ಸಕ್ಕರೆ ಸಂಘರ್ಷದಲ್ಲಿ ಅಕ್ಕರೆಯ ಸಾವಯವ ಬೆಲ್ಲ; ಯುವ ರೈತರಿಗೆ ಕೈಗನ್ನಡಿ
ಜೀವಾಮೃತ ಸಿದ್ಧಪಡಿಸುವ ವಿಧಾನಗಳನ್ನು ಅರಿತರೋ ಅಲ್ಲಿಂದ ಅವರ ಕೃಷಿ ಪದ್ಧತಿಯೇ ಬದಲಾಗಿ ಹೋಯಿತು.
Team Udayavani, Apr 6, 2022, 3:14 PM IST
ಧಾರವಾಡ: ಸಾವಯವ ಬೆಲ್ಲ ಎಂದರೆ ಬೆಲ್ಲ ತಯಾರಿಸುವಾಗ ರಾಸಾಯನಿಕ ಹಾಕದೇ ಇರುವುದು ಎಂದಷ್ಟೇ ನಮ್ಮ ಕಲ್ಪನೆ ಆಗಿದ್ದರೆ ಅದು ತಪ್ಪು. ಬೆಲ್ಲ ತಯಾರಿಕೆಗೆ ಬಳಸುವ ಕಬ್ಬಿಗೂ ರಾಸಾಯನಿಕ ಹಾಕದೆಯೇ ಅದನ್ನು ಸಾವಯವ ಪದ್ಧತಿಯಲ್ಲೇ ಬೆಳೆದು ಅದರಿಂದ ಬಂದ ಹಾಲಿನಲ್ಲಿ ದೇಶಿ ತತ್ವದಡಿ ಬೆಲ್ಲ ಸಿದ್ಧಗೊಂಡಾಗ ಅದು ಪಕ್ಕಾ ಸಾವಯವ.
ಹೌದು. ಸಾವಯವ ಉತ್ಪನ್ನಗಳ ದೃಢೀಕರಣ ಕಷ್ಟವಾದರೂ ರಾಸಾಯನಿಕ ಮುಕ್ತ ಉತ್ಪನ್ನಗಳನ್ನು ಜನರು ಇಂದು ಹೆಚ್ಚು ಕೇಳುತ್ತಿದ್ದಾರೆ. ಬೆಳೆಗಳಿಗೆ ರಾಸಾಯನಿಕ ಬಳಸಿ, ಉತ್ಪನ್ನ ಸಿದ್ಧಗೊಳಿಸುವಾಗ ಸಾವಯವ ಪದ್ಧತಿ ಅಳವಡಿಸಿದರೆ ಸಾಕು ಎನ್ನುವ ಕಾಲವೊಂದಿತ್ತು. ಆದರೆ ಇದೀಗ ಶೇ.100 ಸಾವಯವ ಪದ್ಧತಿಯ ಬೆಲ್ಲ ತಯಾರಿಕೆ ಮತ್ತು ಮಾವು ಬೆಳೆದು ತೋರಿಸಿ ಸಾಧನೆ ಮಾಡಿದ್ದಾರೆ ಧಾರವಾಡ ಸಮೀಪದ ಬಾಡ ಗ್ರಾಮದ ಯುವ ರೈತ ಕಲ್ಲನಗೌಡ ಪಾಟೀಲ.
ಸಾವಯವ ಬೆಲ್ಲ ಮತ್ತು ಮಾವು ಎರಡನ್ನೂ ಶುದ್ಧ ರೀತಿಯಲ್ಲಿ ಸಿದ್ಧಗೊಳಿಸಿ ಯುವ ರೈತರಲ್ಲಿ ದೇಶಿ ಕೃಷಿ ಮತ್ತು ದೇಶಿ ತತ್ವಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಈ ಯುವಕ ಕೇವಲ ಹತ್ತು ವರ್ಷಗಳ ಹಿಂದಷ್ಟೇ ರಾಸಾಯನಿಕ ಕೃಷಿಯ ಬಿರುಗಾಳಿಗೆ ಸಿಲುಕಿದ್ದರು. ಹಿರಿಯರ ಕಾಲದಿಂದ ಮನೆಯಲ್ಲಿದ್ದ ದೇಶಿ ಕೃಷಿ ತತ್ವಗಳು ದೂರವಾಗಿದ್ದನ್ನು ಗಮನಿಸಿ ಮತ್ತೆ ಅದನ್ನು ಮರಳಿ ತಂದು ಬೇರೆ ರೈತರಿಗೂ ಮಾದರಿಯಾಗುವ ರೀತಿಯಲ್ಲಿ ಸಾವಯವ ಕೃಷಿ ಮತ್ತು ಕೃಷಿಯ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಿ ಸೈ ಎನಿಸಿದ್ದಾರೆ.
ಭತ್ತ, ಹತ್ತಿ, ಗೋವಿನಜೋಳ, ಸೋಯಾ ಅವರೆ ಸೇರಿದಂತೆ ಬೇರೆ ಬೆಳೆಗಳನ್ನು ಬೆಳೆದ ತಮ್ಮ ಹೊಲಕ್ಕೆ ಎಲ್ಲರಂತೆ ವಿಪರೀತ ರಾಸಾಯನಿಕ ಗೊಬ್ಬರ-ಕ್ರಿಮಿನಾಶಕಗಳನ್ನು ಸಿಂಪರಿಸಿ ಈ ಕುಟುಂಬ ಸುಸ್ತಾಗಿ ಹೋಗಿತ್ತು. ಯಾವಾಗ ಕೊಲ್ಲಾಪುರದ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿಗಳ ಸಾವಯವ ಕೃಷಿ, ಲಾಕ್ಪತಿ ಸೇತ್ಕಿ, ದೇಶಿ ಗೋವುಗಳ ಸಂರಕ್ಷಣೆ ಮತ್ತು ಅವುಗಳಿಂದ ಜೀವಾಮೃತ ಸಿದ್ಧಪಡಿಸುವ ವಿಧಾನಗಳನ್ನು ಅರಿತರೋ ಅಲ್ಲಿಂದ ಅವರ ಕೃಷಿ ಪದ್ಧತಿಯೇ ಬದಲಾಗಿ ಹೋಯಿತು.
ಬೆಲ್ಲವಲ್ಲ ಕಬ್ಬು ಸಾವಯವ: ಮೊದ ಮೊದಲು ಬೆಲ್ಲ ತಯಾರಿಸುವಾಗ ಮಾತ್ರ ರಾಸಾಯನಿಕ ಬಳಸದಂತೆ ಎಚ್ಚರ ವಹಿಸಿದ ಕಲ್ಲನಗೌಡರಿಗೆ ಇದು ತೃಪ್ತಿ ತರಲಿಲ್ಲ. ಬೆಲ್ಲ ಮಾಡುವ ವಿಧಾನ ಸಾವಯವ ಆಯಿತು. ಆದರೆ ಬೆಲ್ಲಕ್ಕೆ ಬಳಸುವ ಕಬ್ಬಿಗೆ ನಾವು ರಾಸಾಯನಿಕ ಸಿಂಪರಿಸಿದರೆ ಅದು ಹೇಗೆ ಸಾವಯವ ಎಂಬ ಪ್ರಶ್ನೆ ಮೂಡಿತು. ಕೂಡಲೇ ಕಾರ್ಯಪ್ರವೃತ್ತರಾದ ಅವರು, ವಿಷ ತುಂಬಿದ ಹೊಲದ ಮಣ್ಣನ್ನೇ ಸಾವಯವ ಮಾಡಲು ಸಜ್ಜಾದರು. ಪ್ರತಿ ಎಕರೆಗೆ 15 ಸಾವಿರ ಲೀಟರ್ನಷ್ಟು ಗೋಕೃಪಾಮೃತ ಸಿಂಪರಿಸಿದರು. ಮಣ್ಣಿನ ಕಣಗಳಿಗೆ ಲಕ್ಷ ಲೀಟರ್ಗಟ್ಟಲೇ ಗೋ ಜೀವಾಮೃತ ಉಣಿಸಿ ಮಣ್ಣನ್ನೇ ಸದೃಢಗೊಳಿದರು.
ಮಾವಿನ ಕಾಯಿಗಳನ್ನು ಹಣ್ಣು ಮಾಡಲು ರಾಸಾಯನಿಕ ಬಳಕೆಯಾಗುತ್ತಿರುವುದನ್ನು ತಡೆದು ಸಾಂಪ್ರದಾಯಿಕ ಪದ್ಧತಿಯಲ್ಲಿ ಹಣ್ಣುಮಾಡುವುದಕ್ಕೆ ಇವರು ಮುಂದಾದರು. ಆದರೆ ಮಾವಿನ ಗಿಡಗಳಿಗೆ ಹಾಕುವ ರಾಸಾಯನಿಕ ಗೊಬ್ಬರ ಮತ್ತು ಹೂ, ಹೀಚು ನಿಲ್ಲಲು ಹೊಡೆಯುವ ಕೀಟನಾಶಕಗಳ ಬಗ್ಗೆಯೂ ಜಾಗೃತರಾಗಿ ಇಡೀ ಮಾವಿನ ಬೆಳೆಯನ್ನೇ ಸಾವಯವ ಪದ್ಧತಿ ರೂಪದಲ್ಲಿ ಬೆಳೆಯುತ್ತಿದ್ದಾರೆ.
ಕೈ ಸುಟ್ಟುಕೊಂಡರೂ ಕಾರ್ಯ ಬಿಡಲಿಲ್ಲ
30 ಎಕರೆ ಹೊಲ ಹೊಂದಿರುವ ಕಲ್ಲನಗೌಡರು ತಮಿಳುನಾಡು ಮೂಲದ ಯಂತ್ರ ಬಳಸಿ ಬೆಲ್ಲ ತಯಾರಿಸಲು ಯತ್ನಿಸಿ ಕೈ ಸುಟ್ಟುಕೊಂಡರು. ಆದರೆ ಛಲ ಬಿಡದೆ ದೇಶಿ ಪದ್ಧತಿಯಲ್ಲಿ ಬೆಲ್ಲ ತಯಾರಿಸುವ ವಿಧಾನಗಳಲ್ಲಿಯೇ ಸುಧಾರಣೆ ತಂದುಕೊಂಡು ಸಾವಯವ ಬೆಲ್ಲ ತಯಾರಿ ಆರಂಭಿಸಿದರು. ಕೂಲಿಯಾಳುಗಳ ಕೊರತೆಯಾದಾಗ ಮನೆಯವರನ್ನು ಕರೆದುಕೊಂಡು ತಾವೇ ಅಖಾಡಕ್ಕಿಳಿದು ಬೆಲ್ಲ ಸಿದ್ಧಗೊಳಿಸಿದರು. ಈ ವರ್ಷ 10 ಸಾವಿರ ಕೆಜಿಯಷ್ಟು ಸಾವಯವ ಬೆಲ್ಲ ಸಿದ್ಧಗೊಳಿಸಿದ್ದು, ಮುಂದಿನ ವರ್ಷಕ್ಕೂ ಈಗಲೇ ಬೆಲ್ಲ ಬುಕ್ ಆಗಿದೆ. ಇನ್ನು ಮಾವಿನ ಹಣ್ಣುಗಳನ್ನು ಉತ್ಕೃಷ್ಟ ಗುಣಮಟ್ಟದಲ್ಲಿ ಬೆಳೆದು ಹಣ್ಣಾಗಿಸಿ ಮಾರಾಟ ಮಾಡುವ ಅವರ ಕಾರ್ಯವೈಖರಿ ವಿಭಿನ್ನವಾಗಿದೆ. ಕಾಯಿಗಳನ್ನು ಪಲ್ಪ್ ಮಾಡಿ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿನ ಒಂದು ಕಂಪನಿಗೆ ಕಳುಹಿಸುತ್ತಿದ್ದು, ಅಲ್ಲಿಂದ ಇವರ ಪರಿಶುದ್ಧ ಸಾವಯವ ಮಾವಿನ ಪಲ್ಪ್ ವಿದೇಶಕ್ಕೆ ಕಾಲಿಟ್ಟಿದೆ.
ಮುಂಗಡ ಬುಕ್ಕಿಂಗ್!
ಕೇವಲ 10 ವರ್ಷಗಳ ಹಿಂದಷ್ಟೇ ದೇಶಿ ಭತ್ತದ ಕಣಜವಾಗಿದ್ದ ಧಾರವಾಡ ಜಿಲ್ಲೆಯಲ್ಲಿ ಈ ವರ್ಷ ಲಕ್ಷ ಎಕರೆಗೂ ಅಧಿಕ ಪ್ರದೇಶದಲ್ಲಿ ಕಬ್ಬು ಬೆಳೆದರೂ ಪರಿಶುದ್ಧ ಬೆಲ್ಲ ಸಿಕ್ಕುತ್ತಿಲ್ಲ . ಹಣಕ್ಕಾಗಿ ಕಬ್ಬು ಸಕ್ಕರೆ ಕಾರ್ಖಾನೆಗಳಿಗೆ ಹೋಗುತ್ತಿದೆ. ಈ ಸಕ್ಕರೆ ಸಂಘರ್ಷದಲ್ಲಿ ಎಲ್ಲರಿಗೂ ಅಕ್ಕರೆಯಾಗುವಂತೆ ಸಿದ್ಧಗೊಂಡ ಪರಿಶುದ್ಧ ಸಾವಯವ ಬೆಲ್ಲ ಸುತ್ತಲಿನ ಗ್ರಾಮಗಳ ಜನರ ಮನೆಯಲ್ಲಿನ ಹೋಳಿಗೆ ರುಚಿಯನ್ನು ಹೆಚ್ಚಿಸಿದೆ. ಇವರ ತೋಟದ ಮಾವಿನ ಹಣ್ಣಿನ ಪಲ್ಪ್ ವಿದೇಶಗಳಿಗೂ ಕಾಲಿಟ್ಟಿದೆ. ಮಾವಿನ ಹೂ ಬಿಡುವ ಮುನ್ನವೇ ಗ್ರಾಹಕರು ಇವರ ಹಣ್ಣಿಗೆ ಹಣ ಕೊಟ್ಟು ಬುಕ್ ಮಾಡುತ್ತಾರೆ. ರಾಸಾಯನಿಕ ಕೃಷಿಯ ಹಾನಿ ಬಗ್ಗೆ ರೈತರಲ್ಲಿ
ಜಾಗೃತಿ ಮೂಡಿಸುವುದು ಮತ್ತು ದೇಶಿ ಕೃಷಿ ಜ್ಞಾನ ಪರಂಪರೆ ಉಳಿಸಲು ಹೊಸ ಯೋಜನೆ ರೂಪಿಸಿದ್ದಾರೆ.
ಬೆಲ್ಲ ಪರಿಶುದ್ಧವಾಗಿರಬೇಕಾದರೆ ಕಬ್ಬು ಪರಿಶುದ್ಧವಾಗಬೇಕು. ಕಬ್ಬು ಪರಿಶುದ್ಧವಾಗಲು ಬೆಳೆಯುವ ನೆಲವೂ ಪರಿಶುದ್ಧವಾಗಬೇಕು. ಈ ತತ್ವಕ್ಕೆ ಅಣಿಯಾಗಿ ಕೆಲಸ ಮಾಡಿದ್ದೇನೆ. ಯುವ ಪೀಳಿಗೆಯ ಅನಾರೋಗ್ಯಕ್ಕೆ ರಾಸಾಯನಿಕ ಕೃಷಿಯೇ ಕಾರಣ. ಅದರಿಂದ ಹೊರಬರಲೇಬೇಕಿದ್ದು, ಅದಕ್ಕಾಗಿ ನನ್ನ ಪ್ರಯತ್ನ.
ಕಲ್ಲನಗೌಡ ಪಾಟೀಲ, ಸಾವಯವ ಕೃಷಿಕ
*ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್