ಜನಪ್ರತಿನಿಧಿಗಳ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಸಿದ್ಧ: ಸುಪ್ರೀಂಗೆ ಕೇಂದ್ರ
ಬಾಕಿ ಉಳಿದಿರುವ ಪ್ರಕರಣಗಳ ಇತ್ಯರ್ಥಕ್ಕೆ ಸುಪ್ರೀಂ ಕೋರ್ಟ್ ಖುದ್ದಾಗಿ ಹೈಕೋರ್ಟ್ಗಳಿಗೆ ಸೂಚನೆ ನೀಡಬೇಕಿದೆ
Team Udayavani, Sep 17, 2020, 10:10 AM IST
ನವದೆಹಲಿ: ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೇ ಬಾಕಿ ಉಳಿದಿರುವ ಜನಪ್ರತಿನಿಧಿಗಳ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ.
ಈ ಕುರಿತಂತೆ, ಸುಪ್ರೀಂಕೋರ್ಟ್ನಲ್ಲಿ ವಿವರಣೆ ನೀಡಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ಜನಪ್ರತಿನಿಧಿಗಳ ಪ್ರಕರಣಗಳ ತ್ವರಿತ ವಿಚಾರಣೆಗೆ ಸಂಬಂಧಿಸಿದಂತೆ ಹಿರಿಯ ವಕೀಲ ವಿಜಯ್ ಹಂಸಾರಿಯಾ ನೀಡಿರುವ ಸಲಹೆಗಳನ್ನು ಪಾಲಿಸಲು ಕೇಂದ್ರ ಸಿದ್ಧವಿದೆ. ಆದರೆ, ಹೈಕೋರ್ಟ್ಗಳಲ್ಲಿ
ಇತ್ಯರ್ಥವಾಗದೇ ಬಾಕಿ ಉಳಿದಿರುವ ಪ್ರಕರಣಗಳ ಇತ್ಯರ್ಥಕ್ಕೆ ಸುಪ್ರೀಂ ಕೋರ್ಟ್ ಖುದ್ದಾಗಿ ಹೈಕೋರ್ಟ್ಗಳಿಗೆ ಸೂಚನೆ ನೀಡಬೇಕಿದೆ” ಎಂದರು.
ಕೆಲವು ರಾಜ್ಯಗಳಲ್ಲಿನ ನ್ಯಾಯಾಲಯಗಳಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ಪ್ರಕರಣದ ವಿಚಾರಣೆ ನಿಧಾನ ವಾಗಿ ಸಾಗುತ್ತಿದ್ದರೆ, ಅಂಥ ನ್ಯಾಯಾಲಯಗಳಲ್ಲಿ ಅಗತ್ಯ ಸೌಕರ್ಯಗಳನ್ನು ಒಂದು ತಿಂಗಳೊಳಗೆ ನೀಡುವಂತೆ ಸುಪ್ರೀಂಕೋರ್ಟ್, ಸಂಬಂಧಿಸಿದ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಬೇಕು” ಎಂದು ತುಷಾರ್ ಮನವಿ ಮಾಡಿದರು.
3 ದಿನ ಭಾರಿ ಮಳೆ ಸಾಧ್ಯತೆ
ನವದೆಹಲಿ: ಶನಿವಾರದ ನಂತರ (ಸೆ.19)ಕರ್ನಾಟಕದ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡುಗಳಲ್ಲಿ ವ್ಯಾಪಕ ಮಳೆ ಸುರಿಯಲಿದೆ. ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಕೇರಳದಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಅದರ ಪರಿಣಾಮವಾಗಿ,ಕರ್ನಾಟಕದ ಉತ್ತರ ಒಳನಾಡು, ಆಂಧ್ರಪ್ರದೇಶ, ತೆಲಂಗಾಣದ ಕರಾವಳಿ, ಮಹಾರಾಷ್ಟ್ರದ ಮಧ್ಯಭಾಗ, ಮರಾಠವಾಡ,ಕರಾವಳಿ,
ಕೇರಳ ಮತ್ತು ಮಾಹೆಗಳಲ್ಲಿ ಬಿರುಸಿನಿಂದಕೂಡಿದ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ಬಂಗಾಳ ಕೊಲ್ಲಿಯ ಈಶಾನ್ಯ ಭಾಗದಲ್ಲಿ ವಾಯುಭಾರ ಕುಸಿತ
ಉಂಟಾಗಿ ಚಂಡಮಾರುತ ಉಂಟಾಗಲಿದೆ.