ತೆಕ್ಕಟ್ಟೆ: ಕರ್ಕಾಟಕ ಅಮಾವಾಸ್ಯೆ; ಕೊಮೆ -ಕೊರವಡಿ ಸಮುದ್ರದಲ್ಲಿ ಸ್ನಾನ ಮಾಡಿದ ಜನ
Team Udayavani, Jul 28, 2022, 10:00 AM IST
ತೆಕ್ಕಟ್ಟೆ: ಪ್ರತಿ ವರ್ಷ ಆಷಾಢ ಮಾಸದ ಆಟಿ ಅಮಾವಾಸ್ಯೆಯಂದು ನಂಬಿಕೆಯಂತೆ ಕೊಮೆ, ಕೊರವಡಿ ಕಡಲಿನಲ್ಲಿ ಗುರುವಾರ ಮುಂಜಾನೆಯಿಂದಲೇ ಜನ ಸಮುದ್ರ ಸ್ನಾನಕ್ಕಾಗಿ ಬಹು ಉತ್ಸಾಹದಿಂದ ಪಾಲ್ಗೊಂಡಿರುವ ದೃಶ್ಯ ಕಂಡುಬಂದಿದೆ.
ಕಡಲಿಗೆ ಹಿಡಿ ಮರಳು ಸಮರ್ಪಣೆ: ಸಮುದ್ರ ಸ್ನಾನಕ್ಕೆ ಕಡಲ ತೀರದೆಡೆಗೆ ಆಗಮಿಸುತ್ತಿದ್ದ ಸ್ಥಳೀಯರು ಬರಿಗೈಯಲ್ಲಿ ಬಂದು ಸಮುದ್ರ ಸ್ನಾನಕ್ಕೆ ಇಳಿಯ ಬಾರದು ಎಂಬ ನಂಬಿಕೆ ಇದ್ದು ಅದಕ್ಕೆ ಪೂರಕವಾಗಿ ಸಮುದ್ರ ತೀರದಲ್ಲಿರುವ ಮರಳು ಅಥವಾ ಒಂದು ಗುಲಗುಂಜಿಯನಾದರೂ ಕೈಯಲ್ಲಿ ಹಿಡಿದು ಸಮುದ್ರಕ್ಕೆ ಸಮರ್ಪಿಸಿ ತಮ್ಮ ಗ್ರಹಚಾರ ಪೀಡೆಯನ್ನು ಪರಿಹರಿಸಿಕೊಳ್ಳಬೇಕು ಎನ್ನುವ ನಂಬಿಕೆ ಇದೆ.
ಇದನ್ನೂ ಓದಿ: ಫೇಸ್ಬುಕ್ನಲ್ಲಿ ನಾಯಿ ಖರೀದಿಸಲು ಹೋಗಿ ಹಣ ಕಳೆದುಕೊಂಡ ಯುವಕ
ಈ ಹಿನ್ನೆಲೆಯಲ್ಲಿ ಸ್ನಾನಕ್ಕೆ ತೆರಳುವ ಮುನ್ನ ನೆರೆದವರು ಕೈನಲ್ಲಿ ಒಂದು ಹಿಡಿ ಮರಳು ಹಿಡಿದುಕೊಂಡು ಸಮುದ್ರದ ನೀರಿಗೆ ಅರ್ಪಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂತು. ಆಷಾಢ ಮಾಸದ ಆಟಿ ಅಮಾವಾಸ್ಯೆಯ ದಿನದಂದು ಕಡಲ ಅಬ್ಬರ ಹೆಚ್ಚಾಗಿದರೂ ಕೂಡಾ ಪರಿಸರದ ಮಂದಿ ಅತ್ಯುತ್ಸಾಹದಿಂದ ಪಾಲ್ಗೊಂಡರು. ಸಮುದ್ರ ಸ್ನಾನಕ್ಕೆ ತೆರಳಿದ ಕೆಲವೊಂದು ಯುವಕರ ತಂಡ ಅಲೆಗಳ ಅಬ್ಬರದ ನಡುವೆ ನಿಂತು ಸೆಲ್ಪಿತೆಗೆದುಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬಂತು.