ಧಾರವಾಡದ ನುಗ್ಗಿಕೇರಿಯಲ್ಲಿ ಸುಮಲತಾಗೆ ತುಲಾಭಾರ
Team Udayavani, Jun 16, 2019, 3:07 AM IST
ಧಾರವಾಡ: ಇಲ್ಲಿನ ಪ್ರಸಿದ್ಧ ನುಗ್ಗಿಕೇರಿ ಹನುಮಂತ ದೇವಸ್ಥಾನಕ್ಕೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಶನಿವಾರ ಭೇಟಿ ನೀಡಿ ಮಗ ಅಭಿಷೇಕನ “ಅಮರ’ ಚಿತ್ರದ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅಭಿಮಾನಿಗಳು ಹಮ್ಮಿಕೊಂಡಿದ್ದ ತುಲಾಭಾರ ಸೇವೆಯಲ್ಲಿ ಪಾಲ್ಗೊಂಡು, ಹರಕೆ ತೀರಿಸಿದರು.
ಸುಮಲತಾ ಅವರಿಗೆ 75 ಕೆಜಿ ಸಕ್ಕರೆ, 15 ಕೆಜಿ ತುಪ್ಪ ಹಾಗೂ ಅಭಿಷೇಕ್ ಅವರಿಗೆ 110 ಕೆಜಿ ಸಕ್ಕರೆ, 15 ಕೆಜಿ ತುಪ್ಪದ ತುಲಾಭಾರ ನೆರವೇರಿಸಲಾಯಿತು. ಅಂಬರೀಶ್ ಅಭಿಮಾನಿಯಾದ ಉದ್ಯಮಿ ನಾರಾಯಣ ಕಲಾಲ ತುಲಾಭಾರ ಆಯೋಜಿಸಿದ್ದರು. ದೇವಸ್ಥಾನದ ಪಾರುಪತ್ತೆದಾರ ಪಿ.ಆರ್.ದೇಸಾಯಿ ಪೂಜೆ ನೆರವೇರಿಸಿದರು. ನಟ ದೊಡ್ಡಣ್ಣ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ನಿರ್ದೇಶಕ ಯೋಗರಾಜ್ ಭಟ್, ನಾಗಶೇಖರ ಈ ವೇಳೆ ಹಾಜರಿದ್ದರು.
ಸುಮಲತಾ ಅವರು ದೇವಸ್ಥಾನದಿಂದ ತೆರಳಿದ ಬಳಿಕ ಭಾರತ ಕ್ರಿಕೆಟ್ ತಂಡ ಈ ಬಾರಿಯ ವಿಶ್ವಕಪ್ ಗೆಲ್ಲಲಿ ಹಾಗೂ ಭಾನುವಾರ ಪಾಕಿಸ್ತಾನ ಜೊತೆ ನಡೆಯುವ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಲಿ ಎಂದು ಪ್ರಾರ್ಥಿಸಿ ಭಕ್ತ ವೃಂದದಿಂದ ವಿಶೇಷ ಸಂಕಲ್ಪ ಕೈಗೊಂಡು ಪೂಜೆ ಸಲ್ಲಿಸಲಾಯಿತು.
ಚಿತ್ರಮಂದಿರಕ್ಕೆ ಭೇಟಿ: ಬಳಿಕ, ನಾರಾಯಣ ಕಲಾಲ ಅವರ ಮನೆಗೆ ಭೇಟಿ ನೀಡಿದ ಸುಮಲತಾ, ಉಪಾಹಾರದ ಜತೆಗೆ ಧಾರವಾಡ ಪೇಡ ಸವಿದರು. ನಂತರ ಪದ್ಮ ಚಿತ್ರಮಂದಿರಕ್ಕೆ ಭೇಟಿ ನೀಡಿ, ಮಗ ಅಭಿಷೇಕನ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ, ಕನ್ನಡ ಚಿತ್ರರಂಗ ಬೆಳೆಯುವಂತೆ ಮಾಡಿ ಎಂದು ಮನವಿ ಮಾಡಿದರು. ಅಭಿಮಾನಿಗಳ ಕೋರಿಕೆ ಮೇರೆಗೆ “ಒಲವಿನ ಉಡುಗೊರೆ ಕೊಡಲೇನು’ ಹಾಡು ಹಾಡಿದರು.
ನಟ ಅಭಿಷೇಕ್ ಅವರು, “ಅಮರ’ ಚಿತ್ರದ ಡೈಲಾಗ್ ಹೇಳಿ ರಂಜಿಸಿದರು. ದೊಡ್ಡಣ್ಣ, ರಾಕ್ಲೈನ್ ವೆಂಕಟೇಶ್, ಯೋಗರಾಜ್ ಭಟ್ ಸಹ “ಅಮರ’ ಚಿತ್ರದ ಯಶಸ್ವಿಗೆ ಸಹಕರಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದರು. ಚಿತ್ರಮಂದಿರದ ಪರವಾಗಿ ರಾಜು ಕುಲಕರ್ಣಿ ಹಾಗೂ ಪದ್ಮ ಕುಲಕರ್ಣಿ ಅವರು ಸುಮಲತಾ ಹಾಗೂ ಅಭಿಷೇಕ್ ಅವರನ್ನು ಸನ್ಮಾನಿಸಿದರು.
ಆರೇಳು ವರ್ಷದ ಹಿಂದೆ ಹುಬ್ಬಳ್ಳಿ-ಧಾರವಾಡಕ್ಕೆ ಅಂಬರೀಶ್ ಜತೆ ಬಂದಿದ್ದೆ. ಇದಾದ ಬಳಿಕ ಈಗ ಮಗನೊಂದಿಗೆ ಬಂದಿರುವೆ. ಮಂಡ್ಯದ ಗೆಲುವಿನಲ್ಲಿ ಈ ಭಾಗದ ಜನರ ಬೆಂಬಲವೂ ಇದೆ. ನನ್ನ ಪರವಾಗಿ ಅಭಿಮಾನಿಗಳು ಹರಕೆ ಹೊತ್ತಿದ್ದರು. ಅದಕ್ಕಾಗಿ ಈಗ ಬಂದು ಹರಕೆ ತೀರಿಸಿದ್ದು, ಇದೇ ಮೊದಲ ಬಾರಿ ತುಲಾಭಾರ ಸೇವೆ ಮಾಡಿಸಿಕೊಂಡಿದ್ದೇನೆ. ಮಗ ಅಭಿ ಅಭಿನಯದ “ಅಮರ’ ಚಿತ್ರವೂ ಬಿಡುಗಡೆ ಆಗಿದ್ದು, ಅದರ ಪ್ರಚಾರಾರ್ಥ ಬಂದಿದ್ದು, ಉತ್ತರ ಕರ್ನಾಟಕದಲ್ಲಿ ಇಲ್ಲಿಂದಲೇ ಪ್ರಚಾರ ಆರಂಭಿಸುತ್ತಿದ್ದೇವೆ.
-ಸುಮಲತಾ ಅಂಬರೀಶ್, ಮಂಡ್ಯ ಸಂಸದೆ
ಜೀವನದಲ್ಲಿ ಮೊದಲ ಬಾರಿ ಹುಬ್ಬಳ್ಳಿ ಭಾಗಕ್ಕೆ ಬಂದಿರುವೆ. ನಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ ಅಂತ ಅಭಿಮಾನಿಗಳು ಮಾಡಿದ ತುಲಾಭಾರ ಇದಾಗಿದ್ದು, ನಮಗೆ ಗೊತ್ತೇ ಇಲ್ಲದಂತೆ ಅಭಿಮಾನಿಗಳು ಆಯೋಜನೆ ಮಾಡಿದ್ದಾರೆ.
-ಅಭಿಷೇಕ್ ಅಂಬರೀಶ್, ನಾಯಕ ನಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ಸುಮಲತಾ – ನಾವು ಶಾಶ್ವತ ಶತ್ರುಗಳಲ್ಲ: ಕುಮಾರಸ್ವಾಮಿ
Bangaluru cafe ಸ್ಫೋಟದ ಸಂಚುಕೋರ ಎನ್ಐಎ ಬಲೆಗೆ: ಯಾರಿದು ಷರೀಫ್?
Lok Sabha Election: ಬಿಜೆಪಿ-ಜೆಡಿಎಸ್ “ಜಂಟಿ ಸಮರಾಭ್ಯಾಸ’
Congress; ಕೋಲಾರಕ್ಕೆ ಗೌತಮ್ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!
Politics: ಟಿಕೆಟ್ ಹಂಚಿಕೆ ಮರುಪರಿಶೀಲಿಸಿ ಎಂದ ವೀಣಾ ಬೆಂಬಲಿಗರಿಗೆ ಸಿಎಂ ತಿರುಗೇಟು