ಸಿದ್ದರಾಮಯ್ಯನವರಂತವರು ರಾಜಕೀಯದಲ್ಲಿರಬೇಕು: ಬಿ.ಸಿ.ಪಾಟೀಲ್
Team Udayavani, Dec 10, 2019, 10:23 PM IST
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದು ಫಲ ನೀಡದಿದ್ದರೂ ಸ್ವಾಗತಾರ್ಹ. ಆದರೆ ಸಿದ್ದರಾಮಯ್ಯ ಅವರಂತಹ ನಾಯಕರು ರಾಜಕೀಯದಲ್ಲಿ ಇರಬೇಕು ಎಂದು ಬಿಜೆಪಿ ಶಾಸಕ ಬಿ.ಸಿ.ಪಾಟೀಲ್ ಹೇಳಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ “ಕೃಷ್ಣಾ’ ಬಳಿ ಮಂಗಳವಾರ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ನಮ್ಮ ವಿರುದ್ಧ ಅಪಪ್ರಚಾರ ನಡೆಸಿದರು. ಅದು ಒಳ್ಳೆಯದಲ್ಲ. ಅವರ ಮಾತಿಗೆ ಕೂಗಿದವರು ಮತ ಹಾಕಿಲ್ಲ. ಜನ ಅವರ ಮಾತಿಗೆ ಬೆಲೆ ಕೊಟ್ಟಿಲ್ಲ. ಕೇವಲ ಕೂಗಾಡಿದ್ದಾರೆಯೇ ಹೊರತು ಮತ ಹಾಕಿಲ್ಲ ಎಂದು ತಿಳಿಸಿದರು.
ಉಪಚುನಾವಣೆ ಗೆಲ್ಲಲು ಯಾವುದೇ ಕಷ್ಟವಾಗಲಿಲ್ಲ. ಮತದಾರರ ತೀರ್ಪು ನಮ್ಮನ್ನು ಅರ್ಹರನ್ನಾಗಿ ಮಾಡಿದ್ದು, ಅವರ ಋಣ ತೀರಿಸಬೇಕಿದೆ. ಎಚ್.ವಿಶ್ವನಾಥ್, ಎಂ.ಟಿ.ಬಿ. ನಾಗರಾಜ್ ಅವರು ಸೋತಿರುವುದು ನೋವಾಗಿದ್ದು, ಅವರು ಗೆಲ್ಲಬೇಕಿತ್ತು ಎಂದು ಹೇಳಿದರು.