ಗೋಮಾಳಗಳ ರಕ್ಷಣೆ ಅತ್ಯಗತ್ಯ: ವಿಶ್ವಪ್ರಸನ್ನತೀರ್ಥ ಶ್ರೀಪಾದರು
Team Udayavani, Sep 30, 2021, 7:18 AM IST
ಉಡುಪಿ: ಗ್ರಾಮ ಗ್ರಾಮ ಗಳಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಗೋವುಗಳಿಗಾಗಿ ಮೀಸಲಿಟ್ಟ ಗೋಮಾಳ ಭೂಮಿಯನ್ನು ಅವುಗಳಿ ಗಾಗಿಯೇ ಇರಿಸಿ ರಕ್ಷಿಸಬೇಕೆಂದು ಗೋ ಹಿತ ರಕ್ಷಣ ಒಕ್ಕೂಟ ಆಗ್ರಹಿಸಿದೆ.
ಉಡುಪಿ ಜಿಲ್ಲೆಯ 233 ಗ್ರಾಮಗಳಲ್ಲಿ ಸುಮಾರು 3,000 ಎಕ್ರೆ ಗೋಮಾಳ ಪ್ರದೇಶವಿದೆ. ಅವುಗಳಲ್ಲಿ ಕೆಲವು ಪರಾಭಾರೆಯಾಗಿವೆ. ಈ ಭೂಮಿಯ ಗಡಿಗುರುತು ಮಾಡಿ, ಗೋಮಾಳಗಳನ್ನು ಕೇವಲ ಗೋವುಗಳಿಗಾಗಿಯೇ ಮೀಸಲಿಡಬೇಕೆಂದು ಸರಕಾರವನ್ನು ಆಗ್ರಹಿಸ ಲಾಗಿದೆ ಎಂದು ಒಕ್ಕೂಟದ ಪರವಾಗಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಗೋವುಗಳಿಗೆ ಈಗ ಆಹಾರದ ಕೊರತೆ ಇದೆ. ಈಗ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಗೋಶಾಲೆ ನಿರ್ಮಾಣದ ಪ್ರಸ್ತಾವವಿದೆ. ಇದಕ್ಕೆ ಭೂಮಿಯ ಅವಶ್ಯವಿದೆ. ಗೋಶಾಲೆ, ಮೇವಿಗಾಗಿ ಗೋಮಾಳಗಳನ್ನು ರಕ್ಷಿಸಬೇಕಾಗಿದೆ ಎಂದರು.
ಸರಕಾರ ಒಂದು ಗೋವಿಗೆ 17.5 ರೂ. ದೈನಂದಿನ ಖರ್ಚು ಎಂದು ನಿಗದಿಪಡಿಸಿದೆ. ಇದು ಸಾಕೇ ಎಂದು ಪ್ರಶ್ನಿಸಿದಾಗ, ದೇಸೀ ಗೋ ತಳಿಗಳಿಗೆ ಸರಕಾರ ಈ ಮೊತ್ತವನ್ನು ನಿಗದಿಪಡಿಸಿದೆ. ಹಾಲಿಗಾಗಿ ದನವನ್ನು ಸಾಕಿದರೆ ಈ ಮೊತ್ತ ಸಾಕಾಗುವುದಿಲ್ಲ. ನಾವು ಗೋಶಾಲೆಯನ್ನು ಸಮಾಜದ ಸಹಕಾರದಿಂದ ನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ:ಹಾನಗಲ್ ಉಪ ಚುನಾವಣೆ : ಮುಖಂಡರ ಜೊತೆ ಡಿಕೆಶಿ ಚರ್ಚೆ
ಒಕ್ಕೂಟದ ಸಂಚಾಲಕ ಗಣೇಶ ಕಿಣಿ ಬೆಳ್ವೆ, ಕಾರ್ಯದರ್ಶಿ ವಿಜಯಪ್ರಕಾಶ ಬೈಲಕೆರೆ, ಶ್ರೀನಿವಾಸ ಶೆಟ್ಟಿಗಾರ್ ಬಾಕೂìರು, ಡಾ| ಅಣ್ಣಯ್ಯ ಕುಲಾಲ್, ಸೂರ್ಯನಾರಾಯಣ ಗಾಣಿಗ ಮಟಪಾಡಿ, ಕೃಷ್ಣಾನಂದ ಚಾತ್ರ, ದೇವದಾಸ ಹೆಬ್ಟಾರ್ ಕಟ್ಟಿಂಗೇರಿ, ಭಾಸ್ಕರ ಶೆಟ್ಟಿ ನಾವುಂದ, ಶ್ರೀಧರ ಆಚಾರ್ಯ ಕುಮ್ರಗೋಡು, ಶಶಾಂಕ ಶಿವತ್ತಾಯ, ವಿಶ್ವನಾಥ ನಾಯ್ಕ ನಡೂರು, ಸುರೇಶ ಕೋಟೇಶ್ವರ, ಚಂದ್ರಶೇಖರ ಹೆಗ್ಡೆ ಶಾನಾಡಿ, ಪ್ರೀತಮಾ ಎಸ್. ರೈ ಬಸ್ರೂರು , ಶಂಕರ ಹೆಗ್ಡೆ ಜನ್ನಾಡಿ, ರಾಮ ಮಡಿವಾಳ ಕುಂಭಾಶಿ ಉಪಸ್ಥಿತರಿದ್ದರು.
ಹಟ್ಟಿಯಿಂದ ಗೋವುಗಳ ಕಳವು: ದೂರು
ನೀಡುವವರಿಗೆ ಕೋಮುವಾದಿ ಪಟ್ಟ !
ಗೋಕಳ್ಳತನದ ಕುರಿತು ಕೇಳಿದಾಗ, ಒಂದೆರಡು ಹಸುಗಳನ್ನು ಕಟ್ಟಿ ಬದುಕು ಸಾಗಿಸುವವರ ಗೋವುಗಳನ್ನು ಕಳವು ಮಾಡುತ್ತಿದ್ದಾರೆ. ಇದರ ಬಗ್ಗೆ ದೂರು ನೀಡಿದರೆ ಕೋಮುವಾದದ ಹಣೆಪಟ್ಟಿ ಕಟ್ಟುತ್ತಾರೆ. ಬಡವರ ಬದುಕಿಗೆ ತೊಂದರೆ ಕೊಟ್ಟಾಗ ಪ್ರತಿಭಟಿಸಿದರೆ ಈ ತೆರನಾಗಿ ಇನ್ನೊಂದು ರೂಪ ಕೊಡುತ್ತಿದ್ದಾರೆ ಎಂದು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ವಿಷಾದ ವ್ಯಕ್ತಪಡಿಸಿದರು.