ಸಾಂಪ್ರದಾಯಿಕ ಪರ್ಯಾಯ ಮೆರವಣಿಗೆ
Team Udayavani, Jan 18, 2022, 5:50 AM IST
ಉಡುಪಿ: ಶ್ರೀಕೃಷ್ಣ ಮಠದ ಮಂಗಳವಾರ ಮುಂಜಾವದ ಪರ್ಯಾಯೋತ್ಸವಕ್ಕೆ ಮುನ್ನ ಭಾವೀ ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಕಾಪು ಬಳಿಯ ದಂಡತೀರ್ಥದಲ್ಲಿ ಅವಗಾಹನಸ್ನಾನ ಮಾಡಿ ನಗರದ ಜೋಡುಕಟ್ಟೆಗೆ ಆಗಮಿಸಿದಾಗ ಭಕ್ತರು, ಗಣ್ಯರು ಸ್ವಾಗತಿಸಿದರು.
ಇವರೊಂದಿಗೆ ಇತರ ಮಠಾಧೀಶರೂ ಪೇಟ ಧರಿಸಿ ಅಲಂಕೃತ ವಾಹನಗಳ ಮೇಲೆ ಮೇನೆಯನ್ನು ಇರಿಸಿ ಅದರಲ್ಲಿ ಕುಳಿತು ಮೆರವಣಿಗೆಯಲ್ಲಿ ಪಾಲ್ಗೊಂಡರು. ಜೋಡುಕಟ್ಟೆಯಿಂದ ಹಳೆಯ ತಾಲೂಕು ಕಚೇರಿ ರಸ್ತೆ, ಹಳೆಯ ಡಯಾನ ವೃತ್ತ, ಕೊಳದಪೇಟೆ, ತೆಂಕುಪೇಟೆ ಮಾರ್ಗವಾಗಿ ರಥಬೀದಿಯನ್ನು ಆಕರ್ಷಕ ಮೆರವಣಿಗೆ ಪ್ರವೇಶಿಸಿತು.
ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ಮೆರವಣಿಗೆಗೆ ಆಹ್ವಾನಿಸಲಾದ ಸುಮಾರು 40 ಜನಪದ ಕಲಾವಿದರ ತಂಡಗಳ ಕಾರ್ಯಕ್ರಮಗಳನ್ನು ರದ್ದುಪಡಿಸಿದ ಕಾರಣ ಸಾಂಪ್ರದಾಯಿಕವಾದ ವಾದ್ಯ, ಬ್ಯಾಂಡ್, ಚೆಂಡೆ, ಡೊಳ್ಳು ವಾದನ, ತಟ್ಟಿರಾಯ ಬಿರುದಾವಳಿಗಳು ಮಾತ್ರ ಅವಕಾಶವಿತ್ತು. ಕೋವಿಡ್ ಹಿನ್ನೆಲೆಯಲ್ಲಿ ದೂರದ ಊರಿನವರು ಕಡಿಮೆ ಸಂಖ್ಯೆಯಲ್ಲಿ ಭೇಟಿ ನೀಡಿದ್ದರು. ಸ್ಥಳೀಯರು ವಿವಿಧೆಡೆ ನಿಂತು ಮೆರವಣಿಗೆ ವೀಕ್ಷಿಸುತ್ತಿರುವುದು ಕಂಡುಬಂತು. ಹೆಚ್ಚಿನ ಮಂದಿ ಮನೆಯಲ್ಲಿಯೇ ನೇರ ಪ್ರಸಾರ ಕಾರ್ಯಕ್ರಮ ವೀಕ್ಷಿಸಿದರು.
ಬಿಗಿ ಪೊಲೀಸ್ ಭದ್ರತೆ
ಪರ್ಯಾಯ ಮೆರವಣಿಗೆ ಹಾದುಹೋಗುವ ಮಾರ್ಗ ಸಹಿತ ನಗರದ ಪ್ರಮುಖ ಭಾಗಗಳಲ್ಲಿ ಖಾಕಿ ಸರ್ಪಗಾವಲು ಹಾಕಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, 5 ಮಂದಿ ಡಿವೈಎಸ್ಪಿಗಳು, 47 ಮಂದಿ ಪಿಎಸ್ಐ, 62 ಮಂದಿ ಎಎಸ್ಐ, 529 ಮಂದಿ ಕಾನ್ಸ್ಟೆಬಲ್ ಹಾಗೂ ಹೆಡ್ಕಾನ್ಸ್ಟೆಬಲ್ಗಳು, 93ಮಂದಿ ಮಹಿಳಾ ಪೊಲೀಸ್ ಕಾನ್ಸ್ಟೆàಬಲ್ ಹಾಗೂ ಹೆಡ್ಕಾನ್ಸ್ಟೆಬಲ್ಗಳು, 7 ಡಿಎಆರ್, 3 ಕೆಎಸ್ಆರ್ಪಿ ತುಕಡಿಳಲ್ಲಿ ಪೊಲೀಸರು ಅಲ್ಲಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದರು.
ಜನದಟ್ಟಣೆ ಕಡಿಮೆ
ಕೊರೊನಾ ತಡೆಗಾಗಿ ರಾಜ್ಯ ಸರಕಾರ ರಾತ್ರಿ ಕರ್ಫ್ಯೂ ಜಾರಿ ಮಾಡಿರುವುದು ಸೇರಿದಂತೆ ಶ್ರೀ ಕೃಷ್ಣಾಪುರ ಮಠದಿಂದ ಸರಳ ಪರ್ಯಾಯಕ್ಕೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಉಡುಪಿ ನಗರದಲ್ಲಿ ಜನ ದಟ್ಟಣೆ ಇರಲಿಲ್ಲ.
ಪ್ರತಿ ಪರ್ಯಾಯೋತ್ಸವದ ಸಂದರ್ಭದಲ್ಲಿ ನಗರದ್ಯಾಂತ ರಾತ್ರಿಪೂರ್ತಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಜತೆಗೆ ಉಡುಪಿ, ದಕ್ಷಿಣ ಕನ್ನಡ ಸಹಿತವಾಗಿ ಬೇರೆ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಶ್ರೀಕೃಷ್ಣ
ಭಕ್ತರು ಉಡುಪಿಗೆ ಆಗಮಿಸುತ್ತಿದ್ದರು. ನಗರದ ಇಕ್ಕೆಲದ ರಸ್ತೆಗಳಲ್ಲೂ ಸಾಂಸ್ಕೃತಿಕ ವೈಭವವಿರುತಿತ್ತು. ಆದರೆ ಈ ಬಾರಿ ಮಠದ ಆವರಣದಲ್ಲಿ ನಡೆದಿರುವ ಸಾಂಸ್ಕೃತಿಕ ಕಾರ್ಯಕ್ರಮ ಹೊರತುಪಡಿಸಿ ಬೇರೆ ಎಲ್ಲೂ ಕಾರ್ಯಕ್ರಮ ನಡೆದಿಲ್ಲ.
ಇಡೀ ನಗರ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಈ ಹಿಂದೆ ನೇರವಾಗಿ ಬಂದು ಪರ್ಯಾಯ ಮೆರವಣಿಗೆ ವೀಕ್ಷಿಸುತ್ತಿದ್ದ ಹೆಚ್ಚಿನ ಜನರು ಮನೆಯಲ್ಲೇ ಇದ್ದು ಲೈವ್ ಮೂಲಕವೇ ಪರ್ಯಾಯೋತ್ಸವ ವೀಕ್ಷಿಸಿದ್ದಾರೆ.