ಸಮಸ್ಯೆಯ ಸುಳಿಯಲ್ಲಿ ಕಬ್ಬು ಬೆಳೆಗಾರರು ; ಭೂಮಿ ತೇವಾಂಶ ಅಧಿಕ ಸಾಗಣೆ ವೆಚ್ಚ ಹೆಚ್ಚು
Team Udayavani, Dec 13, 2021, 4:24 PM IST
ಹೊಸಪೇಟೆ: ಸಕಾಲಕ್ಕೆ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಣಿಕೆಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ತಾಲೂಕಿನ ಕಬ್ಬು ಬೆಳೆಗಾರರಿಗೆ ಸಂಕಷ್ಟ ಎದುರಾಗಿದ್ದು ಸಮಸ್ಯೆ ಸುಳಿಯಲ್ಲಿ ಸಿಲುಕಿದ್ದಾರೆ.
ಕಬ್ಬು ಖರೀದಿಗೆ ರೈತರ ಬಳಿ ಸಕ್ಕರೆ ಕಾರ್ಖಾನೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿರುವುದರಿಂದ ಆಕಾಶದತ್ತೆರಕ್ಕೆ ಬೆಳೆದ ನಿಂತು ಕಬ್ಬಿನ ಇಳುವರಿ ಕುಂಠಿತವಾಗಿ ಕೈಬಂದ ತುತ್ತು ಬಾಯಿಗೆ ಬರದಂತಾಗಿದೆ.
ತಾಲೂಕಿನಲ್ಲಿ 4 ಲಕ್ಷಕ್ಕೂ ಅಧಿಕ ಟನ್ನಷ್ಟು ಬೆಳೆದ ಕಬ್ಬು ಸೂಲಿಂಗ ಹೊಡೆದಿದ್ದು, ಕಬ್ಬಿನ ತೂಕ ಕಡಿಮೆಯಾಗಿ ರೈತರು ಸಾಲದ ಸುಳಿಯಲ್ಲಿ ಸಿಲುಕುವಂತಾಗಿದ್ದಾರೆ. ಇತ್ತೀಚಿಗೆ ಸುರಿದ ಅಕಾಲಿಕ ಮಳೆಗೆ ಭೂಮಿಯಲ್ಲಿ ತೇವಾಂಶ ಅಧಿಕಗೊಂಡು ಕಬ್ಬು ಕಟಾವ್ ಮಾಡಿ ಹೊರ ಸಾಗಿಸಲು ರೈತರಿಗೆ ಹೆಚ್ಚು ನಿರ್ವಹಣೆ ವೆಚ್ಚ ತಗಲಿದೆ. ಇದರಿಂದಾಗಿ ರೈತರಿಗೆ ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ.
ರೈತರ ಬಳಿ ಸುಳಿಯದ ಕಾರ್ಖಾನೆ: ಈ ಭಾಗದಲ್ಲಿ ಪ್ರತಿವರ್ಷ ಅಕ್ಟೋಬರ್ ತಿಂಗಳಲ್ಲಿ ಕಬ್ಬು ಖರೀದಿಗೆ ಆಗಮಿಸುವ ಮೈಲಾರ, ಶಾಮನೂರು ಶುಗರ್ (ದುಗತ್ತಿ), ಮುಂಡ್ರಗಿ ಸಕ್ಕರೆ ಕಾರ್ಖಾನೆ ಅಧಿಕಾರಿಗಳು ಡಿಸೆಂಬರ್ ಕಳೆಯುತ್ತ ಬಂದಿದ್ದರೂ ಇನ್ನೂ ಕಬ್ಬು ಬೆಳೆಗಾರರ ಬಳಿ ಸುಳಿದಿರಿವುದು ಈ ಭಾಗದ ರೈತರ ಆತಂಕಕ್ಕೆ ಕಾರಣವಾಗಿದೆ.
ಕಾರ್ಖಾನೆ ಆಡಳಿತ ಮಂಡಳಿ ಹಾಗೂ ರೈತರೊಂದಿಗೆ ನಡುವೆ ಆದ ಒಪ್ಪಂದಂತೆ ಪ್ರತಿ ಟನ್ ಕಬ್ಬಿಗೆ 2150 ರೂ ನಿಗದಿಪಡಿಸಲಾಗಿದೆ. ಟನ್ ಕಬ್ಬು ಕಟಾವಿಗಾಗಿ ಕಾರ್ಖಾನೆಯವರು ಕೃಷಿ ಕಾರ್ಮಿಕರಿಗೆ 350 ರೂ. ಇಂದ 400 ರೂವರೆಗೆ ಕೊಟ್ಟರೂ ರೈತರಲ್ಲಿ 300-400 ರೂ ಹಣವನ್ನು ಹೆಚ್ಚುವರಿಯಾಗಿ ಪಡೆಯುತ್ತಿದ್ದಾರೆ. ಒಂದೊಮ್ಮೆ ರೈತರು ಹೆಚ್ಚುವರಿ ಹಣ ನೀಡಲು ನಿರಾಕರಿಸಿದರೆ ಕಬ್ಬು ಕಟಾವ್ ನಿಲ್ಲಿಸುತ್ತಾರೆ. ಅಲ್ಲದೆ, ಚಾಲಕರಿಗೆ 500ರಿಂದ 700 ವರೆಗೆ ಚಾಲಕರಿಗೆ ಬಾಟ ನೀಡಬೇಕಿದೆ. ಇದು ರೈತರಿಗೆ ಆರ್ಥಿಕ ವೆಚ್ಚದ ಜೊತೆಯಲ್ಲಿ ಆತಂಕಕ್ಕೂ ಕಾರಣವಾಗಿದೆ. ಈ ಭಾಗದ ಕಬ್ಬು ಬೆಳೆಗಾರರ ಅನುಕೂಲವಾಗಿದ್ದ ಆರೇಳು ದಶಕಗಳ ಕಾರ್ಖಾನೆ, ಸ್ಥಗಿತಗೊಂಡು ಆರು ವರ್ಷ ಕಳೆದಿವೆ. ಇದರಿಂದಾಗಿ ಕಬ್ಬು ಬೆಳೆದ ರೈತರು, ಹೊರ
ಜಿಲ್ಲೆಗಳ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸಲು ಹೆಣಗಾಡುತ್ತಿದ್ದಾರೆ.
ಇದನ್ನೂ ಓದಿ : ಹೂಡಿಕೆದಾರರಿಗೆ ನಷ್ಟ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 503 ಅಂಕ ಇಳಿಕೆ, ನಿಫ್ಟಿಯೂ ಕುಸಿತ
ಇಷ್ಟೆಲ್ಲ ಕಬ್ಬು ಬೆಳೆಗಾರರು ತಾಪತ್ರೆ ಪಡುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಅವರಾಗಲಿ ಅಥಾವ ಜಿಲ್ಲಾಡಳಿತವಾಗಲಿ ಇತ್ತ ಗಮನ ಹರಿಸುದಿರುವುದು ರೈತರ ಆಕ್ರೋಶಕ್ಕೆ
ಕಾರಣವಾಗಿದೆ. ಕೂಡಲೇ ಜಿಲ್ಲಾ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಕಬ್ಬು ಕಟಾವಿಗೆ ದರ ನಿಗದಿಪಡಿಸಬೇಕು. ತಕ್ಷಣವೇ ರೈತರ ಕಬ್ಬನ್ನು ದೂರದ ಕಾರ್ಖಾನೆಗಳಿಗೆ ಸಾಗಿಸಲು ಅನುವು ಮಾಡಿಕೊಡಬೇಕು ಎಂಬುದು ಈ ಭಾಗದ ರೈತಾಪಿವರ್ಗದ ಒತ್ತಾಸೆಯಾಗಿದೆ.
ಕಾರ್ಖಾನೆ ಆಡಳಿತ ಮಂಡಳಿ ಹಾಗೂ ರೈತರೊಂದಿಗೆ ನಡುವೆ ಆದ ಒಪ್ಪಂದಂತೆ ಪ್ರತಿ ಟನ್ ಕಬ್ಬಿಗೆ 2150 ರೂವನ್ನು ನಿಗದಿಪಡಿಸಲಾಗಿದೆ. ಟನ್ ಕಬ್ಬು ಕಟಾವಿಗಾಗಿ ಕಾರ್ಖಾನೆಯವರು ಕೃಷಿ ಕಾರ್ಮಿಕರಿಗೆ 350 ರೂದಿಂದ 400 ರೂವರೆಗೆ ಕೊಟ್ಟರೂ ರೈತರಲ್ಲಿ 300-400 ರೂ ಹಣವನ್ನು ಹೆಚ್ಚುವರಿಯಾಗಿ ಪಡೆಯುತ್ತಿದ್ದಾರೆ. ಒಂದೊಮ್ಮೆ ರೈತರು ಹೆಚ್ಚುವರಿ ಹಣ ನೀಡಲು ನಿರಾಕರಿಸಿದರೆ, ಕಬ್ಬು ಕಟಾವ್ ನಿಲ್ಲಿಸುತ್ತಾರೆ.
∙ ತಾರಿಹಳ್ಳಿ ಗಾಳೆಪ್ಪ,ಕಬ್ಬು ಬೆಳೆಗಾರ ಹೊಸಪೇಟ
ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಅವರಾಗಲಿ ಅಥವಾ ಜಿಲ್ಲಾಡಳಿತವಾಗಲಿ ಇತ್ತ ಗಮನ ಹರಿಸದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಜಿಲ್ಲಾ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಕಬ್ಬು ಕಟಾವಿಗೆ ದರ ನಿಗದಿಪಡಿಸಬೇಕು. ತಕ್ಷಣವೇ ರೈತರ ಕಬ್ಬನ್ನು ದೂರದ ಕಾರ್ಖಾನೆಗಳಿಗೆ ಸಾಗಿಸಲು ಅನುವು ಮಾಡಿಕೊಡಬೇಕು.
∙ಕಟಗಿ ಕರಿಹನುಮಂತ, ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷರು, ಹೊಸಪೇಟೆ