ಕಣ್ಣೀರು ಹಾಕಿಸಿದ್ರೆ ಈ ಸರಕಾರ ಉಳಿಯಲ್ಲ! ಅನರ್ಹ ಶಾಸಕರ ಗೋಳು ಕೇಳಿ ಸಿಎಂ ಕಣ್ಣೀರು
Team Udayavani, Aug 28, 2019, 10:14 AM IST
ನವದೆಹಲಿ/ಬೆಂಗಳೂರು:ಬಿಜೆಪಿ ಸರಕಾರ ರಚನೆಗೆ ನಮ್ಮ ಭವಿಷ್ಯವನ್ನೇ ಅಡವಿಟ್ಟಿದ್ದೇವೆ. ನಮ್ಮ ಕಣ್ಣೀರಿನ ಮೇಲೆ ಸರಕಾರ ರಚನೆ ಮಾಡಿದ್ದೀರಿ..ಒಂದು ವೇಳೆ ನಮ್ಮನ್ನ ಕಣ್ಣೀರು ಹಾಕಿಸಿದ್ರೆ ಈ ಸರಕಾರ ಹೆಚ್ಚು ದಿನ ಉಳಿಯಲ್ಲ..ಹೀಗೆ ಅಲವತ್ತುಕೊಂಡಿದ್ದ ಅನರ್ಹ ಶಾಸಕ ಮುನಿರತ್ನ ಮಾತು ಕೇಳಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕಣ್ಣೀರು ಹಾಕಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಇತ್ತೀಚೆಗೆ ನವದೆಹಲಿಯಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಮುನಿರತ್ನ ಭೇಟಿಯಾಗಿದ್ದ ವೇಳೆ ಮುನಿರತ್ನ ತಾವು ಅತಂತ್ರರಾಗಿರುವ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದಾಗ ಬಿಎಸ್ ಯಡಿಯೂರಪ್ಪ ಹತಾಶರಾಗಿ ಕಣ್ಣೀರು ಹಾಕಿದ್ದಾರೆಂದು ವರದಿ ವಿವರಿಸಿದೆ.
ರಾಜೀನಾಮೆ ನೀಡಿದ್ದರಿಂದ ನಮ್ಮ ಭವಿಷ್ಯ ಅತಂತ್ರವಾಗಿದೆ. ಎಷ್ಟು ದಿನ ನಾವು ಅನರ್ಹ ಶಾಸಕರು ಎಂದು ಕರೆಯಿಸಿಕೊಳ್ಳುವುದು?ಕಾನೂನು ಹೋರಾಟಕ್ಕೆ ಸಾಥ್ ನೀಡಿ, ಈ ಪ್ರಕರಣ ಬೇಗ ಮುಗಿಸಿಕೊಡಿ ಎಂದು ಮುನಿರತ್ನ ಅಲವತ್ತುಕೊಂಡಿರುವುದಾಗಿ ವರದಿ ತಿಳಿಸಿದೆ.
ಬಿಜೆಪಿ ಸರಕಾರ ರಚನೆಗೆ ನಮ್ಮ ಭವಿಷ್ಯವನ್ನೇ ಅಡವಿಟ್ಟಿದ್ದೇವೆ. ದಯವಿಟ್ಟು ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅನರ್ಹ ಶಾಸಕರು ಬಿಎಸ್ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆನ್ನಲಾಗಿದೆ.