ದಿಲ್ಲಿಯ ಸ್ಲಂ ನಿವಾಸಿಗಳಿಗೆ ತಾತ್ಕಾಲಿಕ ರಿಲೀಫ್
Team Udayavani, Sep 15, 2020, 6:00 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ದಿಲ್ಲಿಯ 140 ಕಿ.ಮೀ. ವ್ಯಾಪ್ತಿಯ ರೈಲು ಮಾರ್ಗದ ಆಜುಬಾಜಿನಲ್ಲಿರುವ ಕೊಳಗೇರಿ ನಿವಾಸಿಗಳ ವಿರುದ್ಧ ಮುಂದಿನ ನಾಲ್ಕು ವಾರಗಳವರೆಗೆ ಯಾವುದೇ ರೀತಿಯ ಒತ್ತಾಯಪೂರ್ವಕ ಕ್ರಮವನ್ನು ಕೈಗೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಆ. 31ರಂದು ಮಹತ್ವದ ಆದೇಶ ನೀಡಿದ್ದ ಸರ್ವೋಚ್ಚ ನ್ಯಾಯಾಲಯ, ದಿಲ್ಲಿಯ ವ್ಯಾಪ್ತಿಯಲ್ಲಿ ರೈಲು ಮಾರ್ಗಗಳ ಎರಡೂ ಬದಿಯಲ್ಲಿರುವ ಕೊಳೆಗೇರಿಗಳನ್ನು ಸಂಪೂರ್ಣ ತೆರವುಗೊಳಿಸಬೇಕು ಎಂದಿತ್ತು. ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸಿದ್ದ ಕಾಂಗ್ರೆಸ್ನ ಹಿರಿಯ ನಾಯಕ ಅಜಯ್ ಮಾಕನ್ ಹಾಗೂ ಇತರರು, ಕೊಳೆಗೇರಿ ನಿವಾಸಿಗಳಿಗೆ ಬದಲಿ ಆಶ್ರಯ ಕಲ್ಪಿಸಿದ ನಂತರವಷ್ಟೇ ಕೊಳಗೇರಿಗಳನ್ನು ತೆರವುಗೊಳಿಸುವಂತೆ ಸೂಚಿಸಬೇಕೆಂದು ನ್ಯಾಯಪೀಠವನ್ನು ಕೋರಿದ್ದರು.
ಸೋಮವಾರದ ವಿಚಾರಣೆ ವೇಳೆ, ಕೇಂದ್ರ ಸರಕಾರದ ಪರ ವಿವರಣೆ ಸಲ್ಲಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೊಳೆಗೇರಿಗಳ ತೆರವಿನ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡ ನಂತರವಷ್ಟೇ ತೆರವು ಕಾರ್ಯಾಚರಣೆ ಆರಂಭಿಸಲಾಗುತ್ತದೆ ಎಂದಿತು. ಇದಾದ ಬಳಿಕ, ಸೂಚನೆ ನೀಡಿದ ನ್ಯಾಯಪೀಠ, ಕೊಳೆಗೇರಿ ನಿವಾಸಿಗಳ ವಿರುದ್ಧ 4 ವಾರಗಳವರೆಗೆ ಯಾವುದೇ ರೀತಿಯ ಒತ್ತಾಯಪೂರ್ವಕ ಕ್ರಮ ಕೈಗೊಳ್ಳುವಂತಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಿತು.