ರಕ್ಷಣಾ ಕಚೇರಿಗಳ ವಿಚಾರದಲ್ಲಿ ಮೌನವೇಕೆ? ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಪ್ರಶ್ನೆ
ಸೆಂಟ್ರಲ್ ವಿಸ್ತಾ ವಿರುದ್ಧ ಅಪಪ್ರಚಾರ
Team Udayavani, Sep 16, 2021, 7:33 PM IST
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸೆಂಟ್ರಲ್ ವಿಸ್ತಾ ಯೋಜನೆಯ ಭಾಗವಾಗಿರುವ ಎರಡು ರಕ್ಷಣಾ ಕಚೇರಿ ಸಂಕೀರ್ಣಗಳನ್ನು ಗುರುವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.
ಈ ವೇಳೆ, ಪ್ರತಿಪಕ್ಷಗಳ ವಿರುದ್ಧ ವಾಗ್ಧಾಳಿ ನಡೆಸಿದ ಅವರು, “ಸೆಂಟ್ರಲ್ ವಿಸ್ತಾ ಯೋಜನೆಯನ್ನು ಟೀಕಿಸುತ್ತಿದ್ದವರೆಲ್ಲಾ ಈಗ ರಕ್ಷಣಾ ಕಚೇರಿ ಸಂಕೀರ್ಣಗಳ ವಿಚಾರದಲ್ಲಿ ಮೌನ ವಹಿಸಿದ್ದಾರೆ. ಇಲ್ಲದಿದ್ದರೆ, ಅವರ ಸುಳ್ಳುಗಳೆಲ್ಲ ಬಯಲಾಗುತ್ತಿದ್ದವು’ ಎಂದು ಕಿಡಿಕಾರಿದ್ದಾರೆ.
ರಕ್ಷಣಾ ಸಚಿವಾಲಯ ಮತ್ತು ಸಶಸ್ತ್ರ ಪಡೆಯ 7 ಸಾವಿರ ಉದ್ಯೋಗಿಗಳಿಗಾಗಿ ದೆಹಲಿಯ ಕಸ್ತೂರ್ಬಾ ಗಾಂಧಿ ರಸ್ತೆ ಮತ್ತು ಆಫ್ರಿಕಾ ಅವೆನ್ಯೂನಲ್ಲಿ ಈ ಎರಡು ಹೊಸ ಬಹುಮಹಡಿ ಕಚೇರಿ ಸಂಕೀರ್ಣಗಳು ತಲೆಎತ್ತಿವೆ.
ಇದನ್ನೂ ಓದಿ:ಕೋವಿಡ್: ರಾಜ್ಯದಲ್ಲಿಂದು 1108 ಹೊಸ ಪ್ರಕರಣ | 809 ಸೋಂಕಿತರು ಗುಣಮುಖ
ಗುರಿ ಸ್ಪಷ್ಟವಾಗಿದ್ದರೆ ಎಲ್ಲವೂ ಸಾಧ್ಯ:
“ಈವರೆಗೆ ಎರಡನೇ ವಿಶ್ವಯುದ್ಧದ ಸಮಯದಲ್ಲಿ ನಿರ್ಮಿಸಲಾಗಿದ್ದ ಗೂಡಿನಂಥ ಸ್ಥಳಗಳಲ್ಲಿ ರಕ್ಷಣಾ ಕೆಲಸಗಳನ್ನು ನಡೆಸಬೇಕಾಗಿತ್ತು. ಆದರೆ, ಈಗ ನಾವು ರಾಷ್ಟ್ರರಾಜಧಾನಿಯಲ್ಲಿ ಅತ್ಯಾಧುನಿಕ ರಕ್ಷಣಾ ವಲಯ ನಿರ್ಮಾಣದತ್ತ ಮಹತ್ವದ ಹೆಜ್ಜೆ ಇಟ್ಟಿದ್ದೇವೆ. ಯಾವಾಗ ನೀತಿಗಳು ಮತ್ತು ಉದ್ದೇಶಗಳು ಸ್ಪಷ್ಟವಾಗಿರುತ್ತದೋ, ಇಚ್ಛಾಶಕ್ತಿ ಬಲಿಷ್ಠವಾಗಿರುತ್ತದೋ ಆಗ ಎಲ್ಲವೂ ಸಾಧ್ಯ’ ಎಂದೂ ಮೋದಿ ಹೇಳಿದ್ದಾರೆ.