ಹೆಜಮಾಡಿ ; ತಿರುವು ಪಡಕೊಂಡ ಅಪಘಾತ ಪ್ರಕರಣ
Team Udayavani, May 23, 2020, 7:07 PM IST
ಪಡುಬಿದ್ರಿ : ಹೆಜಮಾಡಿಯ ಗುಂಡಿ ರಸ್ತೆಯ ಬಳಿ ಮೋರಿಯೊಂದರಲ್ಲಿ ಸ್ಕೂಟರ್ ಸಹಿತ ಪತ್ತೆಯಾದ ಜಾರ್ಖಂಡ್ ಮೂಲದ ಸದಕತ್ತ್ ಅನ್ಸಾರಿ ಎಂಬವರ ಅಪಘಾತ ಪ್ರಕರಣವು ವಿಚಿತ್ರ ತಿರುವನ್ನು ಪಡೆದುಕೊಂಡಿದೆ.
ಗುರುವಾರ ರಾತ್ರಿ ಮನೆಯಲ್ಲೇ ನಡೆದ ಪತಿ ಪತ್ನಿಯ ನಡುವಿನ ವಾಗ್ವಾದವು ತಾರಕ್ಕೇರಿ ಪತ್ನಿಯು ಬಲವಾಗಿ ದೂಡಿರುವುದರಿಂದ ಮನೆಯಲ್ಲಿಯೇ ಸ್ಮ್ರಿತಿ ತಪ್ಪಿ ಬೀಳುವಂತಾಗಿತ್ತು.
ಬಳಿಕ ಆತ ಸತ್ತಿರುವನೆಂದು ಭಾವಿಸಿದ ಪತ್ನಿ ತನ್ನ ಗಂಡನನ್ನು ಆತನ ತಮ್ಮ ಶಫೀಕ್ ಅನ್ಸಾರಿಯ ನೆರವಿನೊಂದಿಗೆ ಗುಂಡಿ ರಸ್ತೆಯ ಮೋರಿಯೊಂದರಲ್ಲಿ ಬಿಟ್ಟು ಬಂದು ಬಳಿಕ ತಡರಾತ್ರಿ ಹುಡುಕುವ ನೆಪದಲ್ಲಿ ಹೋಗಿ ಮೋರಿಯಲ್ಲಿದ್ದ ಸದಕತ್ತ್ ಅನ್ಸಾರಿಯನ್ನು ಅಪಘಾತದಲ್ಲಿ ಗಾಯಗೊಂಡಿದ್ದಾನೆಂದು ಪೊಲೀಸರಿಗೆ ತಿಳಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಶನಿವಾರ ತೀವ್ರಗೊಳಿಸಿದ ತನಿಖೆಯಿಂದ ಪ್ರಕರಣ ಹೊಸ ತಿರುವು ಪಡಕೊಂಡಿದೆ. ಘಟನೆ ಬಗ್ಗೆ ಪಡುಬಿದ್ರಿ ಠಾಣಾ ಪೊಲೀಸರು ತನಿಖೆ ಮುಂದುವರಿಸಿದ್ದು,ಮೃತ ವ್ಯಕ್ತಿಯ ಪತ್ನಿ ಹಾಗು ಸಹೋದರ ಪೊಲೀಸರ ವಶದಲ್ಲಿದ್ದಾರೆ.ಈ ನಡುವೆ ಆಕೆಯ ನಾಲ್ಕು ಪುಟಾಣಿ ಮಕ್ಕಳು ಅನಾಥರಾಗಿದ್ದು,ಅವರನ್ನು ಜಾರ್ಖಂಡ್ ನಲ್ಲಿರುವ ಕುಟುಂಬದ ಮನೆಗೆ ಕಳುಹಿಸಿಕೊಡುವ ಬಗ್ಗೆ ಚಿಂತನೆ ನಡೆದಿದೆ.