ಸಮಗ್ರ ಬೆಳೆ ಬೆಳೆದ ರೈತನ ಜಮೀನಿಗೆ ವಿಜ್ಞಾನಿಗಳ ತಂಡ ಭೇಟಿ
Team Udayavani, Nov 12, 2020, 3:44 PM IST
ಕೊಪ್ಪಳ: ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಕುಕನೂರು ತಾಲೂಕಿನ ಭಾನಾಪೂರ ಗ್ರಾಮದ ರೈತ ಮಹೇಶಗೌಡ ಅವರ ಜಮೀನಿಗೆ ಭೇಟಿ ನೀಡಿ ವಿವಿಧ ಬೆಳೆಗಳನ್ನು ಪರಿಶೀಲಿಸಿದರು.
ರೈತ ಸಿದ್ಧನಗೌಡ ಹಿರೇಗೌಡ್ರ ಅವರು 420 ಲಿಂಬು, 40 ಹೆಬ್ಬೇವು, 10-12 ಮಹಾಗನಿ, 02 ಗೊಡಂಬಿ, 10-15 ಕರಿಬೇವು, 01 ಬೇವು ಜೊತೆಗೆ ಮಿಶ್ರ ಬೆಳೆಯಾಗಿ ಬದನೆ, ಟೊಮ್ಯಾಟೊ, ಹಿರೇಕಾಯಿ, ಹಾಗಲಕಾಯಿ, ಸೌತೆಕಾಯಿ, ಕುಂಬಳಕಾಯಿ, ಹೂಕೋಸು, ಬೀಟ್ರೂಟ್ನಂತ ತರಕಾರಿಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆದು ತಮ್ಮ ಮನೆಗೆ ಉಪಯೋಗಿಸುತ್ತಿರುವ ಕುರಿತು
ಪರಿಶೀಲನೆ ನಡೆಸಿದರು. ಜೊತೆಗೆ ಹೂವಿನ ಬೆಳೆಗಳಾದ ಚೆಂಡು, ಸುಗಂಧಿ, ಗುಲಾಬಿ ಹೂವಿನ ಬೆಳೆಗಳನ್ನು ಬೆಳೆದು ಸ್ಥಳೀಯ ಮಾರುಕಟ್ಟೆಗೆ ಮಾರಾಟ ಮಾಡುತ್ತಿದ್ದಾರೆ. ಜೇನು ಸಾಕಾಣಿಕೆ, 02 ಕುರಿ ಸಾಕಾಣಿಕೆ ಮಾಡಿ ಕೇವಲ 2.5 ಎಕರೆಯಲ್ಲಿ ಇಷ್ಟೆಲ್ಲಾ ಸಮಗ್ರ ಬೆಳೆ ಬೆಳೆದು ಒಬ್ಬ ಮಾದರಿ ರೈತನಾಗಿ ಹೊರಹೊಮ್ಮಿದ್ದಾರೆ.
ಇದನ್ನೂ ಓದಿ: ಲಾಟರಿ ಹೆಸರಿನಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜನರಿಗೆ ಪಂಗನಾಮ! 28 ಲಕ್ಷಕ್ಕೂ ಅಧಿಕ ವಂಚನೆ
ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿ ಮೂಲಕ ಧನಸಹಾಯ ಪಡೆದು ಮನೆಯನ್ನು ನಿರ್ಮಿಸಿಕೊಂಡಿದ್ದಾರೆ. ಹೀಗೆ ತಮ್ಮ
2.5 ಎಕರೆ ಜಮೀನಿನಲ್ಲಿ ತಾವೇ ಸ್ವತಃ ಬಂಗಾರದ ಮನುಷ್ಯನಂತೆ ಬೆವರಿಳಿಸಿ ಶ್ರಮಪಟ್ಟು ನಿಜವಾದ ಕೃಷಿಕರೆಂದು ಯುವಕರಿಗೆ ತೋರಿಸಿಕೊಟ್ಟು ಮಾದರಿಯಾಗಿದ್ದಾರೆ.
ಬಳಿಕ ಬಿನ್ನಾಳದ ರೈತ ಜಗದೀಶ ಅವರ ಕಡಲೆ ಬೆಳೆ ಹಾಗೂ ಸೂರ್ಯಕಾಂತಿಯ ಕ್ಷೇತ್ರಕ್ಕೆ ಭೇಟಿ ನೀಡಿ ಕಡಲೆ ಬೆಳೆಯ ಸಸ್ಯ
ಸಂರಕ್ಷಣೆಯ ಬಗ್ಗೆ ಮುಂಜಾಗ್ರತೆ ವಹಿಸಬೇಕು ಎಂದು ಕಡಲೆ ಬೆಳೆದ ರೈತರೆಲ್ಲರಿಗೂ ಹಿರಿಯ ವಿಜ್ಞಾನಿಗಳು ಸಲಹೆ ನೀಡಿದರು.
ಈ ವೇಳೆ ಕೇಂದ್ರದ ಮುಂದಾಳು ಡಾ| ಎಂ.ಬಿ. ಪಾಟೀಲ್, ಸಹಾಯಕ ಪ್ರಾಧ್ಯಾಪಕ ಡಾ| ನಾಗೇಶ್ ಬಸಪ್ಪ ಜಾನೇಕಲ್ ಪಾಲ್ಗೊಂಡಿದ್ದರು.