ಶಿಷ್ಟಾಚಾರ ಉಲ್ಲಂಘಿಸಿದ ತಹಶೀಲ್ದಾರ್ : ಶರಣು ಬೆಲ್ಲದ ಆರೋಪ
Team Udayavani, Jan 18, 2021, 1:09 PM IST
ಹುನಗುಂದ: ಸರ್ಕಾರಿ ಕಾರ್ಯಕ್ರಮವೊಂದಕ್ಕೆ ಪಟ್ಟಣದ ಪ್ರಥಮ ಪ್ರಜೆ ಪುರಸಭೆಯ ಅಧ್ಯಕ್ಷರಿಗೆ ಆಹ್ವಾನ ನೀಡದೇ ತಹಶೀಲ್ದಾರ್ ಬಸವರಾಜ ನಾಗರಾಳ ಕಾರ್ಯಕ್ರಮದ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಪುರಸಭೆ ಅಧ್ಯಕ್ಷ ಶರಣು ಬೆಲ್ಲದ ಆರೋಪಿಸಿದರು.
ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಕೋವ್ಯಾಕ್ಸಿನ್ ಲಸಿಕೆ ವಿತರಣಾ ಅಭಿಯಾನಕ್ಕೆ ನನಗೆ ಆಹ್ವಾನವಿಲ್ಲ. ಇದನ್ನು ತಾಲೂಕು ವೈದ್ಯಾಧಿಕಾರಿ
ಡಾ| ಪ್ರಶಾಂತ ತುಂಬಗಿ ಅವರನ್ನು ಪ್ರಶ್ನಿಸಿದರೆ ಅದು ನನಗೆ ಗೊತ್ತಿಲ್ಲ. ಕಾರ್ಯಕ್ರಮದ ಎಲ್ಲ ಅತಿಥಿಗಳನ್ನು ಆಹ್ವಾನಿಸಿದ್ದು ತಹಶೀಲ್ದಾರ್ ಅವರನ್ನೇ ಕೇಳಿ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ತಹಶೀಲ್ದಾರ್ ಗೆ ಕರೆ ಮಾಡಿದರೇ ಕರೆ ಸ್ವೀಕರಿಸಲಿಲ್ಲ. ಮತ್ತೂಮ್ಮೆ ಕರೆ ಮಾಡಿದರೇ ಪೋನ್ ಬಂದ್ ಮಾಡಿರುವುದು ಕಂಡುಬಂದಿದೆ. ತಹಶೀಲ್ದಾರ್ ಬಿಜೆಪಿ ಏಜೆಂಟ್ರಂತೆ ವರ್ತಿಸುತ್ತಿದ್ದಾರೆ. ತಹಶೀಲ್ದಾರ್ ಮತ್ತು ಆರೋಗ್ಯ ಇಲಾಖೆಯ ಅಧಿ ಕಾರಿಗಳು ಕಾರ್ಯಕ್ರಮದ ಶಿಷ್ಟಾಚಾರ ಮರೆತು ಬಿಜೆಪಿ ಪಕ್ಷದ ಶಾಸಕರ ಮಾತಿನಂತೆ ಅವರ ಕೈಗೊಂಬೆಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ:ಆನೆಗೊಂದಿ ಆದಿಶಕ್ತಿ ದೇಗುಲದ ಬಳಿ ಬೋನಿಗೆ ಬಿದ್ದ ಚಿರತೆ
ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಸರ್ಕಾರಿ ಕಾರ್ಯಕ್ರಮಕ್ಕೆ ಪ್ರಥಮ ಪ್ರಜೆಗೆ ಆಹ್ವಾನ ನೀಡಿಲ್ಲ. ಇದಕ್ಕೆ ಕಾರಣ ನೀಡಬೇಕು ಮತ್ತು ಕಾರ್ಯಕ್ರಮದ ಶಿಷ್ಟಾಚಾರ ಉಲ್ಲಂಘಿಸಿದ ತಹಶೀಲ್ದಾರ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಮೇಲೆ ಜಿಲ್ಲಾಧಿಕಾರಿಗಳು ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಮಾಡಿಕೊಳ್ಳುತೇನೆ ಎಂದರು. ಪುರಸಭೆಯ ಸದಸ್ಯ ಯಲ್ಲಪ್ಪ ನಡುವಿನಮನಿ, ಸ್ಥಾಯಿ ಸಮಿತಿಯ ಅಧ್ಯಕ್ಷ ಪರವೇಜ್ ಖಾಜಿ ಇದ್ದರು.