ಪಶು ಸಂಜೀವಿನಿಗೆ ಶೀಘ್ರ ಚಾಲನೆ: ಸಚಿವ ಪ್ರಭು ಚವ್ಹಾಣ್
Team Udayavani, Feb 16, 2023, 5:45 AM IST
ಬೆಂಗಳೂರು: ಜಾನುವಾರುಗಳ ಚಿಕಿತ್ಸೆಗೆ ಹಾಗೂ ಗೋಸಂತತಿಯ ರಕ್ಷಣೆಗೆ ಜಾರಿಗೆ ತರಲಾಗಿರುವ ಪಶು ಸಂಜೀವಿನಿ ಯೋಜನೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಪಶುಸಂಗೋಪನ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ನ ಗೋವಿಂದರಾಜು ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಮತ್ತು ರಾಜ್ಯ ಸರಕಾರದ ಶೇ. 60ಃ40ರ ಅನುಪಾತದಲ್ಲಿ ಪಶುಸಂಜೀವಿನಿ ಯೋಜನೆ ಜಾರಿಗೆ ತರಲಾಗಿದೆ. ಎರಡು ಬಾರಿ ಟೆಂಡರ್ ಕರೆದರೂ ಯಾರೂ ಬಂದಿಲ್ಲ. ಈಗ ಟೆಂಡರ್ ಆಗಿದೆ, ಶೀಘ್ರದಲ್ಲೇ ಪಶು ಸಂಜೀವಿನಿ ಆ್ಯಂಬುಲೆನ್ಸ್ಗಳು ರಸ್ತೆಗಿಳಿಯಲಿವೆ ಎಂದರು. ಅಲ್ಲದೇ 400 ಪಶುವೈದ್ಯರ ನೇಮಕಾತಿ ವಿಚಾರ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆದು ಈಗ ತೀರ್ಪಿನ ಹಂತಕ್ಕೆ ಬಂದಿದೆ. ತೀರ್ಪು ಸರಕಾರದ ಪರವಾಗಿ ಬರುವ ವಿಶ್ವಾಸವಿದೆ. ಅದಾದ ಅನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ರಾಜ್ಯದ ಬೇರೆ-ಬೇರೆ ಕಡೆ 25 ಪಶುವೈದ್ಯರು ಇಒಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಭೋಜೇಗೌಡ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಎಲ್ಲ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳಲಾಗಿದೆ. ಕೆಲವರು ನಿಯೋಜನೆ ಮೇರೆಗೆ ಮತ್ತೆ ಹೋಗಿರಬಹುದು.
ಅವರನ್ನು ಈ ಅಧಿವೇಶನ ಮುಗಿಯುವುದರೊಳಗೆ ವಾಪಸ್ ಕರೆಸಿಕೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು. ವಾಪಸ್ ಕರೆಸಿಕೊಂಡ ಪಟ್ಟಿಯನ್ನು ಮುಂದಿನ ವಾರ ಸದನದಲ್ಲಿ ಮಂಡಿಸಿ ಎಂದು ಸಭಾಪತಿ ಹೊರಟ್ಟಿ ಹೇಳಿದರು.