14.94 ಲಕ್ಷ ರೂ. ಮೌಲ್ಯದ ಸಿಂಥೆಟಿಕ್ ಡ್ರಗ್ ವಶ : ಮಣಿಪಾಲದ ವಿದ್ಯಾರ್ಥಿ ಬಂಧನ
Team Udayavani, Oct 5, 2020, 10:12 AM IST
ಉಡುಪಿ: ಮಣಿಪಾಲದ ಶೀಂಬ್ರ ಸಮೀಪ ನಿಷೇಧಿತ ಎಂಡಿಎಂಎ ಮಾತ್ರೆಗಳನ್ನು (ಸಿಂಥೆಟಿಕ್ ಡ್ರಗ್) ಮಾರಾಟ ಮಾಡಲು ಪ್ರಯತ್ನಸಿದ ದಿಲ್ಲಿ ಮೂಲದ ಆರೋಪಿ ಹಿಮಾಂಶು ಜೋಷಿ (20)ಯನ್ನು ಉಡುಪಿ ಆಂತರಿಕ ಭದ್ರತಾ ವಿಭಾಗ (ಐಎಸ್ಡಿ) ಹಾಗೂ ಮಣಿಪಾಲದ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ರವಿವಾರ ಬಂಧಿಸಿ, 14.94 ಲ.ರೂ. ಮೌಲ್ಯದ ಎಂಡಿಎಂಎ ನಿಷೇಧಿತ ಮಾತ್ರೆಗಳನ್ನು ವಶಪಡಿಕೊಂಡಿದ್ದಾರೆ.
ಆರೋಪಿಯು ಮಣಿಪಾಲದ ವಿದ್ಯಾರ್ಥಿ. ಆರೋಪಿಯು ಶೀಂಬ್ರ ಸೇತುವೆ ಸಮೀಪ ಬೈಕ್ನಲ್ಲಿ ನಿಷೇಧಿತ ಮಾತ್ರೆಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದ ಸಂದರ್ಭ ಪೊಲೀಸರು ದಾಳಿ ನಡೆಸಿ ಆರೋಪಿಯಿಂದ 498 ನಿಷೇಧಿತ ನಿದ್ರಾಜನಕ ಎಂಡಿಎಂಎ ಮಾತ್ರೆ, ದ್ವಿಚಕ್ರ ವಾಹನ, ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ, ಮಂಗಳೂರಿನ ಆಂತರಿಕ ಭದ್ರತಾ ವಿಭಾಗ ಡಿಎಸ್ಪಿ ಕೆ.ಎಲ್. ಗಣೇಶ್ ಅವರ ಮಾರ್ಗದರ್ಶನದಲ್ಲಿ ಉಡುಪಿ ಆಂತರಿಕ ಭದ್ರತಾ ವಿಭಾಗದ ನಿರೀಕ್ಷಕ ಮಧು ಪಿ.ಎಸ್., ಡಿವೈಎಸ್ಪಿ ಟಿ.ಆರ್. ಜೈಶಂಕರ್, ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ ಎಂ. ಗೌಡ, ಉಪನಿರೀಕ್ಷಕ ರಾಜ್ಶೇಖರ್ ವಂದಲಿ, ಉಡುಪಿ ಅಸಿಸ್ಟೆಂಟ್ ಡ್ರಗ್ಸ್ ಆ್ಯಂಡ್ ಕಂಟ್ರೋಲರ್ ನಾಗರಾಜ್, ಐಎಸ್ಡಿ ಘಟಕದ ದಿನೇಶ್ ಶೆಟ್ಟಿ, ಪ್ರಸಾದ್ ಶೆಟ್ಟಿ, ಮಂಜುನಾಥ್ ಶೆಟ್ಟಿ ಹಾಗೂ ಸಿಂಬದಿ ಶೈಲೇಶ್ ಎಚ್.ಸಿ., ಥಾಮ್ಸನ್, ಪ್ರಸನ್ನ, ಆದರ್ಶ ನಾಯ್ಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ :ಮುನ್ನೆಚ್ಚರಿಕೆಯೊಂದಿಗೆ ಮಂಗಳೂರು ದಸರಾ : ಈ ಬಾರಿ ದಸರಾ ಮೆರವಣಿಗೆ ಇಲ್ಲ
ಡ್ರಗ್ಸ್ ದಂಧೆ ಹಲವು ದಿನಗಳಿಂದ ಮುಂಚೂಣಿ ನೆಲೆಗೆ ಬರುತ್ತಿದ್ದು, ಮಾತ್ರೆ ರೂಪದಲ್ಲಿ ದಂಧೆ ಪತ್ತೆಯಾಗಿರುವುದು ಮತ್ತು ವಿದ್ಯಾರ್ಥಿಯೊಬ್ಬ ಪೆಡ್ಲರ್ ಆಗಿರುವುದು ಇದೇ ಮೊದಲ ಬಾರಿ ಎನ್ನಲಾಗಿದೆ.
ಡ್ರಗ್ಸ್ ಮೂಲದತ್ತ ಪೊಲೀಸರ ಚಿತ್ತ
ಮಂಗಳೂರು : ಡ್ರಗ್ಸ್ ಜಾಲವನ್ನು ಭೇದಿಸುವ ನಿಟ್ಟಿನಲ್ಲಿ ಪೊಲೀಸರ ತನಿಖೆ ಮುಂದುವರಿಯುತ್ತಿದ್ದು, ಮಂಗಳೂರಿಗೆ ಡ್ರಗ್ಸ್ ಪೂರೈಕೆಯ ಮೂಲವನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಈ ದಿಸೆಯಲ್ಲಿ ಈಗಾಗಲೇ ಡ್ರಗ್ಸ್ ಸೇವಿಸಿ ಪೊಲೀಸರ ಬಲೆಗೆ ಬಿದ್ದಿರುವವರ ಬೆನ್ನುಹಿಡಿಯಲು ಪೊಲೀಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಂಥವರನ್ನು ಪುನಃ ಕರೆಸಿ ವಿಚಾರಣೆಗೆ ಒಳಪಡಿಸಿದರೆ ಡ್ರಗ್ ಪೆಡ್ಲರ್ಗಳ ಬಗ್ಗೆ ಕೆಲವು ಮಾಹಿತಿಗಳಾದರೂ ಸಿಗಬಹುದೆಂಬ ನಿರೀಕ್ಷೆ ಪೊಲೀಸರದ್ದು.
ಇದನ್ನೂ ಓದಿ :ಕಬಡ್ಡಿ ಆಟಗಾರ ಪ್ರತಾಪ್ಗೆ ಸಿಗದ ಅವಕಾಶ : ಅಧಿಕಾರಿಗಳ ಜತೆ ಚರ್ಚೆ ನಡೆಸುವೆ ಎಂದ ಡಿವಿಎಸ್
ಮಂಗಳೂರು ಸಿಸಿಬಿ ಪೊಲೀಸರು ಈಗಾಗಲೇ ನೈಜೀರಿಯಾ ಪ್ರಜೆ ಸಹಿತ 6 ಮಂದಿಯನ್ನು ಬಂಧಿಸಿದ್ದಾರೆ. ಬೆಂಗಳೂರು ಮತ್ತು ಮುಂಬಯಿಯಿಂದ ವಶಕ್ಕೆ ಪಡೆದು ಬಂಧಿಸಿರುವ ನೈಜೀರಿಯಾದ ಘಾನಾ ಪ್ರಜೆ ಫ್ರಾಂಕ್ ಸಂಡೇ ಇಬೆಬುಚಿ ಮತ್ತು ಕೂಳೂರು ಗುಡ್ಡೆ ಅಂಗಡಿಯ ಶಮೀನ್ ಫೆರ್ನಾಂಡಿಸ್ ಯಾನೆ ಶ್ಯಾಮ್ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದು, ತನಿಖೆ ಮುಂದುವರಿದಿದೆ.