ಸಾವಿರಾರು ವಲಸೆ ಕಾರ್ಮಿಕರು ಅತಂತ್ರ!
ದ.ಕ.: ವದಂತಿ, ಮಾಹಿತಿ ಕೊರತೆ ಹಿನ್ನೆಲೆ
Team Udayavani, May 14, 2020, 5:55 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಕಿಯಾಗಿರುವ ಹೊರ ರಾಜ್ಯದ ವಲಸೆ ಕಾರ್ಮಿಕರನ್ನು ಕೆಲವು ದಿನಗಳಿಂದ ತಮ್ಮ ಊರುಗಳಿಗೆ ಕಳುಹಿಸಿ ಕೊಡಲಾಗುತ್ತಿದ್ದು, ಕೆಲವೊಂದು ವಲಸೆ ಕಾರ್ಮಿಕರು ಜಿಲ್ಲಾಡಳಿತದ ಮಾಹಿತಿ ಕೊರತೆ, ವದಂತಿಗಳಿಂದಾಗಿ ಅತಂತ್ರರಾಗಿದ್ದಾರೆ.
ಮಂಗಳೂರು ಜಂಕ್ಷನ್ ಮತ್ತು ಪುತ್ತೂರು ರೈಲು ನಿಲ್ದಾಣದಿಂದ ಕಾರ್ಮಿಕರನ್ನು ಹೊತ್ತು 8 ರೈಲುಗಳು ಈಗಾಗಲೇ ತೆರಳಿವೆ. ಅವುಗಳಲ್ಲಿ ಸುಮಾರು 10 ಸಾವಿರ ಮಂದಿ ತಮ್ಮ ಊರು ತಲುಪಿದ್ದಾರೆ. ಇನ್ನೂ ಇಪ್ಪತ್ತು ಸಾವಿರದಷ್ಟು ಮಂದಿ ಊರುಗಳಿಗೆ ತೆರಳುವ ಧಾವಂತದಲ್ಲಿದ್ದು, ಇತ್ತ ಜಿಲ್ಲಾಡಳಿತದಿಂದ ಮಾಹಿತಿ ಕೊರತೆ ಯಿಂದಾಗಿ ಕಾರ್ಮಿಕರು ಅತಂತ್ರ ಸ್ಥಿತಿಯಲ್ಲಿದ್ದಾರೆ.
ಎರಡೂ ರಾಜ್ಯಗಳ ಒಪ್ಪಿಗೆ ಸಿಗಬೇಕು
ಹೊರ ರಾಜ್ಯದ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು “ಸೇವಾ ಸಿಂಧು’ ಪೋರ್ಟಲ್ ಮುಖೇನ ಕಡ್ಡಾಯವಾಗಿ ನೋಂದಣಿ ಮಾಡಬೇಕು. ಎರಡೂ ರಾಜ್ಯಗಳ ಒಪ್ಪಿಗೆ ಬಳಿಕ ಅವರನ್ನು ರೈಲು ಮುಖೇನ ತಮ್ಮ ಊರುಗಳಿಗೆ ಕಳುಹಿಸಲಾಗುತ್ತಿದೆ. ಇಂತಹ ಕಾರ್ಮಿಕನ್ನು ಕರೆದೊಯ್ಯಲು ದ.ಕ. ಜಿಲ್ಲಾಡಳಿತವು ರೈಲು ವ್ಯವಸ್ಥೆ ಮಾಡಿದ್ದು, ಆಯಾ ದಿನದಂದು ವಲಸೆ ಕಾರ್ಮಿಕರು ಇದ್ದ ಸ್ಥÙದಿಂದಲೇ ಕೆಎಸ್ಸಾರ್ಟಿಸಿ ಬಸ್ ಮುಖೇನ ನೇರವಾಗಿ ರೈಲು ನಿಲ್ದಾಣಕ್ಕೆ ಕಳುಹಿಸಲಾಗುತ್ತಿದೆ. ಆದರೆ ಕೆಲವೊಬ್ಬರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು,ಇದರಿಂದಾಗಿ ಕಾರ್ಮಿಕರು ನಗರದಲ್ಲಿ ತಂಡೋಪತಂಡವಾಗಿ ಅಲ್ಲಲ್ಲಿ ಜಮಾಯಿಸುತ್ತಿದ್ದಾರೆ.
ಗೊಂದಲ
ಲಾಕ್ಡೌನ್ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಿ ಕೊಡ ಲಾಗುತ್ತದೆ ಎಂಬ ವದಂತಿಯಿಂದಾಗಿ ಮೇ 8ರಂದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸಾವಿರಾರು ಮಂದಿ ಕಾರ್ಮಿಕರು ಜಮಾಯಿಸಿ ಗೊಂದಲಕ್ಕೆ ಎಡೆ ಯಾಗಿತ್ತು. ಅಷ್ಟೇ ಅಲ್ಲದೆ, ತಮ್ಮನ್ನು ಊರಿಗೆ ಕಳುಹಿಸುವಂತೆ “ವಿ ವಾಂಟ್ ಟು ಗೋ ಹೋಮ್’ ಎಂಬ ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸಿದ್ದರು. ಅದೇ ರೀತಿ ನಗರದ ಪುರಭವನ, ಕರಾವಳಿ ಉತ್ಸವ ಮೈದಾನದಲ್ಲಿಯೂ ಈ ಹಿಂದೆ ಅನೇಕ ಮಂದಿ ಹೊರ ರಾಜ್ಯಗಳ ವಲಸೆ ಕಾರ್ಮಿಕರು ಜಮಾಯಿಸಿದ್ದರು.
ಜಿಲ್ಲಾಡಳಿತ ಹೆಚ್ಚಿನ ನಿಗಾ ವಹಿಸಲಿ
ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರೆ ರಾಜ್ಯಕ್ಕೆ ತೆರಳುವ ಬಹುತೇಕ ವಲಸೆ ಕಾರ್ಮಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ. ಅದರಲ್ಲೂ ಎರಡು ದಿನಗಳ ಹಿಂದೆ ಮಂಗಳೂರಿನ ಸ್ಟೇಟ್ಬ್ಯಾಂಕ್ ಖಾಸಗಿ ಬಸ್ ನಿಲ್ದಾಣದ ಬಳಿ ಜಮಾಯಿಸಿದ್ದ ಸಾವಿರಾರು ಮಂದಿ ವಲಸೆ ಕಾರ್ಮಿಕರು ಒತ್ತೂತ್ತಾಗಿ ನಿಂತಿದ್ದರು. ಮಾಸ್ಕ್ ಹಾಕುವುದನ್ನು ಮರೆತಿದ್ದರು. ಇನ್ನು, ತಮ್ಮ ಊರುಗಳಿಗೆ ತೆರಳುವ ಧಾವಂತದಲ್ಲಿ ಎಚ್ಚರ ಕಳೆದುಕೊಂಡರೆ ದೊಡ್ಡ ಅನಾಹುತಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ. ಈ ಬಗ್ಗೆ ಜಿಲ್ಲಾಡಳಿತ ಗಮನ ನೀಡಬೇಕಿದೆ.
ಮತ್ತಷ್ಟು ರೈಲಿಗೆ ಬೇಡಿಕೆ
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, ಈಗಾಗಾಲೇ ವಿವಿಧ ರಾಜ್ಯಗಳ ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಕಳುಹಿಸ ಲಾಗುತ್ತಿದೆ. ಮತ್ತಷ್ಟು ರೈಲಿಗೆ ಬೇಡಿಕೆ ಇದ್ದು, ಈ ಬಗ್ಗೆ ರಾಜ್ಯ ಸರಕಾರದ ಗಮನಕ್ಕೆ ತರಲಾಗಿದೆ. ವಲಸೆ ಕಾರ್ಮಿಕರಿಗೆ ಜಿಲ್ಲಾಡಳಿತದ ವತಿಯಿಂದ ಮಾಹಿತಿ ನೀಡಲಾಗುತ್ತಿದೆ. ದ.ಕ. ಜಿಲ್ಲೆಯಲ್ಲಿ ಇನ್ನೇನು ಕಾಮಗಾರಿಗಳು ಆರಂಭವಾಗಲಿದ್ದು, ಕಾರ್ಮಿಕರನ್ನು ಮನ ವೊಲಿಸಲಾಗುತ್ತಿದೆ’ ಎಂದಿದ್ದಾರೆ.
ವದಂತಿ ನಂಬಬೇಡಿ
ವಲಸೆ ಕಾರ್ಮಿಕರನ್ನು ಅವರಿರುವ ಪ್ರದೇಶಗಳಿಂದ ರೈಲು ನಿಲ್ದಾಣಕ್ಕೆ ನೇರವಾಗಿ ಕೆಎಸ್ಸಾರ್ಟಿಸಿ ಬಸ್ ಮುಖೇನ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಕೆಲವೊಂದು ಮಂದಿ ವಾಟ್ಸಾಪ್ ಮುಖೇನ ಸುಳ್ಳು ಸಂದೇಶ ರವಾನಿಸುತ್ತಿದ್ದಾರೆ. ಇದನ್ನು ನಂಬಿ ಅನೇಕ ಮಂದಿ ಅಲ್ಲಲ್ಲಿ ಗುಂಪು ಸೇರುತ್ತಿದ್ದಾರೆ. ಯಾರು ಕೂಡ ವದಂತಿ ನಂಬಬಾರದು.
-ಡಾ|ಭರತ್ ಶೆಟ್ಟಿ ವೈ.
ಶಾಸಕ