ರಾಜ್ಯ ಸರಕಾರಿ ನೌಕರರ ಕರ್ತವ್ಯ ವಿನಾಯಿತಿ ಅವಧಿ ಎಪ್ರಿಲ್ 14ರವರೆಗೆ ವಿಸ್ತರಣೆ
ರಾಜ್ಯ ಸರಕಾರದ ಬಿ, ಸಿ ಮತ್ತು ಡಿ ದರ್ಜೆ ನೌಕರರಿಗೆ ಮಾರ್ಚ್ 31ರವರೆಗೆ ನೀಡಿದ್ದ ರಜೆಯನ್ನು ಎಪ್ರಿಲ್ 14 ರವರೆಗೆ ವಿಸ್ತರಿಸಲಾಗಿದೆ
Team Udayavani, Mar 30, 2020, 7:22 PM IST
ಬೆಂಗಳೂರು: ಕೋವಿಡ್ 19 ವೈರಸ್ ಸಾಂಕ್ರಾಮಿಕತೆಯನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರವು ತನ್ನ ನೌಕರರಿಗೆ ಮಾರ್ಚ್ 24 ರಿಂದ ಮಾರ್ಚ್ 31ರವರೆಗೆ ಕಛೇರಿ ಹಾಜರಾತಿಯಿಂದ ವಿನಾಯಿತಿ ನೀಡಿ ಆದೇಶ ಹೊರಡಿಸಿತ್ತು. ಇದೀಗ ಈ ಆದೇಶದ ಅವಧಿ ಮುಗಿಯಲಿರುವುದರಿಂದ ಸುತ್ತೋಲೆ ಸಂಖ್ಯೆ ಸಿಆಸುಇ 123 ಡಿಬಿಎಂ 2020ನ್ನು ಎಪ್ರಿಲ್ 14ರ ಮಧ್ಯರಾತ್ರಿ 12 ಗಂಟೆಗಳವರೆಗೆ ವಿಸ್ತರಿಸಿ ಹೊಸ ಆದೇಶ ಹೊರಡಿಸಿದೆ.
ಈ ಆದೇಶದ ಪ್ರಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಒಳಾಡಳಿತ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಾರಿಗೆ ಇಲಾಖೆ, ಪಶು ವೈದ್ಯಕೀಯ ಇಲಾಖೆ ಮತ್ತು ಇಂಧನ ಇಲಾಖೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಇತರೇ ಇಲಾಖೆಗಳಲ್ಲಿ, ಸರಕಾರಿ ನಿಗಮ/ಮಂಡಳಿ/ಪ್ರಾಧಿಕಾರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್-ಬಿ, ಗ್ರೂಪ್-ಸಿ ಮತ್ತು ಗ್ರೂಪ್-ಡಿ ಅಧಿಕಾರಿ/ನೌಕರರ ಕಛೇರಿ ಕರ್ತವ್ಯ ನಿರ್ವಹಣೆಗೆ ವಿನಾಯಿತಿಯನ್ನು ಎಪ್ರಿಲ್ 14ರ ಮಧ್ಯರಾತ್ರಿಯವರೆಗೆ ಮುಂದುವರಿಸಲಾಗಿದೆ.
ಆದರೆ, ಸರಕಾರ ಬಯಸಿದಲ್ಲಿ ಮತ್ತು ಕೋವಿಡ್ 19 ಪರಿಸ್ಥಿತಿಯ ತುರ್ತು ನಿರ್ವಹಣೆಗೆ ಅಗತ್ಯವಿದ್ದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇತರೆ ಎಲ್ಲಾ ಸರಕಾರಿ ಇಲಾಖೆಗಳ ಹಾಗೂ ಈ ಇಲಾಖೆಗಳ ಸರಕಾರಿ ನಿಗಮ/ಮಂಡಳಿಗಳ/ಪ್ರಾಧಿಕಾರಗಳ ಅಧಿಕಾರಿಗಳ ಸೇವೆಯನ್ನು ಅಗತ್ಯವಿದ್ದಲ್ಲಿ ಆಯಾ ಜಿಲ್ಲೆಗಳ ಅಧಿಕಾರಿಗಳು ಪಡೆದುಕೊಳ್ಳಬಹುದೆಂದು ಈ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರಾಗಿರುವ ಟಿ.ಎಂ. ವಿಜಯ ಭಾಸ್ಕರ್ ಅವರು ಸರಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು/ಪ್ರಧಾನ ಕಾರ್ಯದರ್ಶಿಗಳು/ಕಾರ್ಯದರ್ಶಿಗಳು ಹಾಗೂ ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ಈ ಸುತ್ತೋಲೆಯನ್ನು ರವಾನಿಸಿದ್ದಾರೆ.