ನಕ್ಷತ್ರ ಆಮೆ ಮಾರಾಟ ಯತ್ನ : ಮೂವರ ಬಂಧನ
Team Udayavani, Feb 26, 2021, 2:32 AM IST
ಮಡಿಕೇರಿ: ಅಳಿವಿನಂಚಿನಲ್ಲಿರುವ ಅಪರೂಪದ ನಕ್ಷತ್ರ ಆಮೆಯನ್ನು 50 ಲಕ್ಷ ರೂ.ಗಳಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ವಿರಾಜಪೇಟೆ ಸಿಐಡಿ ಪೊಲೀಸ್ ಅರಣ್ಯ ಸಂಚಾರ ದಳ ಯಶಸ್ವಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕನಕಪುರ ನಿವಾಸ ಎಂ.ರಾಮಮೂರ್ತಿ (20), ಚನ್ನಪಟ್ಟಣದ ವಿ.ಕೆ. ರಮೇಶ್(31) ಮತ್ತು ಕೆ.ಆರ್. ನಗರ ತಾಲೂಕು ಭೇರ್ಯ ಗ್ರಾಮದ ಬಿ.ಎನ್. ಯೋಗೇಶ್(20)ಬಂಧಿತರು. ಆರೋಪಿಗಳಿಂದ 2 ಜೀವಂತ ನಕ್ಷತ್ರ ಆಮೆ ಮತ್ತು ಕಾರನ್ನು ವಶಪಡಿಸಿಕೊಳ್ಳಲಾಗಿದೆ.
2 ನಕ್ಷತ್ರ ಆಮೆಗಳ ಸಹಿತ ಆರೋಪಿಗಳು ಫೆ. 24ರ ಸಂಜೆ ವಿರಾಜಪೇಟೆ ತಾಲೂಕಿನ ಚೆನ್ನಂಗೊಲ್ಲಿಯ ಬಸ್ ತಂಗುದಾಣದ ಬಳಿ ಬಂದಾಗ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭ ಕಾರಿನಲ್ಲಿ ನಕ್ಷತ್ರ ಆಮೆಗಳು ಪತ್ತೆಯಾಗಿದ್ದು, 3 ಮಂದಿ ಆರೋಪಿಗಳನ್ನು ಸ್ಥಳದಲ್ಲೇ ಬಂಧಿಸಲಾಗಿದೆ. ವಿಚಾರಣೆ ವೇಳೆ ಆಮೆಗಳನ್ನು 50 ಲಕ್ಷ ರೂ.ಗಳಿಗೆ ಮಾರಾಟ ಮಾಡಲು ತಂದಿರುವುದಾಗಿ ಆರೋಪಿಗಳು ಹೇಳಿದ್ದಾರೆ. ಮೂವರು ಆರೋಪಿಗಳನ್ನು ಪೊನ್ನಂಪೇಟೆಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಮಡಿಕೇರಿ ಸಿಐಡಿ ಪೊಲೀಸ್ ಫಾರೆಸ್ಟ್ ಸೆಲ್ನ ಎಸ್.ಪಿ. ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ವೀಣಾ ನಾಯಕ್, ಸಿಬಂದಿಗಳಾದ ಕೆ.ಬಿ. ಸೋಮಣ್ಣ, ಟಿ.ಪಿ. ಮಂಜುನಾಥ್, ಪಿ.ಬಿ. ಮೊಣ್ಣಪ್ಪ, ಎಂ.ಬಿ. ಗಣೇಶ್, ಎಸ್.ಎಂ. ಯೋಗೇಶ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.