ಉಪ ಗಣಿಗಾರಿಕೆ ನಡೆಸಲು ಅವಕಾಶ
ಲೀಸ್ ಅವಧಿಯಲ್ಲಿ ತಿದ್ದುಪಡಿ ಮಾಡಲು ಸಂಪುಟ ಸಭೆ ನಿರ್ಧಾರ
Team Udayavani, Nov 9, 2021, 5:47 AM IST
ಬೆಂಗಳೂರು: ಗಣಿಗಾರಿಕೆ ಚಟುವಟಿಕೆಗಳಿಗೆ ಸಂಬಂಧಿಸಿ ಪರಿಶೀಲನೆ ನಡೆಸಲಾಗಿದ್ದು, ಪ್ರಮುಖ ಗಣಿಗಾರಿಕೆ ಉದ್ಯಮಿಗಳು ಉಪ ಗಣಿಗಾರಿಕೆ ನಡೆಸಲು ಅವಕಾಶ ನೀಡಲಾಗಿದೆ ಹಾಗೂ ಅವರ ಲೀಸ್ ಅವಧಿಯಲ್ಲಿ ತಿದ್ದುಪಡಿ ಮಾಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಉಪಖನಿಜಗಳ ಗುತ್ತಿಗೆ ಅವಧಿ ಕುರಿತಂತೆ “ಕರ್ನಾಟಕ ಉಪ ಖನಿಜ ರಿಯಾಯಿತಿ (ತಿದ್ದುಪಡಿ)’ ನಿಯಮಗಳಿಗೆ ಅನುಮೋದನೆ ನೀಡಲಾಗಿದ್ದು, ಪ್ರಮುಖ ಗಣಿಗಾರಿಕೆ ನಡೆಸುವವರು ಉಪ ಗಣಿಗಾರಿಕೆ ನಡೆಸುವ ಲೀಸ್ ಅವಧಿಯನ್ನು 50 ವರ್ಷಗಳಿಗೆ ವಿಸ್ತರಿಸಲಾಗಿದೆ. ಈ ಹಿಂದೆ ಪ್ರಮುಖ ಗಣಿಗಾರಿಕೆ ನಡೆಸುವವರು ಮಾತ್ರ 50 ವರ್ಷ ಹಾಗೂ ಉಪ ಗಣಿಗಾರಿಕೆ ನಡೆಸುವವರು 30 ವರ್ಷಗಳ ಲೀಸ್ ಅವಧಿ ಹೊಂದಿದ್ದರು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ನಿವೃತ್ತ ನ್ಯಾಯಮೂರ್ತಿ ಸಮಿತಿ
ವಿವಿಧ ಕಾಮಗಾರಿಗಳ ಟೆಂಡರ್ಗಳ ಪಾರದರ್ಶಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸರಕಾರ ನಿರ್ಧರಿಸಿದೆ. 50 ಕೋಟಿ ರೂ.ಗಳಿಗೂ ಹೆಚ್ಚುವರಿ ಮೊತ್ತದ ಟೆಂಡರ್ ಪ್ರಕ್ರಿಯೆಗೆ ನಿವೃತ್ತ ಹೈಕೋರ್ಟ್ ನ್ಯಾಯಧೀಶರ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು. ಏಕಗವಾಕ್ಷಿ ಮಾದರಿಯಲ್ಲಿ ಈ ಸಮಿತಿ ಎಲ್ಲ ಪ್ರಕ್ರಿಯೆಗಳನ್ನು ನೋಡಿಕೊಳ್ಳಲಿದೆ. ಬಿಡ್ದಾರರ ಪೂರ್ವಾಪರ ಪರಿಶೀಲಿಸಿ ಈ ಸಮಿತಿ ಕ್ರಮ ಕೈಗೊಳ್ಳಲಿದೆ. ಈ ಸಮಿತಿಯಡಿ ತಜ್ಞರೂ ಇರುತ್ತಾರೆ. ಅಗತ್ಯ ಬಿದ್ದರೆ ಅಂತಹ ಎರಡು ಸಮಿತಿಗಳನ್ನು ರಚಿಸಲು ಅವಕಾಶವಿದೆ ಎಂದು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ನೂತನ ಹಾಲು ಒಕ್ಕೂಟ
ಹಾಲು ಉತ್ಪಾದಕರ ಬೇಡಿಕೆ ಹಿನ್ನೆಲೆಯಲ್ಲಿ ನೂತನ ಹಾಲು ಒಕ್ಕೂಟ ಗಳನ್ನು ರಚಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಧಾರವಾಡ ಮತ್ತು ಹಾವೇರಿಯ ರೈತರು ಧಾರವಾಡ ಹಾಲು ಒಕ್ಕೂಟದ ಅಡಿ ಬರುತ್ತಾರೆ. ಇನ್ನುಮುಂದೆ ಹಾವೇರಿ ಹಾಲು ಒಕ್ಕೂಟ ಪ್ರತ್ಯೇಕವಾಗಿ ರಚನೆಯಾಗಲಿದೆ.
ಇದನ್ನೂ ಓದಿ:12ರ ವರೆಗೂ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ
ಬೆಳಗಾವಿಯಲ್ಲೇ ಅಧಿವೇಶನ
ಈ ಬಾರಿಯ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಭೂಮಿ ಮಂಜೂರು
ಬಹುಮಹಡಿ ವಸತಿ ಯೋಜನೆಗೆ 69 ಎಕರೆ ಭೂಮಿ ಮಂಜೂರು ಮಾಡಲಾಗಿದೆ. 1 ಲಕ್ಷ ವಸತಿ ಯೋಜನೆ ಸಂಬಂಧ ರಾಜೀವ್ಗಾಂಧಿ ವಸತಿ ನಿಗಮಕ್ಕೆ ಭೂಮಿ ನೀಡಲು ಸಮ್ಮತಿಸಲಾಗಿದ್ದು, ಈ ವರ್ಷ 80 ಸಾವಿರ ಮನೆ ಕಟ್ಟುವ ಗುರಿ ಇಟ್ಟುಕೊಳ್ಳಲಾಗಿದೆ.
ಬಿಟ್ಕಾಯಿನ್ ಪ್ರಕರಣ: ಚರ್ಚೆ ನಡೆದಿಲ್ಲ
ಬಿಟ್ಕಾಯಿನ್ ಪ್ರಕರಣ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿಲ್ಲ. ಸಾರ್ವಜನಿಕವಾಗಿ ಮಾತಾಡುವ ವಿಷಯಗಳು ಸಚಿವ ಸಂಪುಟ ಸಭೆಯಲ್ಲಿ ಬರಬೇಕೆಂದಿಲ್ಲ. ಈ ಪ್ರಕರಣವನ್ನು ಜಾರಿ ನಿರ್ದೇಶನಾಲಯಕ್ಕೆ ವಹಿಸಿರುವ ಬಗ್ಗೆಯೂ ತನಗೆ ಮಾಹಿತಿಯಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಹೇಳಿದರು.
ನೇರ ನೇಮಕಾತಿಗೆ ಕ್ರಮ
ಇಲಾಖೆಗಳಲ್ಲಿ ಸಿಬಂದಿಯ ನೇರ ನೇಮಕಾತಿ ಸಂಬಂಧ ಗೊಂದಲ ಗಳಿದ್ದು, ಅದನ್ನು ಬಗೆಹರಿಸಲು ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ. ಹುದ್ದೆಗಳ ಆಧಾರದಲ್ಲಿ ನೇರ ನೇಮಕಾತಿಗೆ ಕ್ರಮ ಕೈಗೊಳ್ಳಲು ತೀರ್ಮಾ ನಿಸಲಾಗಿದೆ. ಹುದ್ದೆಗಳ ಸಂಖ್ಯೆ ಮತ್ತು ಖಾಲಿಯಿರುವ ಹುದ್ದೆಗಳ ಸಂಖ್ಯೆ 50:50- ಅನುಪಾತದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಇತರ ನಿರ್ಧಾರಗಳು
-ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಕ್ರಿಯಾಯೋಜನೆಯಲ್ಲಿ ಅನುಮೋದಿತ ಹೊಸಪೇಟೆ – ಬಳ್ಳಾರಿ ರಸ್ತೆ ಎಚ್ಎಲ್ಸಿ ಕಾಲುವೆಯಿಂದ ಇಂಗಳಗಿ ಕ್ರಾಸ್ವರೆಗಿನ ಚತುಷ್ಪಥ ರಸ್ತೆ ಅಭಿವೃದ್ಧಿಗೆ 30 ಕೋ. ರೂ. ಅನುದಾನ
– ನೇಕಾರ ಸಮುದಾಯಕ್ಕೆ 376 ಕೋ. ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ. ಎಸ್ಸಿಟಿಎಸ್ಪಿ ಯೋಜನೆ ಯಿಂದ 376 ಕೋ. ರೂ. ಮೀಸಲು ಇಡಲು ನಿರ್ಧಾರ ಕೈಗೊಳ್ಳಲಾಗಿದೆ.
– ದಕ್ಷಿಣಕನ್ನಡದಲ್ಲಿ ಕಿಂಡಿ ಅಣೆಕಟ್ಟು ಯೋಜನೆಗಾಗಿ 500 ಕೋಟಿ ರೂ.ಗಳ ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಒಟ್ಟು ಯೋಜನೆಯ ವೆಚ್ಚ 3,900 ಕೋ. ರೂ.ಗಳಾಗಿವೆ.
– ಸಿರಗುಪ್ಪದಲ್ಲಿ ವೇದಾವತಿ ನದಿಗೆ ಸೇತುವೆ ನಿರ್ಮಾಣಕ್ಕೆ 30 ಕೋಟಿ ರೂ. ಬಿಡುಗಡೆ.
-ರಾಜ್ಯ ರಸ್ತೆ ಪ್ರಾಧಿಕಾರಕ್ಕೆ 825 ಕೋಟಿ ರೂ. ಬಿಡುಗಡೆಗೆ ತೀರ್ಮಾನ.