ಕೈಕೊಟ್ಟ ಮಳೆ: ಮೊಳಕೆಗೂ ಮೊದಲೆ ಒಣಗುತ್ತಿದೆ ರಾಗಿ ಬೆಳೆ
ತಾಲೂಕಿನ ಜನ-ಜಾನುವಾರುಗಳ ಪ್ರಮುಖ ಆಹಾರ ಬೆಳೆ ರಾಗಿಗೆ ಮಳೆಯಿಲ್ಲದೆ ರೈತರ ಬದುಕು ಮೂರಾಬಟ್ಟೆ: ಆತಂಕದಲ್ಲಿ ಅನ್ನದಾತ
Team Udayavani, Aug 4, 2021, 6:15 PM IST
ತಿಪಟೂರು: ಕಲ್ಪತರು ನಾಡಿನಲ್ಲಿ ಮಳೆ ಇಲ್ಲದೆ ದಿನವೂ ಮೋಡ ಮುಸುಕಿದಂತೆ ಕಾಣುತ್ತಿರುವ ಆಕಾಶದೆಡೆಗೆ ದೃಷ್ಟಿ ಇಟ್ಟು, ಯಾವಾಗ ಮಳೆ
ರಾಯ ಕೃಪೆ ತೋರುವನೊ ಎಂಬ ಚಿಂತೆಯಲ್ಲೇ ಅನ್ನದಾತಕಾಲ ಕಳೆಯುವಂತಾಗಿದೆ.
ತಿಂಗಳ ಹಿಂದೆ ಬರುತ್ತಿದ್ದ ಸೋನೆ ಮಳೆಗೆ ಭೂಮಿ ಹದ ಮಾಡಿಕೊಂಡು ಬಿತ್ತನೆ ಮಾಡಿರುವ ರಾಗಿ ಪೈರು ಈಗ ಮಳೆ ಇಲ್ಲದೆ ಸೊರಗಿ ಒಣಗುವ ಹಂತ ತಲುಪಿದ್ದು, ರಾಗಿಯನ್ನೇ ನೆಚ್ಚಿ ಬದುಕು ಸಾಗಿಸುತ್ತಿರುವ ತಾಲೂಕಿನ ರೈತರು ಕಂಗಾಲಾಗುವಂತೆ ಮಾಡಿದೆ.
ನಿರಂತರ ಬರ: ಈ ಭಾಗಕ್ಕೆ ಬೀಳುತ್ತಿರುವ ಮಳೆ ನೋಡಿದರೆ ವರ್ಷ ವರ್ಷವೂ ತೀರಾ ಇಳಿಮುಖವಾಗುತ್ತಿದೆ. ಹಾಗಾಗಿ, ನಿರಂತರ ಬರದ
ಬೇಗೆಯಲ್ಲೇ ಬೇಯುತ್ತಿರುವ ಜನರು, ರೈತರು ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ನೋಡಿ, ಅಯ್ಯೋ ಅಲ್ಲಿ ಸುರಿಯುತ್ತಿರುವ ಮಳೆ
ಸ್ವಲ್ಪವಾದರೂ ನಮಗೆ ಬಂದರೆ ನಮ್ಮ ಬದುಕು ಬಂಗಾರವಾಗುತ್ತಿತ್ತು. ಅಳಿವಿನಂಚಿನಲ್ಲಿರುವ ನಮ್ಮ ತೆಂಗಿನ ತೋಟಗಳಿಗಾದರೂ ಜೀವಕಳೆ ಬರುತ್ತಿತ್ತು.ಗಿಡ-ಗಂಟಿಗಳು ಬೆಳೆದು ನಿಂತಿರುವ ಕೆರೆಕಟ್ಟೆಗಳಾದರೂ ತುಂಬಿ ಅಂತರ್ಜಲವಾದರೂ ಮೇಲ್ಮಟ್ಟಕ್ಕೆ ಬರುತ್ತಿತ್ತಲ್ಲಾ ಎನ್ನುತ್ತಿದ್ದಾರೆ.
ತೆಂಗು, ಅಡಕೆ, ರಾಗಿಗೆ ಬೇಕಿದೆ ಮಳೆ: ಮಳೆ ಇಲ್ಲದೆ ತಾಲೂಕಿನ ಪ್ರಮುಖವಾಣಿಜ್ಯ ಬೆಳೆ ತೆಂಗು, ಅಡಕೆ ಮರಗಳು ಜೋತು ಬಿದ್ದಿವೆ. ಕಳೆದ ಜುಲೈ ತಿಂಗಳಿನಲ್ಲಿ ತುಂತುರು ಮಳೆ ಒಣ ಭೂಮಿ ಯನ್ನ ತಂಪಾಗಿಸಿದ್ದನ್ನೇ ಲಾಭ ಮಾಡಿಕೊಂಡ ರೈತರು, ಮುಂದೆ ಸೋನೆ ಮಳೆ ಬಿದ್ದರೂ ರಾಗಿ ಬೆಳೆಗೆ ತೊಂದರೆ ಇಲ್ಲ ಎಂದು ಧೈರ್ಯ ಮಾಡಿ ಬಿತ್ತನೆ ಮಾಡಿದ್ದರು. ಮೊದಮೊದಲು ಬಿತ್ತಿದ ರಾಗಿ ಬೀಜಗಳು ಸೋನೆ ಮಳೆಗೆ ಮೊಳಕೆಯೊಡೆದು ಕಾಣಿಸಿಕೊಳ್ಳುತ್ತಿದ್ದರೆ ಸ್ವಲ್ಪ ತಡವಾಗಿರುವ ರಾಗಿ ಬಿತ್ತನೆಗೆ ಮಳೆರಾಯಕೃಪೆ ತೋರುತ್ತಿಲ್ಲ. ಆದ್ದರಿಂದ ರೈತರು ಆತಂಕದಲ್ಲಿದ್ದಾರೆ. ಇನ್ನು ಹುಟ್ಟಿ ಬಂದಿರುವ ರಾಗಿ ಪೈರು ಹಸಿರು ಚೆಲ್ಲುವ ಬದಲು ಭೂಮಿಯಲ್ಲೇ ಭಸ್ಮವಾಗುತ್ತಿರುವುದು ಮತ್ತಷ್ಟು ಆತಂಕಕ್ಕೀಡು ಮಾಡಿದೆ. ಬಹಳಷ್ಟು ರೈತರು ಬಿತ್ತನೆ ಮಾಡಲು ಉತ್ತಮ ಮಳೆಗಾಗಿ ಆಕಾಶ ದಿಟ್ಟಿಸುತ್ತಿದ್ದು, ರಾಗಿ ಬಿತ್ತನೆಗೆ ಸಕಾಲವೂ
ಮುಗಿಯುತ್ತಿದ್ದು, ಮುಂದೇನು ಎಂಬ ತೋಳಲಾಟದಲ್ಲಿದ್ದಾರೆ.
10 ವರ್ಷದಿಂದ ತುಂಬದ ಕೆರೆ ಕಟ್ಟೆಗಳು
ಕಳೆದ ಹದಿನೈದು ದಿನಗಳಿಂದಲೂ ಉತ್ತರ ಕರ್ನಾಟಕ, ಮಲೆನಾಡು ಸೇರಿದಂತೆ ಅನೇಕ ಭಾಗಗಳಲ್ಲಿ ಬಿಟ್ಟೂ ಬಿಡದೆ ಸುರಿಯುತ್ತಿರುವ ರಾಕ್ಷಸ ಮಳೆ ಬರದ ಬೇಗೆಯನ್ನು ಮಾತ್ರವಷ್ಟೆ ತಣಿಸದೆ, ಮನೆ ಮಠಗಳನ್ನೂಕೊಚ್ಚಿಕೊಂಡು ಹೋಗುವಂತೆ ಮಾಡುತ್ತಿದೆ. ಆದರೆ,ಕಳೆದ ಹತ್ತಾರು ವರ್ಷಗಳಿಂದ ತಾಲೂಕಿನ ಕೆರೆ-ಕಟ್ಟೆಗಳು ತುಂಬುವಷ್ಟರ ಮಟ್ಟಿಗಿನ ಮಳೆಯೂ ಸಹ ಬರುತ್ತಿಲ್ಲ
-ಬಿ.ರಂಗಸ್ವಾಮಿ, ತಿಪಟೂರು