ತ್ರಿಸೂತ್ರ ಅನುಸರಿಸಿದರೆ ಆರೋಗ್ಯವಂತ ಬದುಕು: ಸ್ವರ್ಣವಲ್ಲೀ ಶ್ರೀ
Team Udayavani, Nov 14, 2021, 2:17 PM IST
ಶಿರಸಿ: ಹೆಚ್ಚುತ್ತಿರುವ ಒತ್ತಡ, ಬದಲಾದ ಜೀವನ ಶೈಲಿಯಿಂದ ಅನಾರೋಗ್ಯ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ತ್ರಿಸೂತ್ರ ಅನುಸರಿಸಬೇಕು ಎಂದು ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮಿಜಿ ನುಡಿದರು.
ಭಾನುವಾರ ನಗರದ ಪ್ರಸಿದ್ದ ಟಿಎಸ್ಎಸ್ ಆಸ್ಪತ್ರೆಯ ಹೃದಯ ಆರೈಕೆ ವಿಭಾಗ ಹಾಗೂ ಕ್ಯಾಥಲಾಗ್ ವಿಭಾಗಕ್ಕೆ ಚಾಲನೆ ನೀಡಿ ಆಶೀರ್ವದಿಸಿದರು.
ಆಹಾರ, ನಿದ್ದೆ, ಚಟುವಟಿಕೆ ಈ ಮೂವರಲ್ಲಿ ಯುಕ್ತತೆ ಬೇಕು. ಈ ಹೊಂದಾಣಿಕೆ ಅಗತ್ಯವಾಗಿ ಪಾಲಿಸಬೇಕು. ಮಾಡುವ ಕೆಲಸ ಪ್ರೀತಿಯಿಂದ ಮಾಡಬೇಕು. ಗೀತೆಯ ಕರ್ಮ ಯೋಗ ಕೂಡ ಇದನ್ನೇ ಹೇಳುತ್ತದೆ ಎಂದರು.
ಮನಸ್ಸಿನ ಒತ್ತಡವೇ ಅನೇಕ ರೋಗಗಳಿಗೆ ಕಾರಣ. ಅದರಲ್ಲಿ ಹೃದಯಾಘಾತಕ್ಕೂ ಮುಖ್ಯ ಕಾರಣ. ಜೀವನ ಶೈಲಿ ಬದಲಾವಣೆ ಜೊತೆ ಮಾನಸಿಕ ಒತ್ತಡ ಹೆಚ್ಚಾಗಿದ್ದು ಈ ಸಮಸ್ಯೆಗೆ ಮೂಲ ಕಾರಣವಾಗಿದೆ ಎಂದರು.
ಭಗವದ್ಗೀತೆಯೇ ಅಗತ್ಯವಾದ ಇಂದಿನ ಜೀವನ ಶೈಲಿ ಗ್ರಂಥ ಕೊಡುತ್ತದೆ. ಗೀತೆಯ ಜೀವನ ಶೈಲಿ ರೂಢಿಸಿಕೊಂಡರೆ ಇಂಥ ಸಮಸ್ಯೆ ಇಲ್ಲ ಎಂದ ಶ್ರೀಗಳು, ಇಂದು ವ್ಯಾಯಾಮ ಶರೀರಕ್ಕೆ ಕಡಿಮೆ, ಮನಸ್ಸಿಗೆ ಒತ್ತಡ ಜಾಸ್ತಿ. ಮೊದಲು ಹೀಗೆ ಇರಲಿಲ್ಲ. ಶರೀರಕ್ಕೆ ವ್ಯಾಯಾಮ ಹೆಚ್ಚಿತ್ತು. ಒತ್ತಡ ಮನಸ್ಸಿಗೆ ಇರಲಿಲ್ಲ. ಆದರೆ, ಎಲ್ಲರಿಗೂ ಜೀವನ ಶೈಲಿ ಬದಲಾಗಿದ್ದೇ ಹೊಸ ಕಾಯಿಲೆಗೂ ಹೆಚ್ಚಳಕ್ಕೆ ಕಾರಣವಾಗಿದೆ ಎಂದರು.
ಇದನ್ನೂ ಓದಿ:ರಸ್ತೆ ಹಾಳಾಗಲು ಲಾರಿ ಸಂಚಾರವೇ ಕಾರಣ
ಈಚೆಗೆ ಸಣ್ಣ ವಯಸ್ಸಿನಲ್ಲಿ ಹೃದಯಾಘಾತ ಬೆಳವಣಿಗೆ ಹೆಚ್ಚಾಗಿದೆ. ಯುವಕರಿಗೂ ಹೃದಯಾಘಾತ ಆಗುತ್ತಿದೆ. ಹೃದಯಾಘಾತದಲ್ಲಿ ವಯೋಮಾನ ಇಳಿಕೆ ಭಾರತದಲ್ಲಿ ಹೆಚ್ಚು ಆಗುತ್ತಿದೆ. ಇದು ಬಹಳ ಗಂಭೀರ ಆಗುತ್ತಿದೆ.
ಸಹಕಾರಿ ವ್ಯವಸ್ಥೆ ಆಸ್ಪತ್ರೆ ಪ್ರಯೋಗ ಯಶಸ್ವಿಯಾಗಿದ್ದು ಶಿರಸಿಯಲ್ಲಿ. ಜಿಲ್ಲೆಯಲ್ಲಿ ಪ್ರಥಮ ಹೃದಯ ಆರೈಕೆ ವಿಭಾಗ ಆಧುನಿಕವಾಗಿ ಆರಂಭವಾಗಿದೆ. ಕ್ಯಾನ್ಸರ್ ಸೇರಿದಂತೆ ಇತರ ರೋಗಿಗಳಿಗೆ ಚಿಕಿತ್ಸಾ ಘಟಕ ಬೇಕು. ಕಡವೆ ಶ್ರೀಪಾದ ಹೆಗಡೆ ಅವರ ಕನಸು ಈಡೇರಿಸುವ ಕಾರ್ಯ ಆಗಿದೆ ಎಂದೂ ಹೇಳಿದರು.
ಟಿಎಸ್ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ ಶೀಗೇಹಳ್ಳಿ, ಮಹಾಬಲೇಶ್ವರ ಜೋಶಿ ಕಾನಮೂಲೆ, ರವೀಶ ಹೆಗಡೆ, ಡಾ. ರಾಜಾರಾಮ ದೊಡ್ಡೂರು, ಎಂ.ಪಿ.ಹೆಗಡೆ, ಗಜಾನನ ಸು.ಹೆಗಡೆ ಭಂಡೀಮನೆ, ಡಾ. ಜೆ.ಬಿ.ಕಾರಂತ, ಎಸ್.ಎಂ.ಹೆಗಡೆ ಮಾನಿಮನೆ, ರಘುನಂದನ ಹೆಗಡೆ ಇದ್ದರು.
ಸುಪ್ರೀಯಾ ಹೆಗಡೆ ಸಂಗಡಿಗರು ಪ್ರಾರ್ಥಿಸಿದರು. ರಾಮಕೃಷ್ಣ ಹೆಗಡೆ ಕಡವೆ ಸ್ವಾಗತಿಸಿದರು. ವೇದಾ ಹೆಗಡೆ ನೀರ್ನಳ್ಳಿ ಪ್ರಸ್ತಾವಿಕ ಮಾತನಾಡಿದರು. ಶಾಂತಲಾ ಹೆಗಡೆ ನಿರ್ವಹಿಸಿದರು. ಭಾರತೀಯ ಉಡುಗೆ, ಆಸ್ಪತ್ರೆಯಲ್ಲಿ ಗೀತಾ ಪಠಣ, ಪೂರ್ಣಕುಂಭ ಸ್ವಾಗತಗಳು ಗಮನ ಸೆಳೆಯಿತು.