ದೇಶದಲ್ಲಿ ಪೊಲೀಸ್ ರಾಜ್, ಗೂಂಡಾ ರಾಜ್
Team Udayavani, Sep 29, 2019, 3:08 AM IST
ಬೆಂಗಳೂರು: ದೇಶದಲ್ಲಿ ಒಂದು ರೀತಿಯಲ್ಲಿ ಪೊಲೀಸ್ ರಾಜ್, ಗೂಂಡಾ ರಾಜ್ , ಐಟಿ ರಾಜ್ ಆಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಯಾರೂ ಯಾವುದನ್ನೂ ವಿರೋಧ ವ್ಯಕ್ತಪಡಿಸಬಾರದು. ವಿರೋಧ ವ್ಯಕ್ತಪಡಿಸಿದರೆ ಜೈಲಿಗೆ ಹಾಕುತ್ತಾರೆಂಬ ಸ್ಥಿತಿ ನಿರ್ಮಾಣವಾಗಿದೆ. ಇದು ನಿಜಕ್ಕೂ ಪ್ರಜಾಪ್ರಭುತ್ವದ ಅಣಕ ಹಾಗೂ ವಾಕ್ ಸ್ವಾತಂತ್ರ್ಯದ ಹರಣ ಎಂದು ಹೇಳಿದರು.
ಚುನಾವಣಾ ಆಯೋಗ ನಡೆದುಕೊಳ್ಳುತ್ತಿರುವ ರೀತಿಯನ್ನು ನಾನು ಖಂಡಿಸಿದ್ದೆ. ಒಮ್ಮೆ ಅನರ್ಹತೆಗೊಂಡವರು ಸ್ಪರ್ಧೆ ಮಾಡಬಹುದು ಎಂದು ಹೇಳುತ್ತದೆ. ಮತ್ತೂಮ್ಮೆ ಚುನಾವಣೆ ಮುಂದೂಡಿಕೆ ಆದ ನಂತರ ಮತ್ತೆ ಚುನಾವಣೆ ದಿನಾಂಕ ಘೋಷಣೆ ಮಾಡುತ್ತದೆ. ಬಿಜೆಪಿಗೆ ಆನುಕೂಲ ಮಾಡಿಕೊಡುವ ಉದ್ದೇಶ ದಿಂದ ಚುನಾವಣಾ ಆಯೊಗ ಕೆಲಸ ಮಾಡುತ್ತಿದೆ ಎಂಬುದು ಇದರಿಂದ ಸ್ಪಷ್ಟ ಎಂದು ತಿಳಿಸಿದರು.
ಚುನಾವಣೆ ಘೋಷಣೆ ಮಾಡಿ ನೀತಿ ಸಂಹಿತೆ ಮಾತ್ರ ನ. 11 ರಿಂದ ಅಂತ ಹೇಳಲಾಗಿದೆ. ಹಾಗಾದರೆ ಸರ್ಕಾರ ಅಲ್ಲಿವರೆಗೂ ಏನು ಬೇಕಾದರೂ ಮಾಡಬಹುದಾ? ಸೋಮವಾರ ನಾವು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ಕೂಡಲೇ ನೀತಿ ಸಂಹಿತೆ ಜಾರಿಗೆ ಒತ್ತಾಯಿಸುತ್ತೇವೆ. ಹಿಟ್ಲರ್ ಆಡಳಿತ ದೇಶದಲ್ಲಿ ಜಾರಿಯಾಗುತ್ತಿದೆ ಎಂದು ಅನಿಸುತ್ತಿದೆ ಎಂದರು.
ಪೆಗ್ ಹಾಕಿದರೂ “ಅನರ್ಹ’ರಿಗೆ ನಿದ್ದೆ ಬರುತ್ತಿಲ್ಲ
ಬೀದರ್: ಕಾಂಗ್ರೆಸ್ ತೊರೆದಿರುವ ಅನರ್ಹ ಶಾಸಕರಿಗೆ ಒಂದು ಪೆಗ್ ಕುಡಿದರೂ ನಿದ್ದೆ ಬರುತ್ತಿಲ್ಲ. ಹೀಗಾಗಿ ತಡರಾತ್ರಿ ಎದ್ದು ಮತ್ತೂಂದು ಪೆಗ್ ಕುಡಿದು ಮಲಗುತ್ತಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಲೇವಡಿ ಮಾಡಿದ್ದಾರೆ.ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಬಿಟ್ಟ ನಮ್ಮ ಸ್ನೇಹಿತರಿಗೆ ದೊಡ್ಡ ಖಾತೆಗಳು ನೀಡುವ ಆಮಿಷ ನೀಡಲಾಗಿತ್ತು. ಆ ಖಾತೆ ಸಿಗುತ್ತೆ, ಈ ಖಾತೆ ಸಿಗುತ್ತೆ ಎಂಬ ಕನಸು ಕಾಣುತ್ತಿದವರು ಈಗ ಕಂಗಾಲಾಗಿ ಕಾಂಗ್ರೆಸ್ ನಾಯಕರನ್ನು ಸಂಪರ್ಕಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಉಪ ಚುನಾವಣೆಯಲ್ಲಿ ಎಲ್ಲ 15 ಸ್ಥಾನಗಳನ್ನು ನಾವೇ ಗೆಲ್ಲುತ್ತೇವೆ. ಆ ಕ್ಷೇತ್ರಗಳಲ್ಲಿ ಈ ಹಿಂದೆಯೂ ಕಾಂಗ್ರೆಸ್ ಪಕ್ಷದ ಶಾಸಕರು ಆಯ್ಕೆಯಾಗಿದ್ದರು. ಈಗಲೂ ಕಾಂಗ್ರೆಸ್ಸಿನಿಂದಲೇ ಆಯ್ಕೆಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕೇಂದ್ರ ಸರ್ಕಾರದ ವಿವಿಧ ಸಂಸ್ಥೆಗಳು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿವೆ. ರಾಜ್ಯದಲ್ಲಿ ನಿಷ್ಪಕ್ಷಪಾತ ಚುನಾವಣೆ ನಡೆಯುತ್ತವಾ ಇಲ್ಲವೋ ನಂಶಯ ಮೂಡುವಂತಾಗಿದೆ. ನನಗೆ ಇಡಿ, ಐಟಿ, ಸಿಬಿಐ, ಫೋನ್ ಕದ್ದಾಲಿಕೆ ಭಯವಿಲ್ಲ. ಅಂತಹ ಹೇಳಿಕೊಳ್ಳುವಂತಹ ಆಸ್ತಿಯೂ ನನ್ನ ಬಳಿಯಿಲ್ಲ ಎಂದರು.
ನಾನು ಕಳ್ಳನೆಂದಾದರೆ ದೂರು ನೀಡಲಿ
ಬೆಂಗಳೂರು: “ಕಳ್ಳ ಎನ್ನುವುದಾದರೆ ನಾನೂ ಕಳ್ಳನೇ, ನನ್ನ ವಿರುದ್ಧ ದೂರು ನೀಡಲಿ’ ಎಂದು ಮಾಜಿ ಸ್ಪೀಕರ್ ರಮೇಶ್ಕುಮಾರ್ ಅವರು ಕೇಂದ್ರದ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರಿಗೆ ಟಾಂಗ್ ನೀಡಿದ್ದಾರೆ. ಬೆಂಗಳೂರಿನ ಗಾಂಧಿಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಎಷ್ಟು ದಿನ ಬದುಕಿರುತ್ತೇನೆ ಎಂಬುದು ಗೊತ್ತಿಲ್ಲ. ಇರುವಷ್ಟು ದಿನ ಉತ್ತಮ ಕೆಲಸ ಮಾಡುತ್ತೇನೆ. ಕೆ.ಎಚ್.ಮುನಿಯಪ್ಪನವರು ನನ್ನ ಮೇಲಿನ ಪ್ರೀತಿಯಿಂದ ನನ್ನನ್ನು ಕಳ್ಳ ಎಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಕಾಂಗ್ರೆಸ್ ನಾಯಕರ ಗದ್ದಲದ ಬಗ್ಗೆ ನನಗೆ ಗೊತ್ತಿಲ್ಲ. ಕಳ್ಳ ಎಂದರೆ ಕಳ್ಳನೇ. ನಾನು ಜೈಲಿಗೆ ಹೋಗಲು ಸಿದ್ಧನಿದ್ದೇನೆ’ ಎಂದು ಹೇಳಿದರು.