ಉದಯಪುರ ಘಟನೆ; ಬುದ್ಧಿಜೀವಿಗಳ ನಾಲಿಗೆಗೆ ಈಗ ಲಕ್ವ ಹೊಡೆದಿದೆಯೇ; ಸಚಿವ ಆರಗ
ಈ ಧೋರಣೆಗಳು ಸಮಾಜಕ್ಕೆ ತುಂಬಾ ಅಪಾಯಕಾರಿ
Team Udayavani, Jun 30, 2022, 12:11 PM IST
ಬೆಂಗಳೂರು: ರಾಜಸ್ಥಾನದ ಉದಯಪುರದಲ್ಲಿ ನಡೆದ ಹೇಯ ಕೃತ್ಯಕ್ಕೆ ರಾಜ್ಯವ್ಯಾಪಿ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.
ಜತೆಗೆ, ಘಟನೆಯನ್ನು ಕಾಂಗ್ರೆಸ್, ಇತರೆ ಪಕ್ಷಗಳು ಉಗ್ರವಾಗಿ ಖಂಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಮಾತನಾಡಿ, ರಾಜಸ್ಥಾನದಲ್ಲಿ ಕಾನೂನು, ಸುವ್ಯವಸ್ಥೆ ಕುಸಿದಿದೆ. ಅಲ್ಲದೆ, ಎಲ್ಲ ರಂಗಗಳಲ್ಲಿ ವಿಫಲವಾಗಿರುವ ರಾಜಸ್ಥಾನದ ಕಾಂಗ್ರೆಸ್ ಸರ್ಕಾ ರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಮೂಲಭೂತವಾದಿ ಜಿಹಾದಿ ಮಾನಸಿಕತೆಯ ವ್ಯಕ್ತಿಗಳಿಂದ ಕನ್ಹಯ್ಯಲಾಲ್ ಹತ್ಯೆ ನಡೆದಿದೆ. ತಮಗೆ ಜೀವ ಬೆದರಿಕೆ ಇರುವ ಕುರಿತು ಕನ್ಹಯ್ಯಲಾಲ್ ಪೊಲೀಸರಿಗೆ ತಿಳಿಸಿದ್ದರು. ಆದರೂ, ಅವರಿಗೆ ಪೊಲೀಸರು ರಕ್ಷಣೆ ನೀಡಿಲ್ಲ. ಈ ಹತ್ಯೆಗೆ ಪೊಲೀಸ್ ವೈಫಲ್ಯ ಮತ್ತು ಆ ರಾಜ್ಯದ ಕಾಂಗ್ರೆಸ್ ಸರಕಾರದ ವಿಫಲತೆಯೇ ಕಾರಣ ಎಂದು ಟೀಕಿಸಿದ್ದಾರೆ.ಕಾಂಗ್ರೆಸ್ ಸರ್ಕಾರವು ಕರ್ನಾಟಕದಲ್ಲೂ ಹಿಂದೆ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯನ್ನೇ ತನ್ನದಾಗಿಸಿಕೊಂಡಿತ್ತು. 24ಕ್ಕೂ ಹೆಚ್ಚು ಹಿಂದೂ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರ ಕೊಲೆಗೆ ಪರೋಕ್ಷವಾಗಿ ಕಾಂಗ್ರೆಸ್ ಕಾರಣವಾಗಿತ್ತು.
ಮತಬ್ಯಾಂಕ್ ರಾಜಕೀಯವನ್ನೇ ಬೆಂಬಲಿಸುವ ಸಿದ್ದರಾ ಮಯ್ಯನವರು ಈ ಕೊಲೆಗಳಿಗೆ ಬೆಂಬಲವಾಗಿ ನಿಂತು ದೇಶವಿರೋಧಿ ಸಂಘಟನೆಗಳ ಮುಖಂಡರ ಮೇಲಿನ ಪ್ರಕರಣಗಳನ್ನು ರದ್ದುಪಡಿಸಿದ್ದರು ಎಂದು ಅರೋಪಿಸಿದ್ದಾರೆ.
ಲಕ್ವಾ ಹೊಡೆದಿದೆಯಾ?: ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಬುದ್ಧಿಜೀವಿಗಳ ನಾಲಿಗೆಗೆ ಈಗ ಲಕ್ವ ಹೊಡೆದಿದೆಯೇ? ಒಂದು ವರ್ಗದ ಬಗ್ಗೆ ತೀವ್ರ ಕಿಡಿ ಮತ್ತೂಂದು ವರ್ಗದ ಮೇಲೆ ವಿಪರೀತ ಪ್ರೀತಿ. ಈ ಧೋರಣೆಗಳು ಸಮಾಜಕ್ಕೆ ತುಂಬಾ ಅಪಾಯಕಾರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬುದ್ಧಿಜೀವಿಗಳು ಎನಿಸಿಕೊಂಡ ಬಹಳ ಜನ ಧಾರವಾಡದ ನುಗ್ಗಿಕೇರಿಯಲ್ಲಿ ಕಲ್ಲಂಗಡಿ ಒಡೆದು ಹಾಕಿದಾಗ ಮಾತನಾಡಿದರು. ಈಗ ಉದಯಪುರ ಹತ್ಯೆ ವಿಚಾರದಲ್ಲಿ ಅವರ ನಾಲಿಗೆಗೆ ಲಕ್ವ ಹೊಡೆದಿದೆಯೇ? ಈಗಲೂ ಮಾತನಾಡಬೇಕು ಅಲ್ಲವೇ? ಯಾವೊಂದು ವರ್ಗದ ವಿಚಾರ ಬಂದಾಗ ಖಂಡಿಸುವುದು, ಮತ್ತೂಂದು ವರ್ಗದ ವಿಚಾರದಲ್ಲಿ ಮೌನಕ್ಕೆ ಶರಣಾಗುವುದು. ಇದು ಎಷ್ಟು ಸರಿ? ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇಸ್ಲಾಂ ಭಯೋತ್ವಾದನೆಯ ಭಾಗ: ಸಚಿವ ವಿ. ಸುನಿಲ್ಕುಮಾರ್ ಮಾತನಾಡಿ, ಉದಯಪುರದಲ್ಲಿ ನಡೆದ ಘಟನೆ ಅತ್ಯಂತ ಹೇಯ ಕೃತ್ಯ. ಒಂದು ಪೋಸ್ಟರ್ ಹೇಳಿಕೆ ಇಂತಹ ಘಟನೆಗೆ ಕಾರಣವಾಗಿದೆ. ಇಸ್ಲಾಮಿನ ಭಯೋತ್ಪಾದನೆ ಮುಂದುವರಿದ ಭಾಗ ಇದಾಗಿದೆ. ಇಸ್ಲಾಂ ಬಗ್ಗೆಯ ಹೇಳಿಕೆ ಕುತ್ತಿಗೆ ಕಡಿಯೋ ಮಟ್ಟಿಗೆ ಆಗಿದೆ ಎಂದರೆ ಇದರ ಹಿಂದೆ ಒಬ್ಬರಲ್ಲ, ಅನೇಕರು ಇದ್ದಾರೆ ಎಂದು ಹೇಳಿದರು. ಇಡೀ ಸಮುದಾಯ ಇಸ್ಲಾಂ ಭಯೋತ್ಪಾದನೆ ವಿರುದ್ಧ ಹೋರಾಡಬೇಕಿದೆ. ಲಘುವಾಗಿ ಖಂಡಿಸುವ ಕೆಲಸ ಕಾಂಗ್ರೆಸ್ ಮತ್ತು ಇತರೆ ಪಕ್ಷ ಮಾಡಿದೆ. ಸಿದ್ದರಾಮಯ್ಯ ಟ್ವೀಟ್ ಮಾಡಿ ಎದೆ ನಡುಗಿತು ಎಂದಿದ್ದಾರೆ. ಇದು ಕೇವಲ ಟ್ವೀಟ್ನಲ್ಲಿ ಮಾತ್ರವಾ ಅಂತ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.