ಸಾಲಿಗ್ರಾಮ: ಸಾವಯವ ತರಕಾರಿಗಳಿಗೆ ಉತ್ತಮ ಬೇಡಿಕೆ
Team Udayavani, Apr 20, 2020, 5:08 AM IST
ಕೋಟ: ಸಾಲಿಗ್ರಾಮ ರಥಬೀದಿಯಲ್ಲಿ ಪ್ರತಿ ಶನಿವಾರ ಕೃಷಿಕರು ತಮ್ಮ ತೋಟದಲ್ಲಿ ತಾವೇ ಬೆಳೆದ ತರಕಾರಿಗಳನ್ನು ನೇರವಾಗಿ ಇಲ್ಲಿಗೆ ತಂದು ಮಾರಾಟ ನಡೆಸುತ್ತಾರೆ. ಇದೀಗ ಲಾಕ್ಡೌನ್ ಅನಂತರ ಈ ತರಕಾರಿಗೆ ಬೇಡಿಕೆ ಮತ್ತಷ್ಟು ಹೆಚ್ಚಿದ್ದು ಶನಿವಾರ ಮಾತ್ರವಲ್ಲದೆ ಇತರ ದಿನಗಳಲ್ಲೂ ವ್ಯಾಪಾರ ನಡೆಯುತ್ತದೆ.
ಕೋಟ ಹೋಬಳಿಯ ಕೊಕ್ಕರ್ಣೆ ತನಕದ ಹತ್ತಾರು ರೈತರು ತಮ್ಮ ತೋಟದಲ್ಲಿ ಸಾವಯವ ಗೊಬ್ಬರ ಹಾಕಿ ಬೆಳೆಸಿದ ಬಸಳೆ, ಹರಿವೆ, ಹೀರೆ, ನುಗ್ಗೆ, ಬೆಂಡೆಕಾಯಿ, ಗೆಣಸು ಮುಂತಾದ ತರಕಾರಿ, ಹಣ್ಣು ಹಂಪಲುಗಳನ್ನು ಇಲ್ಲಿ ನೇರ ಮಾರುಕಟ್ಟೆ ನಡೆಸುತ್ತಾರೆ ಹಾಗೂ ಮಾರುಕಟ್ಟೆಯಲ್ಲಿನ ಧಾರಣೆ ಗಮನದಲ್ಲಿಟ್ಟುಕೊಂಡು ರೈತರು ತಾವು ಬೆಳೆದ ತರಕಾರಿಗಳಿಗೆ ತಾವೇ ದರ ನಿಗದಿಪಡಿಸುತ್ತಾರೆ. ನೇರವಾಗಿ ಗ್ರಾಹಕರಿಗೆ ಸಿಗುವುದರಿಂದ ಬೆಲೆ ಕೂಡ ಸಾಕಷ್ಟು ಕಡಿಮೆ ಇರುತ್ತದೆ ಹಾಗೂ ಮಧ್ಯವರ್ತಿಗಳು, ದಲ್ಲಾಳಿಗಳ ಹಾವಳಿ ಇರುವುದಿಲ್ಲ.
ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದ ವಸ್ತುಗಳನ್ನು ನೇರವಾಗಿ ಇಲ್ಲಿಗೆ ತಂದು ಮಾರಾಟ ಮಾಡುವ ಕ್ರಮ ಕೂಡ ಇದೆ.ತರಕಾರಿಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಗ್ರಾಹಕರು ಖರೀದಿಗೆ ಮುಗಿಬಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿಫಲವಾಗಿ ಎಚ್ಚರಿಕೆ ಕೂಡ ನೀಡಲಾಗಿತ್ತು. ಅನಂತರ ಇದೀಗ ಬಾಕ್ಸ್ಗಳನ್ನು ಅಳವಡಿಸಿ ಮಾರಾಟ ಮುಂದುವರಿಸಲಾಗಿದೆ.