ಸುಳ್ಯ: ಒಟಿಪಿ ಇಲ್ಲದೆ ನೀಡುತ್ತಿಲ್ಲ ಪಡಿತರ
ಉಸ್ತುವಾರಿ ಸಚಿವರ ಆದೇಶಕ್ಕೂ ಇಲ್ಲಿಲ್ಲ ಕಿಮ್ಮತ್ತು!
Team Udayavani, Apr 5, 2020, 1:07 PM IST
ಸುಳ್ಯ: ಕೋವಿಡ್ 19 ಲಾಕ್ಡೌನ್ ಹಿನ್ನೆಲೆಯಲ್ಲಿ ಪಡಿತರ ಸಾಮಗ್ರಿ ವಿತರಣೆ ನಿಯಮ ಸರಳಗೊಳಿಸಿ ಸರಕಾರ ಪ್ರಕಟಿಸಿದ ಹೊಸ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ದೊರೆತಿಲ್ಲ. ವಿಳಂಬವಾಗಬಾರದೆಂಬ ಕಾರಣಕ್ಕೆ ಒಟಿಪಿಗೆ ಕಾಯದೆ ತ್ವರಿತವಾಗಿ ವಿತರಿಸುವಂತೆ ಸಚಿವರು ಸೂಚಿಸಿದ್ದರೂ ಇಲ್ಲಿ ಒಟಿಪಿ ಪಡೆದೇ ವಿತರಿಸಲಾಗುತ್ತಿದೆ.
ಶೇ. 90ಕ್ಕೂ ಅಧಿಕ ಕಡೆಗಳಲ್ಲಿ ಸರಕಾರದ ಆದೇಶ ಪಾಲನೆ ಆಗುತ್ತಿಲ್ಲ. ಹೊಸ ನಿಯಮ ಬದಿಗಿಟ್ಟು, ಈ ಹಿಂದಿನ ನೀತಿ ನಿಬಂಧನೆಯಂತೆ ವಿತರಿಸಲಾಗುತ್ತಿದೆ. ಸುಳ್ಯ ಮಾತ್ರವಲ್ಲದೆ ಜಿಲ್ಲೆ ಯಲ್ಲೇ ಈ ಸಮಸ್ಯೆ ಇದೆ ಅನ್ನುತ್ತಾರೆ ಹಲ ವರು. ಹೀಗಾಗಿ ಸರಕಾರ ಆದೇಶದ ಮೇಲೆ ಜನಸಾಮಾನ್ಯರಿಗೆ ಅನುಮಾನ ಮೂಡು ವಂತಾಗಿ ದೆ. ಕೊರೊನಾ ಸೋಂಕಿನ ಭೀತಿ ಯಿಂದ ಬೆರಳಚ್ಚು ಪಡೆಯುವುದನ್ನು ಎಲ್ಲೆಡೆ ನಿಲ್ಲಿಸಿದ್ದರೂ ಇಲ್ಲಿ ಮಾತ್ರ ಒಟಿಪಿ ಇಲ್ಲದಿದ್ದರೆ ಬೆರಳಚ್ಚು ಅನಿವಾರ್ಯ ಎನ್ನುತ್ತಿದ್ದಾರೆ.
ಹೇಳಿದ್ದು 10 ಕೆ.ಜಿ.;
ಕೊಡುವುದು 5 ಕೆ.ಜಿ.!
ಸರಕಾರ ಈ ಹಿಂದೆ ತಿಂಗಳೊಂದಕ್ಕೆ ಪ್ರತಿ ಫಲಾನುಭವಿಗೆ ತಲಾ 7 ಕೆ.ಜಿ. ಅಕ್ಕಿ ನೀಡುತ್ತಿತ್ತು. ಈ ಬಾರಿ ಪ್ರತಿ ಫಲಾನುಭವಿಗೆ ತಲಾ 10 ಕೆ.ಜಿ. ಅಕ್ಕಿ ನೀಡುವುದಾಗಿ ಹೇಳಿತ್ತು. ರಾಜ್ಯ ಸರಕಾರ 5 ಕೆ.ಜಿ. ಹಾಗೂ ಕೇಂದ್ರ ಸರಕಾರ 5 ಕೆ.ಜಿ. ಅಕ್ಕಿ ನೀಡಲಿದ್ದು, ಎರಡು ತಿಂಗಳ ಪಡಿತರ ಒಟ್ಟಾಗಿ ವಿತರಿಸುವುದಾಗಿ ತಿಳಿಸಿತ್ತು. ಎ. 1ರಿಂದ ವಿತರಣೆ ಆರಂಭಿಸಿತ್ತು. ಆದರೆ ಪಡಿತರ ವಿತರಣೆ ಆರಂಭಗೊಂಡ ಬಳಿಕ ಪ್ರತಿ ಪಡಿತರ ಫಲಾನುಭವಿಗೆ ತಿಂಗಳಿಗೆ 5 ಕೆ.ಜಿ.ಯಂತೆ ಎರಡು ತಿಂಗಳಿಗೆ ಕೇವಲ 10 ಕೆ.ಜಿ. ಅಕ್ಕಿ ಸಿಕ್ಕಿದೆ. ಈ ಹಿಂದಿನ ತಿಂಗಳಿಗೆ ಹೋಲಿಸಿದರೆ ತಲಾ 2 ಕೆ.ಜಿ.ಅಕ್ಕಿ ಇಳಿಕೆ ಕಂಡಿದೆ ಅನ್ನುತ್ತಾರೆ ಫಲಾನುಭವಿಗಳು.
ತಾಂತ್ರಿಕ ಸಮಸ್ಯೆಯ ನೆಪ
ಒಟಿಪಿ ಇಲ್ಲದೆ ಪಡಿತರ ಸಾಮಗ್ರಿ ನೀಡಬೇಕು ಎಂಬ ಸರಕಾರದ ಹೊಸ ಆದೇಶ ಪಾಲಿಸಲು ತಾಂತ್ರಿಕ ತೊಂದರೆ ಇದೆ ಎನ್ನುವುದು ಆಹಾರ ಇಲಾಖೆಯ ಅಧಿಕಾರಿಗಳು ನೀಡುವ ಸಬೂಬು. ಒಟಿಪಿ ಪಡೆಯದಿದ್ದರೆ ಬಿಲ್ಲಿಂಗ್ ಸೇರಿದಂತೆ ಬೇರೆ ಬೇರೆ ಸಮಸ್ಯೆಗಳು ತಲೆದೋರುವುದರಿಂದ ಒಟಿಪಿ ಪಡೆದೇ ಅಕ್ಕಿ ವಿತರಿಸಲಾಗುತ್ತಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಆಹಾರ ಇಲಾಖೆಯ ಅಧಿಕಾರಿ.
ಅಕ್ಕಿ ದಾಸ್ತಾನು ಆಧರಿಸಿ ಪ್ರತಿ ಫಲಾನುಭವಿಗೆ ಈಗ 10 ಕೆ.ಜಿ. ನೀಡಲಾಗಿದೆ. ಅಕ್ಕಿ ಪೂರೈಕೆ ಆಗುತ್ತಿದ್ದು, ಉಳಿದ 10 ಕೆ.ಜಿ. ಅಕ್ಕಿಯನ್ನು ನೀಡುತ್ತೇವೆ. ಒಟಿಪಿ ಇಲ್ಲದೆ ವಿತರಿಸಲು ತಾಂತ್ರಿಕ ಸಮಸ್ಯೆ ಇರುವ ಕಾರಣ ಜನರಿಗೆ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಂಡು ಒಟಿಪಿ ಪಡೆದು ವಿತರಿಸಲಾಗುತ್ತಿದೆ.
– ಅನಂತ ಶಂಕರ, ತಹಶೀಲ್ದಾರ್, ಸುಳ್ಯ