ಟಿಪ್ಪು ಪಠ್ಯ: ತಿಂಗಳ ಕಾಲಾವಕಾಶ ಕೋರಿದ ತಜ್ಞರು
Team Udayavani, Nov 8, 2019, 3:44 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಶಾಲಾ ಪಠ್ಯದಿಂದ ಟಿಪ್ಪು ಸುಲ್ತಾನ್ ವಿಷಯ ತೆಗೆದು ಹಾಕಬೇಕೇ ಅಥವಾ ಯಾವ ಅಂಶ ಸೇರಿಸಬೇಕು ಎಂಬುದರ ಕುರಿತು ವರದಿ ಸಲ್ಲಿಸಲು ವಿಷಯ ತಜ್ಞರು ಒಂದು ತಿಂಗಳ ಕಾಲಾವಕಾಶ ಕೋರಿದ್ದಾರೆ.
ಪಠ್ಯಪುಸ್ತಕ ಸಂಘವು ಗುರುವಾರ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಕರೆದಿದ್ದ ಶಾಸಕ ಅಪ್ಪಚ್ಚು ರಂಜನ್, ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರು ಮತ್ತು ವಿಷಯ ತಜ್ಞರ ಸಭೆಯಲ್ಲಿ ಶಾಸಕರು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲು ತಜ್ಞರು ಕಾಲಾವಕಾಶ ಕೋರಿದರು.
ಸಭೆಯ ಬಳಿಕ ಮಾತನಾಡಿದ ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕ ಎಚ್.ಎನ್.ಗೋಪಾಲಕೃಷ್ಣ ತಜ್ಞರಿಗೆ ತಿಂಗಳ ಕಾಲಾವಕಾಶ ನೀಡಿದ್ದೇವೆ. ತಜ್ಞರು ಯಾವ ರೀತಿ ವರದಿ ನೀಡುತ್ತಾರೋ ಅದನ್ನು ಸರಕಾರಕ್ಕೆ ಯಥಾಪ್ರಕಾರ ಸಲ್ಲಿಸಲಿದ್ದೇವೆ. ಸರಕಾರ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.