ಧಾರಾಕಾರ ಮಳೆ : ಹೊಯಿಗೆ ತೋಟ ಪ್ರದೇಶ ಜಲಾವೃತ
Team Udayavani, Jul 19, 2019, 9:09 PM IST
ಪಡುಬಿದ್ರಿ: ಇಂದು ಬೆಳಿಗ್ಗೆಯಿಂದ ಸುರಿದ ಧಾರಾಕಾರ ಮಳೆಯಿಂದ ಪಡುಬಿದ್ರಿ ಪಾದೆಬೆಟ್ಟು ಗ್ರಾಮದ ಹೊಯಿಗೆ ತೋಟ ಪ್ರದೇಶ ಜಲಾವೃತವಾಗಿದೆ. ಮಧ್ಯಾಹ್ನ ನೆರೆ ನೀರು ಮನೆಯಂಗಳಕ್ಕೆ ನುಗ್ಗಿದ ಪರಿಣಾಮ ಇಲ್ಲಿನ ಆರು ಮನೆಗಳವರು ತೊಂದರೆ ಅನುಭವಿಸಿದರು.
ಪಾದೆಬೆಟ್ಟು ಗ್ರಾಮದಲ್ಲಿ ಮಳೆ ನೀರು ಹರಿದು ಕಾಮಿನಿ ನದಿ ಸೇರುವ ಬೃಹತ್ ತೋಡುಗಳ ಮಧ್ಯದ ಪ್ರದೇಶದಲ್ಲಿರುವ ಇಲ್ಲಿ ಹಲವು ವರ್ಷಗಳಿಂದ ನೆರೆ ಹಾವಳಿ ಉಂಟಾಗುತ್ತಿದೆ. ಅದಕ್ಕೆ ಈವರೆಗೂ ಶಾಶ್ವತ ಪರಿಹಾರ ಲಭಿಸಿಲ್ಲ. ಇದೀಗ ನೆರೆಯ ಪರಿಣಾಮ ಜನ ಆತಂಕದಲ್ಲಿಯೇ ರಾತ್ರಿ ಕಳೆಯುವಂತಾಗಿದೆ. ನಾಟಿ ಕೆಲಸಕ್ಕೆ ತೆರಳಿದ್ದ ಇಲ್ಲಿನ ಹಿರಿಯ ನಿವಾಸಿ ಮೀನಾಕ್ಷಿಯವರನ್ನು ಮನೆಯವರೆಲ್ಲ ಸೇರಿ ನೆರೆ ನೀರಿನಲ್ಲಿಯೇ ಕರೆ ತಂದರು.
ಸಂಪರ್ಕ ರಸ್ತೆ ಕೊರತೆಯಿಂದ ಇಲ್ಲಿನ ನಿವಾಸಿಗಳು ದೈನಂದಿನ ಕೆಲಸ ಕಾರ್ಯಕ್ಕೆ ಸಾಗಬೇಕಾದರೆ ಗದ್ದೆ ಬದುಗಳೇ ಇವರಿಗೆ ರಸ್ತೆಯಾಗಿದೆ. ಮಳೆಯಂದ ನೆರೆ ನೀರು ತುಂಬಿ ಗದ್ದೆ ಬದುಗಳು ಮುಳುಗಡೆಯಾಗಿ ಆತಂಕದ ವಾತಾವರಣ ನಿರ್ಮಾಣವಾಗಿದೆ.