ಎಲ್ಲಾ ನ್ಯಾಯಾಧೀಶರಿಗೂ ವಸತಿ ಗೃಹ ಸೌಲಭ್ಯ ಕಲ್ಪಿಸಲು ಜಿಲ್ಲಾ ಸತ್ರ ನ್ಯಾಯಾಧೀಶ ರಘುನಾಥ್ ಮನವಿ
Team Udayavani, Jun 26, 2022, 10:46 AM IST
ಹುಣಸೂರು: ನಗರದ ಮೈಸೂರು ರಸ್ತೆಯಲ್ಲಿ ನಿರ್ಮಿಸುತ್ತಿರುವ ವಸತಿ ಗೃಹದ ಬಳಿ ಒಂದು ಕೋಟಿ ರೂ. ವೆಚ್ಚದಡಿ ನ್ಯಾಯಾಧೀಶರ ವಸತಿಗೃಹ ನಿರ್ಮಾಣ ಕಾಮಗಾರಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್. ರಘುನಾಥ್ ಗುದ್ದಲಿ ಪೂಜೆ ನೆರವೇರಿಸಿದರು.
ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಾಣವಾಗುತ್ತಿರುವ ನ್ಯಾಯಾಧೀಶರ ವಸತಿ ಗೃಹದ ಗುದ್ದಲಿ ಪೂಜೆ ನೆರವೇರಿಸಿದ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಘುನಾಥ್ ಹುಣಸೂರು ಉಪ ವಿಭಾಗ ಕೇಂದ್ರವಾಗಿದ್ದು, ಜಿಲ್ಲಾ ಕೇಂದ್ರವಾಗುವ ಎಲ್ಲಾ ಸೌಲಭ್ಯಗಳಿದ್ದು, ಇಲ್ಲಿನ ವಿವಿಧ ನ್ಯಾಯಾಲಯಗಳಲ್ಲಿ ಐದು ಮಂದಿ ನ್ಯಾಯಾಧೀಶರಿದ್ದು, ಹಾಲಿ ಇಬ್ಬರಿಗೆ ಮಾತ್ರ ವಸತಿ ಗೃಹ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಮುಂದುವರೆದು ಮಾತನಾಡಿ, ಇದೀಗ ಮತ್ತೊಂದು ವಸತಿ ಗೃಹ ನಿರ್ಮಾಣವಾಗುತ್ತಿದ್ದು, ಇನ್ನೂ ಎರಡು ವಸತಿ ಗೃಹದ ಅವಶ್ಯಕತೆ ಇದ್ದು, ನ್ಯಾಯಾಧೀಶರು ಬಾಡಿಗೆ ಮನೆಯಲ್ಲಿ ವಾಸ ಮಾಡಲು ಕಾನೂನಿನಲ್ಲಿ ತೊಡಕುಗಳಿದ್ದು, ಇನ್ನು ಎರಡು ವಸತಿ ಗೃಹಗಳನ್ನು ನಿರ್ಮಿಸಿಕೊಡಲು ಶಾಸಕ ಎಚ್ ಪಿ ಮಂಜುನಾಥ್ರಿಗೆ ತಿಳಿಸಿದರು.
ಲೋಕೋಪಯೋಗಿ ಇಲಾಖೆ ವತಿಯಿಂದ ವಸತಿ ಗೃಹ ನಿರ್ಮಾಣಕ್ಕೆ ಸರ್ಕಾರದಿಂದ ಕೋಟಿ ರೂ. ಅನುದಾನ ಬಿಡುಗಡೆಗೆ ಶ್ರಮಿಸಿದ ಶಾಸಕರನ್ನು ಸನ್ಮಾನಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪಾಟೀಲ್ ಮೋಹನ್ ಕುಮಾರ್ ಭೀಮನಗೌಡ ವಹಿಸಿದ್ದರು.
ಹುಣಸೂರಿನ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರಾದ ಶಿರಿನ್ ಜಾವಿದ ಅನ್ಸಾರಿ, ಜೈ,ಬುನ್ನಿಸಾ, ಮನು ಪಟೇಲ್ ಬಿ ವೈ, ಪೂಜಾ ಬೆಳಕೇರಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಯೋಗಣ್ಣ ಗೌಡ, ಕಾರ್ಯದರ್ಶಿ ಶ್ರೀನಿವಾಸ್, ಲೋಕೋಪಯೋಗಿ ಇಲಾಖೆ, ನ್ಯಾಯಾಂಗ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಜರಿದ್ದರು.