“ನಿರೀಕ್ಷೆಗೂ ಮೀರಿ ಸೇವೆ ಸಲ್ಲಿಸಿ’
Team Udayavani, Apr 8, 2020, 6:15 AM IST
ಬೆಂಗಳೂರು: ಕೋವಿಡ್ 19 ತಡೆಗಟ್ಟಲು ಜನರ ನಿರೀಕ್ಷೆಗೂ ಮೀರಿ ಸೇವೆ ಸಲ್ಲಿಸೋಣ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಸುಧಾಕರ್ ಕರೆ ನೀಡಿದರು.
ವಿಶ್ವ ಆರೋಗ್ಯ ದಿನದ ಅಂಗವಾಗಿ ಫೇಸ್ಬುಕ್ ಲೈವ್ ಮೂಲಕ ವೈದ್ಯರು ಮತ್ತು ವೈದ್ಯಕೀಯ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವರಿಗೆ ಸಂದೇಶ ನೀಡಿದ ಅವರು, ಕೋವಿಡ್ 19 ಸೋಂಕಿತರಲ್ಲಿ ಕರ್ನಾಟಕ 3ರಿಂದ 11ನೇ ಸ್ಥಾನಕ್ಕೆ ಇಳಿದಿದೆ. ನಮ್ಮಲ್ಲಿ ವೆಂಟಿಲೇಟರ್, ಬೆಡ್ ಹೀಗೆ ಯಾವುದೇ ಕೊರತೆ ಇಲ್ಲ. ಜನರ ನಿರೀಕ್ಷೆಗೆ ತಕ್ಕಂತೆ ನಾವೆಲ್ಲರೂ ಸೇವೆ ಸಲ್ಲಿಸೋಣ ಎಂದು ಮನವಿ ಮಾಡಿದರು.
ಇಡೀ ಮನುಕುಲವೇ ಕೋವಿಡ್ 19 ವಿರುದ್ಧ ಹೋರಾಟ ಮಾಡಬೇಕಾಗಿದೆ. ಇದು ಬಡವ, ಶ್ರೀಮಂತ ಆಥವಾ ಜಾತಿ, ದೇಶಗಳ ಗಡಿ ಮೀರಿ ಹಬ್ಬುತ್ತಿದೆ. ಎಲ್ಲರೂ ಒಂದಾಗಿ ಇದನ್ನು ಎದುರಿಸಬೇಕಿದೆ ಎಂದರು. ವೈದ್ಯರು, ನರ್ಸ್, ಆರೋಗ್ಯ ಸಿಬಂದಿ ಯೋಧರಂತೆ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಬದ್ಧತೆಗೆ ದೇಶವೇ ಅಭಾರಿಯಾಗಿದೆ. ಕೋವಿಡ್ 19 ವಿರುದ್ಧ ನಾವೆಲ್ಲರೂ ಹೋರಾಡಿ ಗೆಲ್ಲಲೇ ಬೇಕು ಎಂದರು.
ಭಾರತ ಸರಕಾರ ತೆಗೆದುಕೊಂಡಿರುವ ಕೆಲವೊಂದು ನಿರ್ಧಾರ ವಿಶ್ವಕ್ಕೆ ಮಾದರಿಯಾಗಿದೆ. ಕೋವಿಡ್ 19 ನಿರ್ಮೂಲನೆಯಲ್ಲಿ ಭಾರತದ ಪಾತ್ರ ಅತಿಮುಖ್ಯ ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕೋವಿಡ್ 19 ವಿರುದ್ಧ ಸಮರದಲ್ಲಿ ನಮ್ಮ ಭಾರತ ನಾಯಕತ್ವ ವಹಿಸಬೇಕು ಎಂದು ಅನೇಕ ರಾಷ್ಟ್ರಗಳು ಹೇಳಿವೆ. ಕರ್ನಾಟಕ ಕೂಡ ವೈರಸ್ ತಡೆಯಲು ಎಲ್ಲ ಕ್ರಮಗಳನ್ನೂ ತೆಗೆದುಕೊಂಡಿದೆ ಎಂದವರು ಹೇಳಿದ್ದಾರೆ.