ತನಗೆ ಸಿಕ್ಕಿದ ಅಕ್ಕಿಯನ್ನು ಬಡವರಿಗೆ ಹಂಚಿದ ಮಹಿಳೆ!
Team Udayavani, Apr 14, 2020, 6:29 AM IST
ಬೆಳ್ತಂಗಡಿ/ಉಪ್ಪಿನಂಗಡಿ: ಈಗ ಅಗತ್ಯ ವಿಲ್ಲ ದಿದ್ದರೂ ಕೆಲವರು ಉಚಿತ ವಸ್ತುಗಳಿಗಾಗಿ ಸರತಿ ಸಾಲಲ್ಲಿ ನಿಲ್ಲುತ್ತಾರೆ. ಇಂಥ ಸಂದರ್ಭದಲ್ಲಿ ತಣ್ಣೀರುಪಂತ ಪಂಜಿಕುಡೇಲಿನ ಮಹಿಳೆಯೊಬ್ಬರು ತನಗೆ ಸಿಕ್ಕಿರುವ ಅಕ್ಕಿಯನ್ನು ಬಡವರಿಗೆ ಹಂಚಿ ಗಮನ ಸೆಳೆದಿದ್ದಾರೆ.
ಪಂಜಿಕುಡೇಲ್ ನಿವಾಸಿ ದಿ| ಶಿವಪ್ಪ ಪೂಜಾರಿ ಅವರ ಪತ್ನಿ ಚಿನ್ನಮ್ಮ ಎಂಬವರು ತನಗೆ “ಅಂತ್ಯೋದಯ’ ಯೋಜನೆಯಡಿ ಸಿಕ್ಕಿರುವ 50 ಕೆ.ಜಿ. ಪಡಿತರ ಅಕ್ಕಿಯನ್ನು ಬಡವರಿಗೆ ಹಂಚಿದ್ದಾರೆ. ಇವರಿಗೆ ತಲಾ 35 ಕೆ.ಜಿ.ಯಂತೆ ಎರಡು ತಿಂಗಳಿಗೆ ಒಟ್ಟು 70 ಕೆ.ಜಿ. ಅಕ್ಕಿ ಸಿಕ್ಕಿತ್ತು. ಅದರಲ್ಲಿ ತನ್ನ ಜೀವನಕ್ಕಾಗಿ 20 ಕೆ.ಜಿ.ಯನ್ನು ಉಳಿಸಿ ಉಳಿದ 50 ಕೆ.ಜಿ.ಯನ್ನು ದಾನ ಮಾಡಿದ್ದಾರೆ.
ಪತಿಯನ್ನು ಕಳೆದುಕೊಂಡು ತಾನೇ ಸಂಕಷ್ಟ ದಲ್ಲಿರುವ ಸಮಯದಲ್ಲೂ ಅವರು ಮತ್ತೂಬ್ಬರಿಗೆ ಸಹಾಯಹಸ್ತ ಚಾಚಿ ಆದರ್ಶ ಮೆರೆದಿದ್ದಾರೆ.
ಅಗತ್ಯವುಳ್ಳವರಿಗೆ ನೀಡಿ
ಗ್ರಾ.ಪಂ. ವ್ಯಾಪ್ತಿಯಲ್ಲಿ ಅಧ್ಯಕ್ಷರು, ಸದಸ್ಯರು ಹಾಗೂ ದಾನಿಗಳು ಸೇರಿಕೊಂಡು ಈಗಾಗಲೇ ಆಹಾರದ ಸಮಸ್ಯೆಯಾದವರಿಗೆ ಆಹಾರ ಸಾಮಗ್ರಿಗಳ ಕಿಟ್ ಒದಗಿಸಿದ್ದು, ಬಡವರಾಗಿರುವ ಚಿನ್ನಮ್ಮರ ಮನೆಗೂ ತಣ್ಣೀರುಪಂತ ಗ್ರಾ.ಪಂ. ಅಧ್ಯಕ್ಷ ಜಯವಿಕ್ರಮ್, ಸದಸ್ಯರಾದ ಅಬ್ದುರ್ರಹ್ಮಾನ್, ನವೀನ್, ಪಿಡಿಒ ಪೂರ್ಣಿಮಾ ಅವರ ತಂಡ ತೆರಳಿತ್ತು. ಈ ಸಂದರ್ಭ ಕಿಟ್ ನಿರಾಕರಿಸಿದ ಚಿನ್ನಮ್ಮ ಅವರು, ತನ್ನಲ್ಲಿರುವ ಅಕ್ಕಿಯನ್ನೇ ಅಗತ್ಯವುಳ್ಳವರಿಗೆ ನೀಡಿ ಎಂದು ಹೇಳಿದ್ದಾರೆ. ಇವರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.