚಲು ಮನೆಯ ದ್ರವ ತ್ಯಾಜ್ಯ ವಿಲೇವಾರಿಗೆ ಬಚ್ಚಲು ಗುಂಡಿ ನಿರ್ಮಾಣ ಮಾಡಲಾಗಿದೆ. ಶೀಘ್ರದಲ್ಲೇ “ಒಡಿಎಫ್ ಪ್ಲಸ್’ ಹಂತ ಪೂರ್ಣಗೊಳ್ಳಲಿದೆ.
– ಡಾ| ಕುಮಾರ್, ದ.ಕ. ಜಿ.ಪಂ. ಸಿಇಒ
– ಸಂತೋಷ್ ಬೊಳ್ಳೆಟ್ಟು