ಶಿಕ್ಷಕರು ಬಂದರು ಓಡಿ ಬನ್ನಿ…
Team Udayavani, Jun 2, 2020, 5:16 AM IST
ಲಾಕ್ಡೌನ್ ಆದರೂ ಚಿಂತೆ ಇಲ್ಲ ಅಂತ ಖಾನಾಪುರದ ಶಿಕ್ಷಕರು ಕಾಡಿಗೆ ನುಗ್ಗಿದ್ದಾರೆ. ಇಲ್ಲಿನ ಬಹುತೇಕ ಹಳ್ಳಿಗಳು ಕಾಡಿನ ಮಧ್ಯೆ ಇರುವುದರಿಂದ ಬಸ್ ಇಲ್ಲ. ನೆಟ್ವರ್ಕ್ ಸಿಗೊಲ್ಲ. ಹೀಗಾಗಿ, ಪ್ರತಿದಿನ ಶಿಕ್ಷಕರೇ ವಿದ್ಯಾರ್ಥಿಗಳ ಮನೆ ಬಾಗಿಲು ಬಡಿದು ಪಾಠ ಮಾಡಿ ಬರುತ್ತಿದ್ದಾರೆ.
ಲಾಕ್ ಡೌನ್ ಸಡಿಲಿಕೆ ಆದ ತಕ್ಷಣ ಪರೀಕ್ಷೆಗಳು ಕಣ್ಣಮುಂದೆ ಮೆರವಣಿಗೆ ಮಾಡುತ್ತವೆ ಅಂತ ತಿಳಿದಿತ್ತು. ಆದರೆ, ಏನು ಮಾಡೋದು ಅಂತ ಚಿಂತಿತರಾದದ್ದು ಖಾನಾಪುರ ಹಾಗೂ ಬೆಳಗಾವಿಯ ಕೆಲ ತಾಲೂಕಿನ ಶಿಕ್ಷಕರು. ಸರ್ಕಾರವೇನೋ ಯೂಟ್ಯೂಬ್ ಚಾನೆಲ್ ಮಾಡಿದೆ. ಮನೆಯಲ್ಲಿ ಕುಳಿತೇ ಪಾಠ ಕೇಳಬಹುದು. ಇವೆಲ್ಲಾ ಲೆಕ್ಕಾಚಾರ ನಗರ, ಪಟ್ಟಣ ಪ್ರದೇಶಕ್ಕೆ ಸರಿ. ಖಾನಾಪುರದ ಸುತ್ತಮುತ್ತಲಿಗೆ ಇದೆಲ್ಲಾ ಆಗುವುದಿಲ್ಲ.
ಏಕೆಂದರೆ, ಅಲ್ಲಿ ನೆಟ್ವರ್ಕ್ ಅನ್ನೋದೇ ದೊಡ್ಡ ಸಮಸ್ಯೆ. ಕಾನನದ ಮಧ್ಯೆ ಇರುವ ಹಳ್ಳಿಗಳಲ್ಲಿ ಸಂಪರ್ಕ ಜಾಲ ಅಂದರೆ, ಇರುವುದೊಂದೇ ಮಾರ್ಗ. ಬಸ್ನಲ್ಲಿ ಹೋಗಿ ಬರೋದು. ಲಾಕ್ಡೌನ್ನ ಈ ಸಮಯದಲ್ಲಿ ಬಸ್ ಎಲ್ಲಿಂದ ಬರಬೇಕು? ಖಾನಾಪುರ ತಾಲೂಕಿನ ಜಾಂಬೋಟಿ ಪ್ರೌಢಶಾಲೆಯ ವ್ಯಾಪ್ತಿಗೆ ಕಾಲಮನಿ, ಕುಸನೋಳ್ಳಿ, ಹಬ್ಬನಟ್ಟಿ, ಚಿರೆಕಣಿ ಮುಡಿಗೈ, ಚಾಪೋಲಿ ಹೀಗೆ 8-10 ಹಳ್ಳಿಗಳು ಬರುತ್ತವೆ.
ಈ ಊರುಗಳಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿರುವ ವಿದ್ಯಾರ್ಥಿಗಳು ಇದ್ದಾರೆ. ಕಾನನದ ಮಧ್ಯೆ ಊರುಗಳು ಇರುವುದರಿಂದ, ಮನೆಗೆ ಮಾಸ್ತರರು ಹೋಗುವುದು ಬಿಟ್ಟರೆ ಬೇರೆ ದಾರಿಯೇ ಇಲ್ಲ. ಈ ಸಂದರ್ಭದಲ್ಲಿ ಜಾಂಬೋಟಿಯಾ ಪ್ರೌಢಶಾಲೆಯ ಎಚ್.ಎಮ್. ತುಕಾರಾಮ್ ಸಡೇಕರ್ ಮಾಡಿದ ಕೆಲಸವೆಂದರೆ, ಎಸ್.ಎಸ್. ಪಾಟೀಲ, ಡಿ.ಆರ್. ಪಾಟೀಲ, ಮಹೇಶ್ ಸಾಬಳೆ, ಮಹೇಶ್ ಸಡೇಕರ್, ಚಲವೇಟಕರ್- ಹೀಗೆ, ಒಂದಷ್ಟು ಶಿಕ್ಷಕರನ್ನು ಸೇರಿಸಿಕೊಂಡದ್ದು.
ಪ್ರತಿದಿನ, ಕಾಡಿನ ಮಧ್ಯೆ ಇರುವ ಒಂದು ಅಥವಾ ಎರಡು ಹಳ್ಳಿಗಳಿಗೆ ಹೋಗಿ ಪಾಠ ಮಾಡಿಬರುವುದು ಅಂತ ಇವರೆಲ್ಲಾ ನಿರ್ಧರಿಸಿದರು. ಮೊದಲನೇ ಸಲ ಕಾಲ್ಮನಿ, ಮುಡಿಗೈ, ಕಾಪೋಲಿಗೆ ಹೋಗಿದ್ದೆ. ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದರೆ, 8-9ನೇ ತರಗತಿ ವಿದ್ಯಾರ್ಥಿಗಳು ಬಂದು- “ಸರ್, ನಮಗೂಹೀಗೆ ಪಾಠ ಮಾಡಿ ಅಂತ ಕೇಳಿದರು’- ಎನ್ನುತ್ತಾರೆ ಕನ್ನಡ ಶಿಕ್ಷಕ ಎಸ್.ಎಸ್. ಪಾಟೀಲ.
ಈ ಶಿಕ್ಷಕರೆಲ್ಲಾ ದ್ವಿಚಕ್ರವಾಹನದಲ್ಲಿ ಬೆಳಗ್ಗೆ ಹೊರಟು, ಹಳ್ಳಿಗಳಲ್ಲಿರುವ ವಿದ್ಯಾರ್ಥಿಗಳನ್ನು ದು ಕಡೆ ಸೇರುವಂತೆ ಮಾಡುತ್ತಾರೆ. ಅಲ್ಲೇ ಪಾಠ ಶುರುಮಾಡುತ್ತಾರೆ. ಮಧ್ಯಾಹ್ನದ ಊಟಕ್ಕೆ ಬುತ್ತಿ ತೆಗೆದುಕೊಂಡು ಹೋಗಿರುತ್ತಾರೆ. ಅಗತ್ಯವಿರುವ ಎಲ್ಲಾ ಪೋರ್ಷನ್ಗಳನ್ನು ಕವರ್ ಮಾಡಿ, ಸಂಜೆ ಹೊತ್ತಿಗೆ ವಾಪಸ್ಸು ಬರುತ್ತಾರೆ. ಶಿಕ್ಷಕರಿಗೆ ಅರಣ್ಯದ ಪರಿಚಯವಿರು ವುದರಿಂದ, ಸಮಸ್ಯೆ ಕಡಿಮೆ.
ಪ್ರತಿ ಗ್ರಾಮವೂ 8-10 ಕಿ.ಮೀ. ದೂರದಲ್ಲಿವೆ. ಹೀಗಾಗಿ, ಹಳ್ಳಿಗೆ ಹೋಗುವ ಮೊದಲು ಯಾವ ವಿಷಯ ಪಾಠ ಮಾಡಬೇಕು, ಎಷ್ಟು ಪಾಠ ಮಾಡಬೇಕು ಎಂದು ಪ್ಲಾನ್ ಮಾಡಿಕೊಂಡು, ವಾರಕ್ಕೆ 18 ಪಿರಿಯಡ್ನಷ್ಟು ಪಾಠ ಮಾಡುತ್ತಾರೆ. “ಹಳ್ಳಿಯಲ್ಲಿ ಒಬ್ಬ ವಿದ್ಯಾರ್ಥಿ ಇರಲಿ, ಹತ್ತು ಜನ ಇರಲಿ, ಎಲ್ಲರಿಗೂ ಪಾಠ ಮಾಡುತ್ತೇವೆ. ಹೆಚ್ಚು ವಿದ್ಯಾರ್ಥಿಗಳಿದ್ದರೆ, ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಕೂಡಿಸಿಕೊಂಡು ಪಾಠ ಮಾಡುತ್ತೇವೆ.
ಹಳ್ಳಿಯ ಪಾಲಕರ ಫೋನ್ ನಂಬರ್ ಇದೆ. ಇವರಲ್ಲಿ ಒಬ್ಬರಿಗೆ, ಹಿಂದಿನ ದಿನವೇ ಮಾಹಿತಿ ತಲುಪಿಸುತ್ತೇವೆ. ಹಾಗಾಗಿ, ಅಂದುಕೊಂಡ ವೇಳೆಗೆ ಸರಿಯಾಗಿ ಪಾಠ ಮಾಡಲು ಸಾಧ್ಯವಾಗಿದೆ’ ಅನ್ನುತ್ತಾರೆ ಎಚ್.ಎಂ. ತುಕಾರಾಮ್ ಸಡೇಕರ್. ಹಳ್ಳಿಗೆ ಮೇಷ್ಟ್ರು ಬರುವುದರಿಂದ ಮಕ್ಕಳಿಗೆ ಸಂಭ್ರಮ. ನಮ್ಮ ಹಳ್ಳಿಗೆ ನಮ್ಮ ಮೇಷ್ಟು ಬರುತ್ತಾರೆ ಅಂತ. ಈ ಸಂತೋಷ, ಉತ್ಸಾಹ ವನ್ನೇ ಶಿಕ್ಷಕರು ಪಾಠ ಹೇಳಲು ಬಳಸಿ ಕೊಳುತ್ತಿ ದ್ದಾರೆ.
ಹಿಂದಿನ ದಿನವೇ ಮಾಹಿತಿ: “ಹಳ್ಳಿಯಲ್ಲಿ ಒಬ್ಬ ವಿದ್ಯಾರ್ಥಿ ಇರಲಿ, ಹತ್ತು ಜನ ಇರಲಿ, ಎಲ್ಲರಿಗೂ ಪಾಠ ಮಾಡುತ್ತೇವೆ. ಹೆಚ್ಚು ವಿದ್ಯಾರ್ಥಿಗಳಿದ್ದರೆ, ಗ್ರಾ.ಪಂ. ಕಟ್ಟಡ ದಲ್ಲಿ ಕೂಡಿಸಿಕೊಂಡು ಪಾಠ ಮಾಡುತ್ತೇವೆ. ಹಳ್ಳಿಯ ಪಾಲಕರ ಫೋನ್ ನಂಬರ್ ಇದೆ. ಇವರಲ್ಲಿ ಒಬ್ಬರಿಗೆ, ಹಿಂದಿನ ದಿನವೇ ಮಾಹಿತಿ ತಲುಪಿಸುತ್ತೇವೆ. ಹಾಗಾಗಿ, ಅಂದುಕೊಂಡ ವೇಳೆಗೆ ಸರಿಯಾಗಿ ಪಾಠ ಮಾಡಲು ಸಾಧ್ಯ ಆಗಿದೆ’ ಅನ್ನುತ್ತಾರೆ ಎಚ್.ಎಂ. ತುಕಾರಾಮ್ ಸಡೇಕರ್.
ಜಾಗೃತಿ ಪಾಠ: ಹಳ್ಳಿಗಳಿಗೆ ಹೋಗಿ ಪಾಠ ಮಾಡಿ ಬರುವ ಶಿಕ್ಷಕರು, ಗ್ರಾಮದ ಜನತೆಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ಪ್ರಾತ್ಯಕ್ಷಿಕೆ ಅನ್ನುವಂತೆ, ವಿದ್ಯಾರ್ಥಿ ಗಳನ್ನು ಸಾಮಾಜಿಕ ಅಂತರದಲ್ಲಿ ಕೂಡಿಸಿ ಪಾಠ ಮಾಡು ತ್ತಾರೆ. ಜೊತೆಗೆ, ಮಾಸ್ಕ್, ಸ್ಯಾನಿ ಟೈಸರ್ಗಳನ್ನೂ ವಿತರಿ ಸುವ ಮೂಲಕ, ಪೋಷಕರಿಗೆ ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ