ಕರ್ತವ್ಯಕ್ಕೆ ಅನಧಿಕೃತ ಗೈರು : ಶಿಕಕ, ಅಂಗನವಾಡಿ ಕಾರ್ಯಕರ್ತೆಗೆ ಅಧಿಕಾರಿಗಳಿಂದ ನೋಟಿಸ್
ಅನಧಿಕೃತವಾಗಿ ಗೈರಾಗುತ್ತಿದ್ದ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ವರದಿ
Team Udayavani, Dec 9, 2021, 1:25 PM IST
ಚಿಕ್ಕಬಳ್ಳಾಪುರ: “ಅಭದ್ರತೆಯಲ್ಲಿ ತೊಟ್ಲಗಾನಹಳ್ಳಿ ಶಾಲಾ ಮಕ್ಕಳು’ ಎಂಬ ಶೀರ್ಷಿಕೆಯಡಿ “ಉದಯವಾಣಿ’ ವಿಶೇಷ ವರದಿಗೆ ಎಚ್ಚೆತ್ತ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮಹಿಳಾ ಮತ್ತು
ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಪಂದಿಸಿ ಸರ್ಕಾರಿ ಶಾಲೆಯ ಶಿಕ್ಷಕ ಮತ್ತು ಅಂಗನವಾಡಿ ಕಾರ್ಯಕರ್ತೆಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ.
ಶಿಡ್ಲಘಟ್ಟ ತಾಲೂಕಿನ ಭಕ್ತರಹಳ್ಳಿ ಗ್ರಾಪಂನ ತೊಟ್ಲಗಾನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರೊಬ್ಬರೂ ಹಾಗೂ ಅಂಗನವಾಡಿ ಕಾರ್ಯಕರ್ತೆ ಅನಧಿಕೃತವಾಗಿ ಗೈರು ಹಾಜರಿ ಕುರಿತು ಮತ್ತು ಅಭದ್ರತೆಯಲ್ಲಿ ವಿದ್ಯಾರ್ಥಿಗಳ ವ್ಯಾಸಂಗ , ಅಂಗನವಾಡಿ ಮಕ್ಕಳಿಗೆ ಸ್ವಯಂ ಘೋಷಿತ ರಜೆ ನೀಡಿರುವ ಕುರಿತು ವರದಿ ಪ್ರಕಟಿಸಿತ್ತು.
ನೋಟಿಸ್: ಎಚ್ಚೆತ್ತುಕೊಂಡ ತಾಪಂ ಇಒ ಚಂದ್ರಕಾಂತ್, ಸರ್ಕಾರಿ ಶಾಲೆಯ ಅಡುಗೆ ಕೊಠಡಿ ಮುಂದೆ ಇರಿಸಿದ್ದ ಕೊಳವೆ ಬಾವಿಯ ಪ್ಯಾನೆಲ್ ಬೋರ್ಡ್, ವಿದ್ಯುತ್ ತಂತಿಗಳನ್ನು ಪ್ರತ್ಯೇಕವಾಗಿ ಸ್ಥಳಾಂತರಿಸಲು ಕ್ರಮ ಕೈಗೊಂಡಿದ್ದಾರೆ. ಮತ್ತೂಂದೆಡೆ ಅನಧಿಕೃತವಾಗಿ ಗೈರು ಹಾಜರಾಗಿದ್ದ ಶಿಕ್ಷಕರೊಬ್ಬರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಆಂಜನೇಯ ನೋಟಿಸ್ ಜಾರಿಗೊಳಿಸಿದ್ದಾರೆ. ಅದೇ ರೀತಿ ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳಿಗೆ ಸ್ವಯಂ ಘೋಷಿತ ರಜೆ ಘೋಷಣೆ ಮಾಡಿ ಗೈರು ಹಾಜರಾಗಿದ್ದ ಕಾರ್ಯಕರ್ತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್ ನೋಟಿಸ್ ಜಾರಿಗೊಳಿಸಿದ್ದಾರೆ.
ತಾಲೂಕು ಮಟ್ಟದ ಅಧಿಕಾರಿಗಳು ಸ್ಪಂದಿಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೋಟಿಸ್ ಜಾರಿಗೊಳಿಸಿ ಮುಂದಿನ ದಿನಗಳಲ್ಲಿ ಈ ರೀತಿ ಲೋಪದೋಷಗಳಾಗದಂತೆ ಸರ್ಕಾರಿ ಶಾಲೆಯ ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಆಯಾ ಇಲಾಖೆ ಅಧಿಕಾರಿಗಳು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ : ಬಹಿರಂಗ ಚರ್ಚೆಗೆ ಬರಲು ಬೊಮಾಯಿಗೆ ಧಮ್ಮಿಲ್ಲ : ಆಡಳಿತ ಪಕ್ಷದ ವಿರುದ್ಧ ಗುಡುಗಿದ ಸಿದ್ದು
ಮುನ್ನೆಚ್ಚರಿಕೆ ಪಾಲಿಸಲು ಸೂಚನೆ
ಶಿಡ್ಲಘಟ್ಟ ತಾಲೂಕಿನ ಭಕ್ತರಹಳ್ಳಿ ಗ್ರಾಪಂನ ತೊಟ್ಲಗಾನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಮೇಲ್ವಿಚಾರಕರು ಭೇಟಿ ನೀಡಿ ವರದಿ ನೀಡಿದ್ದಾರೆ. ಜತೆಗೆ ಅಂಗನವಾಡಿ ಕಾರ್ಯಕರ್ತೆಗೆ ನೋಟಿಸ್ ಜಾರಿಗೊಳಿಸಲಾಗಿದೆ . ತಾಲೂಕಿನಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ತನಕ ಅಂಗನವಾಡಿ ಕೇಂದ್ರ ತೆರೆದು ಕೋವಿಡ್-19 ಮುನ್ನೆಚ್ಚರಿಕೆ ಕ್ರಮ ಪಾಲಿಸಿ ಬೋಧನೆ ಮಾಡಲು ಸೂಚನೆ ನೀಡಲಾಗಿದೆ ಎಂದು ಶಿಡ್ಲಘಟ್ಟ ಪ್ರಭಾರ ಸಿಡಿಪಿಒ ಮಹೇಶ್ ಮಾಹಿತಿ ನೀಡಿದ್ದಾರೆ.